ತೆಲಂಗಾಣದಲ್ಲಿ ಮಹಿಳೆಯೊಬ್ಬಳು ಗಂಡನನ್ನು ಯೂಟ್ಯೂಬ್ ವೀಡಿಯೋ ನೋಡಿ ಕೊಲೆ ಮಾಡಿದ್ದು, ಈ ಕೊಲೆ ಪ್ರಕರಣ ನಗರವನ್ನು ಬೆಚ್ಚಿ ಬೀಳಿಸಿದೆ.

ಗಂಡ ಹೆಂಡತಿಯನ್ನು ಹೆಂಡತಿ ಗಂಡನನ್ನು ಕೊಲೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಅದೇ ರೀತಿ ತೆಲಂಗಾಣದಲ್ಲಿ ಮಹಿಳೆಯೊಬ್ಬಳು ಗಂಡನನ್ನು ಯೂಟ್ಯೂಬ್ ವೀಡಿಯೋ ನೋಡಿ ಕೊಲೆ ಮಾಡಿದ್ದು, ಈ ಕೊಲೆ ಪ್ರಕರಣ ನಗರವನ್ನು ಬೆಚ್ಚಿ ಬೀಳಿಸಿದೆ. ಅನೈತಿಕ ಸಂಬಂಧದ ಕಾರಣಕ್ಕೆ ಈ ಕೊಲೆ ನಡೆದಿದೆ. ಸಂಪತ್ ಕೊಲೆಯಾದ ಪತಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಂಪತ್ ಪತ್ನಿ ರಮಾದೇವಿ ಹಾಗೂ ಆಕೆಯ ಲವರ್‌ ರಾಜಯ್ಯ ಹಾಗೂ ಆತನ ಗೆಳೆಯ ಶ್ರೀನಿವಾಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಕುಡಿತಕ್ಕೆ ದಾಸನಾಗಿದ್ದ ಗಂಡ ಸಂಪತ್:

ಕೊಲೆಯಾದ ಸಂಪತ್ ಲೈಬ್ರರಿಯೊಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ, ಕುಡಿತಕ್ಕೆ ದಾಸನಾಗಿದ್ದ ಆತ ದಿನಾ ಕುಡಿದು ಬಂದು ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಇದೇ ಕಾರಣಕ್ಕೆ ಗಂಡ ಹೆಂಡತಿ ಮಧ್ಯೆ ದಿನವೂ ಜಗಳಗಳಾಗುತ್ತಿದ್ದವು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಮಕ್ಕಳನ್ನು ಸಾಕುವುದಕ್ಕೆ ಈತನ ಪತ್ನಿ ರಮಾದೇವಿ ಪುಟ್ಟದಾದ ಟಿಫನ್ ಅಂಗಡಿ ಇಟ್ಟಿದ್ದಳು. ಅಂಗಡಿ ತೆರೆದ ನಂತರ ರಮಾದೇವಿಗೆ ಇತ್ತೀಚೆಗೆ 50 ವರ್ಷದ ಕರಣ್ ರಾಜಯ್ಯ ಎಂಬಾತನ ಪರಿಚಯವಾಗಿತ್ತು. ಈ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿದೆ.

ಯೂಟ್ಯೂಬ್ ವೀಡಿಯೋ ನೋಡಿ ಕೊಲೆಗೆ ಸಂಚು:

ಇತ್ತ ಕುಡಿತಕ್ಕೆ ದಾಸನಾಗಿದ್ದ ಪತಿ ಸಂಪತ್‌ನಿಗೆ ಒಂದು ಗತಿ ಕಾಣಿಸಬೇಕು ಎಂದು ರಮಾದೇವಿ ನಿರ್ಧರಿಸಿದ್ದು, ಇದಕ್ಕಾಗಿ ಆಕೆ ಯೂಟ್ಯೂಬ್‌ನಲ್ಲಿ ಸುಲಭವಾಗಿ ಕೊಲೆ ಮಾಡುವ ಬಗ್ಗೆ ಹುಡುಕಾಟ ನಡೆಸಿದ್ದಾಳೆ. ಈ ವೇಳೆ ಅಲ್ಲಿ ಕೀಟನಾಶಕ ಸುರಿದು ಮನುಷ್ಯರನ್ನು ಕೊಲ್ಲುವ ಬಗ್ಗೆ ಆಕೆಗೆ ಐಡಿಯಾ ಸಿಕ್ಕಿದೆ. ಅದರಂತೆ ಆಕೆ ಈ ಯೋಜನೆಯನ್ನು ತನ್ನ ಲವರ್ ರಾಜಯ್ಯ ಜೊತೆ ಹಂಚಿಕೊಂಡಿದ್ದಾರೆ. ನಂತರ ಇಬ್ಬರು ಸೇರಿ ಸಂಪತ್ ಕೊಲೆಗೆ ಸಂಚು ರೂಪಿಸಿದ್ದಾರೆ.

ಸಂಪತ್ ಕಿವಿಗೆ ಕೀಟನಾಶಕ ಸುರಿದ ಪಾಪಿಗಳು:

ಇದಾದ ನಂತರ ಸಂಪತ್‌ಗೆ ರಾಮದೇವಿಯ ಗೆಳೆಯ ರಾಜಯ್ಯ ಕಂಠಪೂರ್ತಿ ಕುಡಿಸಿದ್ದಾನೆ. ಕುಡಿದು ಟೈಟ್ ಆಗಿದ್ದ ಸಂಪತ್ ಮೈಮೇಲಿನ ಪ್ರಜ್ಞೆ ಕಳೆದುಕೊಂಡಿದ್ದಾನೆ. ಇದಾದ ನಂತರ ರಮಾದೇವಿ ಹಾಗೂ ಆಕೆಯ ಗೆಳೆಯ ರಾಜಯ್ಯ ಸಂಪತ್ ಕಿವಿಗೆ ಕೀಟನಾಶಕ ಹಾಕಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂತರ ಈ ರಮಾದೇವಿ ಗಂಡ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ನಂತರ ಆಗಸ್ಟ್ 1 ರಂದು ಸಂಪತ್ ಮೃತದೇಹ ಪತ್ತೆಯಾಗಿದೆ. ಇದಾದ ನಂತರ ರಮಾದೇವಿ ಹಾಗೂ ರಾಜಯ್ಯ ಸಂಪತ್ ಮರಣೋತ್ತರ ಪರೀಕ್ಷೆ ನಡೆಸುವುದು ಬೇಡ ಎಂದು ಪೊಲೀಸರಿಗೆ ಹೇಳಿದ್ದಾರೆ. ಇದರಿಂದ ಪೊಲೀಸರಿಗೆ ಅನುಮಾನ ಮೂಡಿದೆ. ಇದರ ಮಧ್ಯೆ ಮೃತ ಸಂಪತ್‌ ಪುತ್ರನೂ ತಂದೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರಿಗೆ ತನಿಖೆ ಮಾಡುವಂತೆ ಮನವಿ ಮಾಡಿದ್ದಾನೆ ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಇತ್ತ ರಮಾದೇವಿ ಹಾಗೂ ರಾಜಯ್ಯ ಮೇಲೆ ಅನುಮಾನ ಹೊಂದಿದ್ದ ಪೊಲೀಸರು ಅವರ ಕಾಲ್ ರೆಕಾರ್ಡ್ ಹಾಗೂ ಸಮೀಪದ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ತಪಾಸಣೆ ನಡೆಸಿದ್ದಾರೆ. ನಂತರ ರಮಾದೇವಿ, ಆಕೆಯ ಗೆಳೆಯ ರಾಜಯ್ಯ ಹಾಗೂ ಆತನ ಸ್ನೇಹಿತ ಶ್ರೀನಿವಾಸ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಸಂಪತ್‌ನನ್ನು ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ನಂತರ ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.