ಸಿಎಂ ಯೋಗಿ ಮಹತ್ವದ ನಿರ್ಧಾರ ಘೋಷಣೆ, ಮುಸ್ತಾಫಾಬಾದ್ ಗ್ರಾಮ ಇನ್ನು ಕಬೀರ್ ಧಾಮ ಎಂದು ಮರುನಾಮಕರಣ ಮಾಡಲಾಗಿದೆ. ಮುಸ್ಲಿಮರೇ ಇಲ್ಲದ ಗ್ರಾಮಕ್ಕೆ ಮುಸ್ಲಿಂ ಹೆಸರಿಗಿಂತ ಅಲ್ಲಿನ ಸಂಸ್ಕೃತಿ, ಐತಿಹಾಸಿಕ ಪರಂಪರೆಗೆ ಅನುಗುಣವಾಗಿರಬೇಕು ಎಂದಿದ್ದಾರೆ.
ಲಖನೌ (ಅ.27) ಉತ್ತರ ಪ್ರದೇಶ ಮುಖ್ಯಮಂತ್ರಿ ತಮ್ಮ ಖಡಕ್ ನಿರ್ಧಾರ, ಪಾರದರ್ಶಕ ಆಡಳಿತದಿಂದ ಗುರುತಿಸಿಕೊಂಡಿದ್ದಾರೆ. ಮಾಫಿಯಾ ರಾಜ್ ಅಂತ್ಯಗೊಳಿಸಿ ಉತ್ತರ ಪ್ರದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಇದೇ ವೇಳೆ ಯೋಗಿ ಆದಿತ್ಯನಾಥ್ ಹಲವು ನಗರ, ಪಟ್ಟಣ, ಜಿಲ್ಲೆಗಳ ಹೆಸರನ್ನು ಮರುನಾಮಕರಣ ಮಾಡಿದ್ದಾರೆ. ಇದು ಪರ ವಿರೋಧಕ್ಕೂ ಕಾರಣವಾಗಿದೆ. ಇದರ ನಡುವೆ ಯೋಗಿ ಆದಿತ್ಯನಾಥ್ ಮತ್ತೊಂದು ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಮುಸ್ತಾಫಾಭಾದ್ ಗ್ರಾಮ ಇನ್ನುಮುಂದೆ ಕಬೀರ್ ಧಾಮ ಎಂದು ಮರುನಾಮಕರಣ ಮಾಡಲ ಯೋಗಿ ಮುಂದಾಗಿದ್ದಾರೆ. ಈ ಮರುನಾಮಕರಣ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲೇ ಹೆಸರು ಬದಲಾಗಲಿದೆ.
ಸಂತ ಕಬೀರ ಜೊತೆ ನಿಕಟ ಸಂಪರ್ಕದ ಗ್ರಾಮ
ಖೇರಿ ಜಿಲ್ಲೆಯಲ್ಲಿರುವ ಲಖೀಮ್ಪುರದ ಮುಸ್ತಾಫಾಬಾದ್ ಗ್ರಾಮದ ಐತಿಹಾಸಿಕ ಹಾಗೂ ಸಾಂಸ್ಕೃತಿ ಹಿನ್ನಲೆಯಲ್ಲಿ ಸಂತ ಕಬೀರ ಹಾಗೂ ಈ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಸಂತ ಕಬೀರರ ಜೊತೆ ಪರಂಪರೆ, ಸಾಂಸ್ಕೃತಿಕ ಹಿನ್ನಲೆ ಹೊಂದಿರುವ ಈ ಗ್ರಾಮವನ್ನು ಕಬೀರ್ ಧಾಮ ಎಂದು ಬದಲಾಯಿಸಲು ಸ್ವತಃ ಮಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಸಕ್ತಿ ತೋರಿದ್ದಾರೆ. ಇದಕ್ಕಾಗಿ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗಿದೆ.
ಮುಸ್ಲಿಮರೇ ಇರದ ಗ್ರಾಮಕ್ಕೆ ಈ ಹೆಸರು ಯಾಕೆ?
ಸ್ಮೃತಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯೋಗಿ ಆದಿತ್ಯನಾಥ್ ಭಾಷಣದ ವೇಳೆ ಈ ವಿಷಯ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ ಕೆಲ ಗ್ರಾಮದಲ್ಲಿನ ವಿವಾದ, ಅಭಿವೃದ್ಧಿ ಯೋಜನೆಗಳು, ಕಾರ್ಯಕ್ರಮಗಳ ವಿಸ್ತರಣೆಯಿಂದ ಮುಸ್ತಾಫಾಬಾದ್ ಗ್ರಾಮದ ಕುರಿತು ಚರ್ಚೆಯಾಗಿತ್ತು. ಈ ವೇಳೆ ಮುಸ್ತಾಫಾಬಾದ್ ಗ್ರಾಮದಲ್ಲಿನ ಮುಸ್ಲಿಮರ ಸಂಖ್ಯೆ ಎಷ್ಟು ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದಾಗ ಅಚ್ಚರಿಯಾಗಿದೆ. ಕಾರಣ ಈ ಗ್ರಾಮದಲ್ಲಿ ಮುಸ್ಲಿಮರೇ ಇಲ್ಲ ಎಂದಿದ್ದಾರ. ಮುಸ್ಲಿಮರೇ ಇಲ್ಲದ ಗ್ರಾಮಕ್ಕೆ ಮುಸ್ತಾಫಾಬಾದ್ ಹೆಸರು ಬೇಡ, ಈ ಗ್ರಾಮದ ಸಾಂಸ್ಕೃತಿಕ ಪರಂಪರೆ ಏನು? ಇದರ ಹಿನ್ನಲೆ ಏನು ಎಂದು ತಿಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವೇಳೆ ಸಂತ ಕಬೀರರ ಲಿಂಕ್ ಪತ್ತೆಯಾಗಿದೆ. ಹೀಗಾಗಿ ಕಬೀರ್ ಧಾಮ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂದು ಯೋಗಿ ಹೇಳಿದ್ದಾರೆ
ಸಂತ ಕಬೀರರಿಗೆ ಗೌರವ ನೀಡುವುದು ಮಾತ್ರವಲ್ಲ, ಅವರ ಸಾಂಸ್ಕೃತಿಕ ಪರಂಪರೆ ಹಾಗೂ ಅದರ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಅನಿವಾರ್ಯತೆ ಇದೆ. ಹೀಗಾಗಿ ಮರುನಾಮಕರಣ ಮಾಡುತ್ತೇವೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮರುನಾಮಕರಣಕ್ಕೆ ನಾಂದಿ ಹಾಡಿದ್ದ ಯೋಗಿ
ದೇಶದಲ್ಲಿ ಹೆಸರು, ಪಟ್ಟಣ ಸೇರಿದಂತೆ ಹಲವು ಐತಿಹಾಸಿಕ ಸ್ಥಳಗಳು, ಪ್ರವಾಸಿ ತಾಣಗಳ ಹೆಸರುಗಳನ್ನು ಮರುನಾಮಕರಣಕ್ಕೆ ಮೊದಲು ನಾಂದಿ ಹಾಡಿದ್ದೇ ಸಿಎಂ ಯೋಗಿ ಆಧಿತ್ಯನಾಥ್. ಇದೀಗ ಹಲವು ರಾಜ್ಯಗಳು ಈ ರೀತಿ ಹೆಸರನ್ನು ಬದಲಾಯಿಸಿದೆ. ಈ ರೀತಿ ಮರುನಾಮಕರಣದಿಂದ ಯೋಗಿ ಆದಿತ್ಯನಾಥ್ ಹಲವು ಸಮುದಾಯದ ಭಾರಿ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಆದರೆ ಯೋಗಿ ಆದಿತ್ಯನಾಥ್ ತಮ್ಮ ದಿಟ್ಟ ನಿರ್ಧಾರಗಳ ಮೂಲಕ ಮರುನಾಮಕರಣ ಮಾಡಿದ್ದಾರೆ.
