ವೈರಿಗಳನ್ನು ನಿರ್ದಯವಾಗಿ ಸೆದೆಬಡಿಯುವ ಭಾರತ ಮಾನವೀಯತೆ ಮರೆಯದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಇಸ್ಲಾಮಾಬಾದ್‌: ವೈರಿಗಳನ್ನು ನಿರ್ದಯವಾಗಿ ಸೆದೆಬಡಿಯುವ ಭಾರತ ಮಾನವೀಯತೆ ಮರೆಯದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಹಲ್ಗಾಂ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಜತೆಗಿನ ಸಿಂಧು ಜಲ ಒಪ್ಪಂದ ಸ್ಥಗಿತಗೊಂಡಿದ್ದರೂ ಸಿಂಧು ಉಪನದಿಯಾದ ತವೀ ನದಿ ಹರಿಯುವ ಪ್ರದೇಶದಲ್ಲಿ ಪ್ರವಾಹ ಸೃಷ್ಟಿಯಾಗುವ ಬಗ್ಗೆ ಭಾರತ ಮಾಹಿತಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಇದನ್ನು ದೃಢಪಡಿಸಿದ್ದು, ಆ.24ರಂದು ಭಾರತ ಮುನ್ಸೂಚನೆ ನೀಡಿತ್ತು ಎಂದಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತವು ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮಾರ್ಗದಲ್ಲಿ ಇಂತಹ ಸಂದೇಶ ನೀಡಿದಂತಾಗಿದೆ.

ಸಿಂಧು ಒಪ್ಪಂದ ಜಾರಿಯಲ್ಲಿಲ್ಲದ ಕಾರಣ, ಅದರ ಉಪನದಿಗಳ ನೀರನ್ನು ಯಥೇಚ್ಛವಾಗಿ ಬಳಸುವ ಸ್ವಾತಂತ್ರ್ಯ ಭಾರತಕ್ಕಿದೆ. ಅಂತೆಯೇ, ನದಿಗಳ ಕುರಿತ ಮಾಹಿತಿಯನ್ನು ಪಾಕ್‌ಗೆ ನೀಡುವ ಅವಶ್ಯಕತೆ ಇಲ್ಲ. ಹೀಗಿದ್ದರೂ, ಜಮ್ಮುವಿನಲ್ಲಿ ಹರಿದು ಪಾಕ್‌ಗೆ ಸಾಗುವ ಹರಿವ ತವೀ ನದಿಯಲ್ಲಿ ಪ್ರವಾಹ ಉಂಟಾಗಬಹುದು ಎಂಬ ಮಾಹಿತಿಯನ್ನು ಪಾಕ್‌ನಲ್ಲಿರುವ ಭಾರತದ ದೂತಾವಾಸದ ಮೂಲಕ ರವಾನಿಸಲಾಗಿದೆ. ಬಳಿಕ ಇದರ ಆಧಾರದಲ್ಲಿ ಪಾಕ್‌ ಅಧಿಕಾರಿಗಳು ಎಚ್ಚರಿಕೆ ಜಾರಿ ಮಾಡಿದ್ದಾರೆ.ತವಿ ನದಿ ಹಿಮಾಲಯದಲ್ಲಿ ಹುಟ್ಟಿ ಜಮ್ಮು ಮೂಲಕ ಸಾಗಿ ಪಾಕ್‌ ಸೇರುತ್ತದೆ.