ತಿರುಪತಿ ದೇಗುಲಕ್ಕೆ ಬಾಂಬ್ ಬೆದರಿಕೆ, ಪಾಕ್ ಐಎಸ್ಐ, ಎಲ್ಟಿಟಿಇ ಉಗ್ರ ಸಂಘಟೆನೆ ಷಡ್ಯಂತ್ರದ ಇಮೇಲ್ ಬಂದಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ದೇಗುಲ ಸುತ್ತ ಭಾರಿ ಭದ್ರತೆ ನಿಯೋಜಿಸಲಾಗಿದ್ದು, ತಪಾಸಣೆಯೂ ನಡೆಯುತ್ತಿದೆ.
ತಿರುಪತಿ (ಅ.03) ಭಾರತದ ಅತ್ಯಂತ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಇ ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಪಾಕಿಸ್ತಾನದ ಗುಪ್ತಚರ ವಿಭಾಗ ಐಎಸ್ಐ ಹಾಗೂ ಶ್ರೀಲಂಕಾದ ಎಲ್ಟಿಟಿಇ ಉಗ್ರ ಸಂಘಟನೆಗಳ ಹೆಸರಿನಲ್ಲಿ ಇಮೇಲ್ ಬೆದರಿಕೆ ಬಂದಿದ್ದು, ತಕ್ಷಣವೇ ಭದ್ರತಾ ಪಡೆಗಳು ಕಾರ್ಯಪ್ರವೃತ್ತರಾಗಿದೆ. ಇಮೇಲೆ ಸಂದೇಶ ಬಂದ ಬೆನ್ನಲ್ಲೇ ತಿರುಪತಿ ದೇಗುಲ ಸುತ್ತ ಮುತ್ತ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ತನಿಖಾ ಎಜೆನ್ಸಿಗಳು ಇಮೇಲ್ ಬೆದರಿಕೆ, ಇದರ ಹಿಂದಿನ ಷಡ್ಯಂತ್ರ ಕುರಿತು ತನಿಖೆ ಆರಂಭಿಸಿದೆ. ಸೈಬರ್ ಕ್ರೈಂ ಪೊಲೀಸರು ಇಮೇಲ್ ಬೆದರಿಕೆ ಮೂಲ ಪತ್ತೆಗೆ ಇಳಿದಿದೆ.
ದೇಗುಲಕ್ಕೆ ಆಗಮಿಸಿದ ಬಾಂಬ್ ಸ್ಕ್ವ್ಯಾಡ್ ಹಾಗೂ ಶ್ವಾನದಳ
ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಂದ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇತ್ತ ಪೊಲೀಸರು, ತನಿಖಾ ಎಜೆನ್ಸಿಗಳು ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳ ತಂಡದ ಜೊತೆ ದೇವಸ್ಥಾನಕ್ಕೆ ಆಗಮಿಸಿ ತಪಾಸಣೆ ನಡೆಸಿದ್ದಾರೆ. ದೇವಸ್ಥಾನ ಸುತ್ತ ಮುತ್ತ ತಪಾಸಣೆ ನಡೆಸಲಾಗಿದೆ. ಇದೀಗ ದೇವಸ್ಥಾನ ಸುತ್ತ ಮುತ್ತ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.
ಇಮೇಲ್ ಸಂದೇಶ ಬಂದಿದ್ದು ಎಲ್ಲಿಂದ?
ತಿರುಪತಿ ದೇಗುಲಕ್ಕೆ ಬಾಂಬ್ ಬೆದರಿಕೆ ಬಂದಿರು ಇಮೇಲ್ ಸಂದೇಶದಲ್ಲಿ ತಾವು ಪಾಕಿಸ್ತಾನ ಐಎಸ್ಐ ಹಾಗೂ ಶ್ರೀಲಂಕಾದ ಎಲ್ಟಿಟಿಇ ಉಗ್ರ ಸಂಘಟನೆಗಳಿಂದ ಈ ಸಂದೇಶ ನೀಡುತ್ತಿದ್ದೇವೆ ಎಂದು ಉಲ್ಲೇಖಿಸಲಾಗಿದೆ. ತಿರುಪತಿ ದೇಗುಲಕ್ಕೆ ಬಂದಿರುವ ಬಾಂಬ್ ಬೆದರಿಕೆ ಕರೆ ಹಿಂದೆ ಉಗ್ರ ಸಂಘಟನೆಗಳ ಷಡ್ಯಂತ್ರ ಕುರಿತು ತನಿಖೆ ತೀವ್ರಗೊಂಡಿದೆ.
ಇಮೇಲ್ನಲ್ಲಿ ಏನಿದೆ?
ಪಾಕಿಸ್ತಾನದ ಗುಪ್ರಚರ ಇಲಾಖೆ ಐಎಸ್ಐ ಘಟಕ ಹಾಗೂ ಶ್ರೀಲಂಕಾದ ಮಾಜಿ ಎಲ್ಟಿಟಿಇ ಉಗ್ರ ಸಂಘಟನೆ ಒಗ್ಗಟ್ಟಾಗಿ ಈ ಕಾರ್ಯಾಚರಣೆ ನಡೆಸುತ್ತಿದೆ. ಇದಕ್ಕೆ ಐಪಿಎಸ್ ಅಧಿಕಾರಿ ಡೇವಿಡ್ಸನ್ ದೇವರ್ಸಿವರ್ಥಂ ಗುಪ್ತಚರ ವಿಭಾಗದ ಎಡಿಜಿಪಿ ಆಗಿದ್ದಾಗ, ತಮ್ಮ ಪತ್ನಿಯ ಟ್ರಾವೆಲ್ ಎಜೆನ್ಸಿ ಮೂಲಕ ನಕಲಿ ಪಾಸ್ಪೋರ್ಟ್ ನೀಡಿದ್ದಾರೆ. ಭಾರತದ ತೀರ್ಥ ಕ್ಷೇತ್ರದಲ್ಲಿ ಕಾರ್ಯಾಚರಣೆ ನಡೆಸಲು ಕೊಸೊವಾದಲ್ಲಿ ಮೊಸಾದ್ ನೇತೃತ್ವದಲ್ಲಿ ತರಬೇತಿ ನೀಡಲಾಗಿದೆ. ತಿರುಪತಿಯಲ್ಲಿ ಶುಕ್ರವಾರ ಬಾಂಬ್ ಸ್ಪೋಟಗೊಳ್ಳಲಿದೆ. ತಮಿಳುನಾಡಿನ ಸಮಸ್ಯೆಗಳನ್ನು ತಿರುಪತಿಗೆ ಸ್ಥಳಾಂತರ ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ ಎಂದು ಇಮೇಲ್ನಲ್ಲಿ ಹೇಳಲಾಗಿದೆ.
ತಿರುಪತಿ ಬಾಂಬ್ ಬೆದರಿಕೆ ಗಂಭೀರವಾಗಿ ಪರಿಗಣಿಸಿದ ತನಿಖಾ ಏಜೆನ್ಸಿ
ತಿರುಪತಿ ಬಾಂಬ್ ಬೆದರಿಕೆ ಪ್ರಕರಣವನ್ನು ತನಿಖಾ ಎಜೆನ್ಸಿ ಗಂಭೀರವಾಗಿ ಪರಿಗಣಿಸಿದೆ. ಸದ್ಯ ದೇಗುಲದ ಸುತ್ತ ಮುತ್ತಲಿನ ಕಾರ್ಯಾಚರಣೆ ಪೂರ್ಣಗೊಂಡಿದೆ. ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ.
ಇತ್ತೀಚೆಗೆ ಸತತ ಬೆದರಿಕೆ ಸಂದೇಶ
ಇತ್ತೀಚೆಗೆ ಸತತ ಬಾಂಬ್ ಬೆದರಿಕೆ ಸಂದೇಶ ಭಾರತಕ್ಕೆ ತಲೆನೋವಾಗಿದೆ. ಶಾಲೆಗಳಲ್ಲಿ ಬಾಂಬ್ ಬೆದರಿಕೆ, ವಿಮಾನ ನಿಲ್ದಾಣದಲ್ಲಿ ಬಾಂಬ ಬೆದರಿಕೆ ಸೇರಿದಂತೆ ಹಲವು ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿದೆ. ಈ ಹುಸಿ ಬಾಂಬ್ ಬೆದರಿಕೆಯಿಂದ ಅಪಾರ ನಷ್ಟವೂ ಸಂಭವಿಸುತ್ತಿದೆ.
