ಪೆಹಲ್ಗಾಂ ಬಗ್ಗೆ ಉಲ್ಲೇಖ: ಸೂರ್ಯಗೆ ಶಾಕ್ ಕೊಟ್ಟ ಐಸಿಸಿ!
ದುಬೈ: ಪಹಲ್ಗಾಂ ಉಗ್ರದಾಳಿಯ ವಿಚಾರದ ಕುರಿತಂತೆ ಬಹಿರಂಗವಾಗಿ ತಮ್ಮ ಅನಿಸಿ ಹಂಚಿಕೊಂಡ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ಗೆ ಐಸಿಸಿ ಎಚ್ಚರಿಕೆ ನೀಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ರಾಜಕೀಯ ಪ್ರೇರಿತ ಹೇಳಿಕೆ
ಕ್ರಿಕೆಟ್ ಮೈದಾನದಲ್ಲಿ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡದಂತೆ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ತಾಕೀತು ಮಾಡಿದೆ.
ಪೆಹಲ್ಗಾಂ ಉಲ್ಲೇಖ
ಪಹಲ್ಗಾಂ ಬಗ್ಗೆ ಉಲ್ಲೇಖಿಸಿದ್ದಕ್ಕೆ ಸೂರ್ಯ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ಸಲ್ಲಿ ಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಸೂರ್ಯರನ್ನು ಕರೆಸಿ ವಿಚಾರಣೆ ನಡೆಸಿದ ಐಸಿಸಿ ಮ್ಯಾಚ್ ರೆಫ್ರಿ ರಿಚಿ ರಿಚರ್ಡ್ಸನ್, ಕ್ರಿಕೆಟ್ನೊಂದಿಗೆ ರಾಜಕೀಯ ಬೆರೆಸದಂತೆ ಸೂಚನೆ ನೀಡಿದ್ದಾರೆ.
ಭಾರತೀಯ ಸೇನೆಗೆ ಗೆಲುವು ಅರ್ಪಿಸಿದ ಸೂರ್ಯ
ಪಾಕಿಸ್ತಾನ ವಿರುದ್ದ ಏಷ್ಯಾಕಪ್ ಗುಂಪು ಹಂತದ ಪಂದ್ಯವನ್ನು ಗೆದ್ದ ಬಳಿಕ, ಆ ಗೆಲುವನ್ನು ಪಹಲ್ಗಾಂ ಉಗ್ರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕ ಭಾರತೀಯರು, ಆಪರೇಷನ್ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆಗೆ ಅರ್ಪಿಸುವುದಾಗಿ ಸೂರ್ಯಕುಮಾರ್ ಹೇಳಿದ್ದರು.
ಸೂರ್ಯನಿಗೆ ಎಚ್ಚರಿಕೆ ನೀಡಿದ ಐಸಿಸಿ
ಈ ಹೇಳಿಕೆಗೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿ, ದೂರು ಸಲ್ಲಿಸಿತ್ತು. ಈ ಸಂಬಂಧ ಐಸಿಸಿ ವಿಚಾರಣೆ ನಡೆಸಿ ಕೆಲವು ಎಚ್ಚರಿಕೆಗಳನ್ನು ನೀಡಿದೆ.
ಇಂದು ಫರ್ಹಾನ್, ರೌಫ್ ವಿಚಾರಣೆ
ಅರ್ಧಶತಕ ಗಳಿಸಿದ ಬಳಿಕ ಗನ್ಶಾಟ್ ರೀತಿ ಸಂಭ್ರ ಮಿಸಿದ್ದ ಪಾಕಿಸ್ತಾನದ ಬ್ಯಾಟರ್ ಸಾಹಿಬ್ ಝಾದಾ ಫರ್ಹಾನ್ ಹಾಗೂ ಬೌಂಡರಿ ಗೆರೆ ಬಳಿ ಭಾರತೀಯ ಅಭಿಮಾನಿಗಳತ್ತ ಕೈ ತೋರಿಸಿ ವಿಮಾನವನ್ನು ಹೊಡೆದುರುಳಿಸಿದಂತೆ ಕೈ ಸನ್ನೆ ಮಾಡಿದ್ದ ವೇಗಿ ಹ್ಯಾರಿಸ್ ರೌಫ್ ವಿರುದ್ದ ಬಿಸಿಸಿಐ, ಐಸಿಸಿಗೆ ದೂರಿದೆ. ಈ ವಿಚಾರವಾಗಿ ಶುಕ್ರವಾರ ಐಸಿಸಿ ಪಾಕ್ನ ಈ ಇಬ್ಬರು ಆಟಗಾರರನ್ನು ವಿಚಾರಣೆಗೆ ಕರೆದಿದೆ.