ಒಂದು ಕಡೆ ಭಾರತೀಯ ಸೇನೆ ಕಾರ್ಯಾಚರಣೆಗಳನ್ನು ನಡೆಸಿ ಉಗ್ರಜಂತುಗಳನ್ನು ಹುಡುಕಿಹುಡುಕಿ ಹೊಡೆಯುತ್ತಿದ್ದರೆ, ಇನ್ನೊಂದು ಅಡೆ ಅವರೆಲ್ಲ ತಮ್ಮ ತಂತ್ರಗಳು ಮತ್ತು ಇರುವ ತಾಣಗಳನ್ನು ಬದಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ

ಶ್ರೀನಗರ: ಒಂದು ಕಡೆ ಭಾರತೀಯ ಸೇನೆ ಕಾರ್ಯಾಚರಣೆಗಳನ್ನು ನಡೆಸಿ ಉಗ್ರಜಂತುಗಳನ್ನು ಹುಡುಕಿಹುಡುಕಿ ಹೊಡೆಯುತ್ತಿದ್ದರೆ, ಇನ್ನೊಂದು ಅಡೆ ಅವರೆಲ್ಲ ತಮ್ಮ ತಂತ್ರಗಳು ಮತ್ತು ಇರುವ ತಾಣಗಳನ್ನು ಬದಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ‘ಮೊದಲೆಲ್ಲಾ ಜಮ್ಮು ಕಾಶ್ಮೀರದಲ್ಲಿ ಸ್ಥಳೀಯರ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದ ಭಯೋತ್ಪಾದಕರು ಈಗ ದಟ್ಟ ಅರಣ್ಯ, ನದಿ ತಟದ ಬಳಿ ಬಂಕರ್‌ ನಿರ್ಮಿಸಿಕೊಂಡು ಅಡಗಿ ಕೂರುತ್ತಿದ್ದಾರೆ’ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

‘ಈಗೀಗ ಸ್ಥಳೀಯರು ಉಗ್ರರಿಗೆ ಆಶ್ರಯ ಒದಗಿಸುವ ಬದಲು, ಸೇನಾ ಮಾಹಿತಿದಾರರಾಗಿದ್ದಾರೆ. ಈ ಕಾರಣದಿಂದ ತಮ್ಮ ನೆಲೆ ಬದಲಾಯಿಸಿರುವ ಉಗ್ರರು ಎತ್ತರದ ಪ್ರದೇಶಗಳಲ್ಲಿ ಭೂಗತ ಸುರಂಗಗಳನ್ನು ತೋಡಿಕೊಂಡು, ಅಲ್ಲೇ ತಮಗೆ ಬೇಕಾಗುವ ಆಹಾರ ಪದಾರ್ಥಗಳು, ಒಲೆ, ಕುಕ್ಕರ್‌, ಶಸ್ತ್ರಾಸ್ತ್ರ, ಮದ್ದುಗುಂಡು ಇತ್ಯಾದಿಗಳನ್ನು ಸಂಗ್ರಹಿಸಿಡುತ್ತಿದ್ದಾರೆ. ಇದು ದಟ್ಟ ಅರಣ್ಯಗಳಿರುವ ಕುಲ್ಗಾಂ, ಶೋಫಿಯಾನ್‌, ಪಿರ್‌ ಪಾಂಜಲ್‌ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸೇನೆಯ ಪ್ರತಿತಂತ್ರ:

ಬಿಲಗಳಲ್ಲಿ ಸೇರಿಕೊಂಡಿರುವ ಉಗ್ರರ ಪತ್ತೆಗೆ ಸೇನೆಯೂ ಪ್ರತಿತಂತ್ರ ಹೆಣೆಯುತ್ತಿದೆ. ನೆಲದಡಿಯಿರುವ ಅಡಗುತಾಣಗಳ ಪತ್ತೆಗೆ ಜಿಪಿಆರ್‌ ಅಳವಡಿಸಲಾದ ಡ್ರೋನ್‌, ಸೆಸ್ಮಿಕ್‌ ಸೆನ್ಸಾರ್‌ ಬಳಸಲು ಯೋಜನೆ ರೂಪಿಸಲಾಗುತ್ತಿದೆ. ಡ್ರೋನ್‌ಗಳು ಎತ್ತರದ ಪ್ರದೇಶಗಳು ಮತ್ತು ದಟ್ಟಡವಿಗಳನ್ನು ಸುಲಭವಾಗಿ ಪ್ರವೇಶಿಸಬಹುದಾಗಿದ್ದು, ಸೆನ್ಸಾರ್‌ಗಳು ಭೂರಚನೆಯಲ್ಲಿನ ಬದಲಾವಣೆಗಳನ್ನು ಪತ್ತೆ ಮಾಡಬಲ್ಲವು.