ಔರಂಗಬಾದ್ ರೈಲು ನಿಲ್ದಾಣ ಇನ್ನುಮುಂದೆ ಛತ್ರಪತಿ ಸಂಭಾಜಿನಗರ, ಹೊಸ ಕೋಡ್ ಪ್ರಕಟ ಮಾಡಲಾಗಿದೆ. ಮರುನಾಮಕರಣಗೊಂಡ ಮೂರು ವರ್ಷದ ಬಳಿಕ ರೈಲು ನಿಲ್ದಾಣದ ಹೆಸರು ಬದಲಾಗಿದೆ. ಹೊಸ ಕೋಡ್ ಕೂಡ ಪ್ರಕಟಗೊಂಡಿದೆ.
ನವದೆಹಲಿ (ಅ.26) ಐತಿಹಾಸಿಕ ಔರಂಗಬಾದ್ ರೈಲು ನಿಲ್ದಾಣದ ಹೆಸರು ಛತ್ರಪತಿ ಸಂಭಾಜಿನಗರ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ. ಮೂರು ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕರಾ ಔರಂಗಬಾದ್ ನಗರವನ್ನು ಛತ್ರಪತಿ ಸಂಭಾಜಿನಗರ ಎಂದು ಮರುನಾಮಕರಣ ಮಾಡಿತ್ತು. ಬಳಿಕ ಹಂತ ಹಂತವಾಗಿ ಜಿಲ್ಲೆಯ ಎಲ್ಲಾ ದಾಖಲೆಗಳಲ್ಲಿ ಹೆಸರು ಬದಲಾವಣೆ ಮಾಡಿತ್ತು. ಇದೀಗ ಮಹತ್ವದ ಘಟ್ಟವಾಗಿ ಔರಂಗಬಾದ್ ರೈಲು ನಿಲ್ದಾಣದ ಹೆಸರು ಕೂಡ ಮರುನಾಮಕರಣ ಮಾಡಲಾಗಿದೆ.
ಹೊಸ ಸ್ಟೇಶನ್ ಕೋಡ್ ಪ್ರಕಟ
ಛತ್ರಪತಿ ಸಂಭಾಜಿನಗರ ರೈಲು ನಿಲ್ದಾಣ ಎಂದು ಹೆಸರು ಬದಲಾವಣೆ ಮಾಡಿರುವ ಕಾರಣ ರೈಲು ನಿಲ್ದಾಣದ ಕೋಡ್ ಕೂಡ ಬದಲಾಗಿದೆ. ಇದೀಗ ಹೊಸ ರೈಲು ನಿಲ್ದಾಣದ ಕೋಡ್ CPSN (ಸಿಪಿಎಸ್ಎನ್). ಔರಂಗಬಾದ್ ರೈಲು ನಿಲ್ದಾಣ ಎಂಬ ಹೆಸರಿದ್ದಾಗ ಈ ರೈಲು ನಿಲ್ದಾಣದ ಕೋಡ್ AWB ಎಂದಾಗಿದೆ. ಇನ್ನು ರೈಲು ಟಿಕೆಟ್ ಬುಕಿಂಗ್ ಮಾಡುವಾಗ CPSN ಕೋಡ್ ಮೂಲಕ ಔರಂಗಾಬಾದ್ ರೈಲು ನಿಲ್ದಾಣ ಗುರುತಿಸಿಕೊಳ್ಳಲಿದೆ.
ಸೌಥ್ ಸೆಂಟ್ರಲ್ ರೈಲು ವಿಭಾಗದ ನಾಂದೇಡ್ ಡಿವಿಶನ್ನಲ್ಲಿರುವ ಈ ಛತ್ರಪತಿ ಸಂಭಾಜಿನಗರ ರೈಲು ನಿಲ್ದಾಣದ ಮರುನಾಮಕರಣಕ್ಕೆ ಅಕ್ಟೋಬರ್ 15 ರಂದು ಮಹಾರಾಷ್ಟ್ರ ಸರ್ಕಾರ ಗೆಜೆಟೆಡ್ ನೋಟಿಫಿಕೇಶನ್ ಹೊರಡಿಸಿತ್ತು. ಇದೀಗ ಕೇಂದ್ರ ರೈಲ್ವೇ ಸಚಿವಾಲಯದ ಮರುನಾಮಕರಣ ಮಾಡಿದೆ. ಈ ಮೂಲಕ ಔರಂಗಬಾದ್ ಇದೀಗ ಸಂಪೂರ್ಣವಾಗಿ ಛತ್ರಪತಿ ಸಂಭಾಜಿನಗರವಾಗಿ ಬದಲಾಗಿದೆ.
ಮರಾಠ ರಾಜ್ಯದ ಎರಡನೇ ಚಕ್ರಾಧಿಪತಿ
ಛತ್ರಪತಿ ಶಿವಾಜಿ ಬಳಿಕ ಶಿವಾಜಿ ಪುತ್ರ ಸಂಭಾಜಿ ಮರಾಠ ರಾಜ್ಯ ಆಡಳಿತ ಚುಕ್ಕಾಣಿ ಹಿಡಿದ್ದರು. ಒಂದೆಡೆ ಮೊಘಲರ ದಾಳಿ ತೀವ್ರಗೊಂಡಿತ್ತು. ಕುತಂತ್ರದ ಮೂಲಕ ಸಂಭಾಜಿ ಸೆರೆ ಹಿಡಿಯಲು ಪ್ರಯತ್ನಗಳು ನಡೆಯುತ್ತಲೇ ಇತ್ತು. ಇದರ ನಡುವೆ ಸಂಭಾಜಿ ಮರಾಠ ರಾಜ್ಯದ ಸುರಕ್ಷತೆ ಮಾತ್ರವಲ್ಲ, ಹಿಂದೂ ರಾಜ್ಯಕ್ಕೆ ಭದ್ರತೆ ನೀಡುವಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸಂಬಾಜಿನಗರ ಕೋಟೆ, ಐತಿಹಾಸಿಕ ದೇವಸ್ಥಾನ, ದೇವಸ್ಥಾನ ಕೆಡವಿ ನಿರ್ಮಿಸಿರುವ ಮಸೀದಿಗಳಿಂದಲೇ ಪ್ರಖ್ಯಾತಿ ಪಡೆದಿದೆ.
ಯುನೆಸ್ಕೋ ಪಟ್ಟಿಯಲ್ಲಿರುವ ಅಜಂತ, ಎಲ್ಲೋರಾ ನಗರ
ಯುನೆಸ್ಕೋ ಪಟ್ಟಿಯಲ್ಲಿರುವ ಅಜಂತ ಹಾಗೂ ಎಲ್ಲೋರ ದೇವಾಲಯಗಳು ಇದೇ ಸಂಭಾಜಿನಗರದಲ್ಲಿದೆ. ಐತಿಹಾಸಿಕವಾಗಿ ಸಂಭಾಜಿನಗರ ಅತ್ಯಂತ ಮಹತ್ವದ ನಗರವಾಗಿದೆ. ಪುರಾಣ ಪ್ರಸಿದ್ಧ ತಾಣಗಳು, ಐತಿಹಾಸಿಕ ತಾಣಗಳಿಂದ ಪ್ರವಾಸಿ ತಾಣವಾಗಿದೆ.
ಔರಂಗಬಾದ್ ರೈಲು ನಿಲ್ದಾಣ ಆರಂಭಗೊಂಡಿದ್ದು 1900ರಲ್ಲಿ ಹೈದರಾಬಾದ್ ನಿಜಾಮ್ ಒಸ್ಮಾನ್ ಆಲಿ ಖಾನ್ ನೇತೃತ್ವದಲ್ಲಿ ಬ್ರಿಟೀಷರ ಸಹಯೋಗದೊಂದಿಗೆ ಈ ರೈಲು ನಿಲ್ದಾಣ ಆರಂಭಗೊಂಡಿತ್ತು.
ಮರುನಾಮಕರಣಕ್ಕೆ ಪರ ವಿರೋಧಗಳು ವ್ಯಕ್ತವಾಗಿತ್ತು. ಆದರೆ ಔರಂಗಬಾದ್ ನಗರವನ್ನು ಛತ್ರಪತಿ ಸಂಭಾಜಿನಗರವಾಗಿ ಮರುನಾಮಕರಣ ಮಾಡಬೇಕು ಅನ್ನೋದು ಹಲವು ದಶಕಗಳಿಂದ ನಡೆಯುತ್ತಿದ್ದ ಹೋರಾಟವಾಗಿತ್ತು. ಈ ಕುರಿತು ಮೊದಲ ಘೋಷಣೆ ಮಾಡಿದ್ದು ಕಾಂಗ್ರೆಸ್, ಶಿವಸೇನೆ, ಎನ್ಸಿಪಿ ನೇತೃತ್ವದ ಉದ್ಧವ್ ಠಾಕ್ರೆ ಸರ್ಕಾರ. ಬಳಿಕ ಶಿಂದೆ ನೇತತ್ವದ ಏಕನಾಥ್ ಶಿಂಧೆ ಹಾಗೂ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದೀಗ ಫಡ್ನವಿಸ್ ನೇತತ್ವದ ಸರ್ಕಾರದಲ್ಲಿ ರೈಲು ನಿಲ್ದಾಣದ ಹೆಸರು ಮರುನಾಮಕರಣಗೊಂಡಿದೆ.
