‘ರೈತರು ಸಾಲ ಮನ್ನಾ ಮಾಡಿ ಎಂಬ ಬೇಡಿಕೆಯನ್ನು ಚಟವಾಗಿಸಿಕೊಂಡಿದ್ದಾರೆ. ಎಷ್ಟಂತ ಸಾಲ ಮನ್ನ ಮಾಡುವುದಕ್ಕಾಗುತ್ತದೆ? 2024ರಲ್ಲಿ ಚುನಾವಣೆ ಗೆಲ್ಲುವುದಕ್ಕೋಸ್ಕರ ಹೇಳಿದ್ದೆವು. ಅದರ ಈಡೇರಿಕೆ ಕಷ್ಟ’ ಎಂದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ ಹೇಳಿದ್ದಾರೆ.

ಮುಂಬೈ: ‘ರೈತರು ಸಾಲ ಮನ್ನಾ ಮಾಡಿ ಎಂಬ ಬೇಡಿಕೆಯನ್ನು ಚಟವಾಗಿಸಿಕೊಂಡಿದ್ದಾರೆ. ಎಷ್ಟಂತ ಸಾಲ ಮನ್ನ ಮಾಡುವುದಕ್ಕಾಗುತ್ತದೆ? 2024ರಲ್ಲಿ ಚುನಾವಣೆ ಗೆಲ್ಲುವುದಕ್ಕೋಸ್ಕರ ಹೇಳಿದ್ದೆವು. ಅದರ ಈಡೇರಿಕೆ ಕಷ್ಟ’ ಎಂದು ಮಹಾರಾಷ್ಟ್ರ ಡಿಸಿಎಂ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್‌ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

ರ್‍ಯಾಲಿಯಲ್ಲಿ ಮಾತನಾಡಿದ ಅಜಿತ್‌, ‘ಈ ಹಿಂದೆ ಶರದ್‌ ಪವಾರ್‌ ಅವಧಿಯಲ್ಲಿ ಮನ್ನಾ ಮಾಡಲಾಗಿತ್ತು. ದೇವೇಂದ್ರ ಫಡ್ನವೀಸ್‌ ಮತ್ತು ಉದ್ಧವ್‌ ಠಾಕ್ರೆ ಸಿಎಂ ಆಗಿದ್ದಾಗೆಲ್ಲ ಸಾಲ ಮನ್ನಾ ಆಗಿದೆ. ಅದನ್ನು ಪ್ರತಿ ಬಾರಿ ಮಾಡಲಾಗುವುದಿಲ್ಲ. ಈಗಾಗಲೇ ಶೂನ್ಯ ಬಡ್ಡಿದರಲ್ಲಿ ಸಾಲ ನೀಡಲಾಗುತ್ತಿದೆ. ಆದರೂ ಸಾಲ ಮನ್ನಾ ಮಾಡಬೇಕೆಂದರೆ ಹೇಗೆ?’ ಎಂದು ಪ್ರಶ್ನಿಸಿದರು.

ಚುನಾವಣೆ ಗೆಲ್ಲುವುದಕ್ಕೋಸ್ಕರ ಘೋಷಣೆ

‘ಇದು ಒಳ್ಳೆ ಅಭ್ಯಾಸವಲ್ಲ. 2024ರಲ್ಲಿ ವಿಧಾನಸಭೆ ಚುನಾವಣೆ ಗೆಲ್ಲುವುದಕ್ಕೋಸ್ಕರ ಘೋಷಣೆ ಮಾಡಿದ್ದೆವು. ಈಗ ಅದನ್ನೆಲ್ಲ ಮಾಡುವುದಕ್ಕೆ ಸಾವಿರಾರು ಕೋಟಿ ರು. ಬೇಕಾಗುತ್ತದೆ’ ಎಂದು ಹೇಳಿದರು.

ವಿಪಕ್ಷಗಳ ಕಿಡಿ:

ಅಜಿತ್‌ ಪವಾರ್‌ ಹೇಳಿಕೆಗೆ ವಿಪಕ್ಷಗಳು ಕಿಡಿಕಾರಿದ್ದು, ‘ರೈತರು ಭಿಕ್ಷುಕರಲ್ಲ. ನೀವು ಅವರಿಗೆ ಭಿಕ್ಷೆ ಕೊಡುತ್ತಿಲ್ಲ. ಅವರ ಅನ್ನವೇ ನೀವು ತಿನ್ನುತ್ತಿರುವುದು. ಇದು ದುರಹಂಕಾರದ ಪರಮಾವಧಿ’ ಎಂದು ಹೇಳಿವೆ.