ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ದಾಳಿ ನಡೆದಿದ್ದು, ಆರೋಪಿಯನ್ನು ಗುಜರಾತ್ನ ನಿವಾಸಿ ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿ ದಾಳಿ ನಡೆಸಲು ಯತ್ನಿಸುತ್ತಿರುವುದು ಕಂಡುಬಂದಿದೆ. ಆದರೆ ಈ ಬಗ್ಗೆ ಆರೋಪಿಯ ತಾಯಿ ಹೇಳೋದೇ ಬೇರೆ! ಪೂರ್ಣ ಓದಿ.
ದೆಹಲಿ (ಆ.20): ಬೆಳಿಗ್ಗೆ 8:15ರ ಸುಮಾರಿಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ನಡೆದ ದಾಳಿಯ ನಂತರ ದೆಹಲಿ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಗುಜರಾತ್ನ ನಿವಾಸಿ ಸಕಾರಿಯಾ ರಾಜೇಶ್ಭಾಯ್ ಖಿಮ್ಜಿಭಾಯ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಿಎಂ ರೇಖಾ ಗುಪ್ತಾ ಅವರು ದಾಳಿಯ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, 'ಈ ದಾಳಿ ಕೇವಲ ನನ್ನ ಮೇಲೆ ಮಾತ್ರವಲ್ಲ, ದೆಹಲಿಯ ಜನರ ಕಲ್ಯಾಣಕ್ಕಾಗಿ ನಾವು ಹೊಂದಿರುವ ಸಂಕಲ್ಪದ ಮೇಲಿನ ಹೇಡಿತನದ ಪ್ರಯತ್ನವಾಗಿದೆ. ಆರಂಭದಲ್ಲಿ ಆಘಾತಕ್ಕೊಳಗಾದರೂ, ಈಗ ನಾನು ಉತ್ತಮವಾಗಿದ್ದೇನೆ; ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಅವರು ತಮ್ಮ ಹಿತೈಷಿಗಳಿಗೆ ಭೇಟಿಯಾಗಲು ಚಿಂತಿಸದಂತೆ ವಿನಂತಿಸಿದ್ದಾರೆ.
'ನನ್ನ ಜನಸೇವೆಯ ಸಂಕಲ್ಪ ಎಂದಿಗೂ ಮುರಿಯಲು ಸಾಧ್ಯವಿಲ್ಲ: ಸಿಎಂ ರೇಖಾ ಗುಪ್ತಾ
ಇಂತಹ ದಾಳಿಗಳು ನನ್ನ ಚೈತನ್ಯವನ್ನು ಎಂದಿಗೂ ಕಸಿಯಲು ಸಾಧ್ಯವಿಲ್ಲ. ಈಗ ನಾನು ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಯಿಂದ ಜನರೊಂದಿಗೆ ಕೆಲಸ ಮಾಡುತ್ತೇನೆ. ಸಾರ್ವಜನಿಕ ಸಮಸ್ಯೆಗಳ ಪರಿಹಾರವು ಮೊದಲಿನಂತೆ ಗಂಭೀರತೆಯಿಂದ ಮುಂದುವರಿಯುತ್ತದೆ. ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಬೆಂಬಲಕ್ಕೆ ಕೃತಜ್ಞೆ ಎಂದು ಸಿಎಂ ರೇಖಾ ಗುಪ್ತಾ ಹೇಳಿದ್ದಾರೆ.
ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆ:
ಪೊಲೀಸರ ಪ್ರಕಾರ, ಸಿಎಂ ನಿವಾಸದ ಕಡೆಗೆ ದಾಳಿ ನಡೆಸಲು ಆರೋಪಿ ರೆಕ್ಸಿಂಗ್ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ವೀಡಿಯೊದಲ್ಲಿ ಆತ ಸಿಎಂ ನಿವಾಸದತ್ತ ಹೋಗಿ ದಾಳಿಗೆ ಯತ್ನಿಸುತ್ತಿರುವುದು ಕಂಡುಬಂದಿದೆ.
ಆರೋಪಿಯ ತಾಯಿ ಹೇಳಿದ್ದೇನು?
ಆರೋಪಿ ಸಕಾರಿಯಾ ರಾಜೇಶ್ಭಾಯ್ನ ತಾಯಿ ಭಾನುಬೆನ್ ಸಕಾರಿಯಾ ಪ್ರತಿಕ್ರಿಯಿಸಿದ್ದು, ನನ್ನ ಮಗ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಅವನು ಪ್ರಾಣಿ ಪ್ರಿಯನಾಗಿದ್ದು, ಬೀದಿ ನಾಯಿಗಳ ಕುರಿತು ಸುಪ್ರೀಂ ಕೋರ್ಟ್ನ ಆದೇಶದ ವಿರುದ್ಧ ಪ್ರತಿಭಟಿಸಲು ದೆಹಲಿಗೆ ತೆರಳಿದ್ದ ಎಂದು ತಿಳಿಸಿದ್ದಾರೆ. 'ಅವನಿಗೆ ನಾಯಿಗಳು, ಹಸುಗಳು ಮತ್ತು ಪಕ್ಷಿಗಳೆಂದರೆ ತುಂಬಾ ಪ್ರೀತಿ. ಸುಪ್ರೀಂ ಕೋರ್ಟ್ನ ಆದೇಶದಿಂದ ಅವನು ಅಸಮಾಧಾನಗೊಂಡಿದ್ದ' ಎಂದು ಅವರು ಹೇಳಿದ್ದಾರೆ.
ಸದ್ಯ ದೆಹಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಈ ಘಟನೆಯ ಹಿಂದಿನ ಕಾರಣಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ.
