ಕ। ಸೋಫಿಯಾ ಖುರೇಶಿ, ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಮತ್ತು ಕಮಾಂಡರ್‌ ಪ್ರೇರಣಾ ದೇವಸ್ಥಾಲಿ ಅವರು ‘ಕೌನ್‌ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ 25 ಲಕ್ಷ ರು.ಬಹುಮಾನ ಗೆದ್ದಿದ್ದಾರೆ.

 ಮುಂಬೈ: ಆಪರೇಷನ್‌ ಸಿಂದೂರದ ವೇಳೆ ಸೇನಾ ಪಡೆಗಳನ್ನು ಪ್ರತಿನಿಧಿಸಿ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದ ಕ। ಸೋಫಿಯಾ ಖುರೇಶಿ, ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಮತ್ತು ಕಮಾಂಡರ್‌ ಪ್ರೇರಣಾ ದೇವಸ್ಥಾಲಿ ಅವರು ‘ಕೌನ್‌ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ 25 ಲಕ್ಷ ರು.ಬಹುಮಾನ ಗೆದ್ದಿದ್ದಾರೆ.

ನಟ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ದಿನದ ವಿಶೇಷದಂದು ಭಾಗವಹಿಸಿದ್ದ ಮೂವರು, 25 ಲಕ್ಷದ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ್ದಾರೆ. ಬಳಿಕ ಸಮಯದ ಸೈರನ್‌ ಮೊಳಗಿದ್ದರಿಂದ ಪ್ರಶ್ನೆ ಮುಗಿದಿದೆ.

ಯಾವುದು ಕಡೆಯ ಪ್ರಶ್ನೆ:

ಇಂಗ್ಲೆಂಡ್‌ನ ಲೈಸಿಸ್ಟರ್‌ನಲ್ಲಿರುವ ಆರ್ಚ್‌ ಆಫ್‌ ರಿಮೆಂಬ್ರೆನ್ಸ್‌ನ ಶಿಲ್ಪಿ ಭಾರತದಲ್ಲಿಯೂ ಸ್ಮಾರಕ ನಿರ್ಮಿಸಿದ್ದಾರೆ. ಅದು ಯಾವುದು ಎಂದು ಕೇಳಲಾಗಿತ್ತು. ಇದಕ್ಕೆ ಆಯ್ಕೆಯಾಗಿ ಮುಂಬೈನ ವಿಕ್ಟೋರಿಯಾ ಮೆಮೋರಿಯಲ್‌, ದೆಹಲಿಯ ಇಂಡಿಯಾ ಗೇಟ್‌ ಮತ್ತು ಫೋರ್ಟ್‌ ಸೆಂಟ್‌ ಜಾರ್ಜ್‌ ಕೊಡಲಾಗಿತ್ತು. ಮೂವರು ಜನರ ಅಭಿಪ್ರಾಯ ಸಂಗ್ರಹಿಸಿ ಇಂಡಿಯಾ ಗೇಟ್‌ ಎಂದು ಸರಿಯಾಗಿ ಉತ್ತರಿಸಿ 25 ಲಕ್ಷ ರು.ಗಳನ್ನು ಗೆದ್ದರು. ಈ ಹಣವನ್ನು ಸೇನಾಪಡೆಯ ಕಲ್ಯಾಣ ನಿಧಿಗೆ ಸಮರ್ಪಿಸುವುದಾಗಿ ಮೂವರು ಹೇಳಿದರು.