ಈ ವರ್ಷದ ಭಾರೀ ಮಳೆ ಮತ್ತು ಪ್ರವಾಹದಿಂದ ಬಾಧಿತರಾದ ಜನರಿಗೆ ತಕ್ಷಣದ ನೆರವು ನೀಡಲು ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿಯ (ಎಸ್‌ಡಿಆರ್‌ಎಫ್‌) ಅಡಿ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ 1,950.80 ಕೋಟಿ ರು. ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ.

 ನವದೆಹಲಿ : ಈ ವರ್ಷದ ಭಾರೀ ಮಳೆ ಮತ್ತು ಪ್ರವಾಹದಿಂದ ಬಾಧಿತರಾದ ಜನರಿಗೆ ತಕ್ಷಣದ ನೆರವು ನೀಡಲು ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿಯ (ಎಸ್‌ಡಿಆರ್‌ಎಫ್‌) ಅಡಿ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ 1,950.80 ಕೋಟಿ ರು. ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ. ಇದರಲ್ಲಿ ಕರ್ನಾಟಕಕ್ಕೆ 384.40 ಕೋಟಿ ರು. ಮತ್ತು ಮಹಾರಾಷ್ಟ್ರಕ್ಕೆ 1,566.40 ಕೋಟಿ ರು. ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ಕರ್ನಾಟಕದ ಸುಮಾರು 10 ಜಿಲ್ಲೆಗಳು, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಭೀಮಾ ತೀರದ ಜಿಲ್ಲೆಗಳು ಪ್ರವಾಹದಿಂದ ತತ್ತಸಿದ್ದವು. ಅದರ ಬೆನ್ನಲ್ಲೇ ಕೇಂದ್ರೀಯ ಪರಿಹಾರ ಬಿಡುಗಡೆ ಆಗಿದೆ.

‘2025-26ನೇ ಸಾಲಿನಲ್ಲಿ ಪ್ರವಾಹಪೀಡಿತ ಜನರಿಗೆ ಪರಿಹಾರಾರ್ಥವಾಗಿ 1,950.80 ಕೋಟಿ ರು. ನೀಡಲು ಅನುಮೋದನೆ ದೊರಕಿದೆ. ಇದರಲ್ಲಿ ಕರ್ನಾಟಕಕ್ಕೆ 384.40 ಕೋಟಿ ರು. ಹಾಗೂ ಮಹಾರಾಷ್ಟ್ರಕ್ಕೆ 1,566.40 ಕೋಟಿ ರು. ಸಿಗಲಿದೆ’ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರವಾಹ, ಭೂಕುಸಿತ ಮತ್ತು ಗಾಳಿಮಳೆಯಿಂದ ಹಾನಿಗೊಳಗಾದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತಿದೆ. ಈ ವರ್ಷ ಎಸ್‌ಡಿಆರ್‌ಎಫ್‌ನಡಿ 27 ರಾಜ್ಯಗಳಿಗೆ 13,603.20 ಕೋಟಿ ರು. ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿಯಡಿ (ಎನ್‌ಡಿಆರ್‌ಎಫ್‌) 15 ರಾಜ್ಯಗಳಿಗೆ 2,189.28 ಕೋಟಿ ರು. ನೆರವು ನೀಡಲಾಗಿದೆ. ಇದರ ಜೊತೆಗೆ, ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಡಿ (ಎಸ್‌ಡಿಎಂಎಫ್‌) 21 ರಾಜ್ಯಗಳಿಗೆ 4,571.30 ಕೋಟಿ ರು. ಮತ್ತು ಎನ್‌ಡಿಎಂಎಫ್‌ನಡಿ 9 ರಾಜ್ಯಗಳಿಗೆ 372.09 ಕೋಟಿ ರು. ಬಿಡುಗಡೆ ಮಾಡಲಾಗಿದೆ.