ತುಳುನಾಡಿನಲ್ಲಿ ರಿಲೀಸ್ ಆಗಿರುವ ‘ನೆತ್ತರುಕೆರೆ’ ಸಿನಿಮಾ 150 ನೇ  ತುಳು ಸಿನಿಮಾ ಆಗಿದೆ. ತುಳುನಾಡಿನ ನೆಟಿವಿಟಿ ಹೊಂದಿರುವ ಈ ಸಿನಿಮಾ ಕರಾವಳಿ ನಾಡಿನಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ.

ತುಳುನಾಡು ಸಿನಿಮಾರಂಗದಲ್ಲಿ ಪ್ರಮುಖ ಮೈಲೀಗಲ್ಲು ಸ್ಥಾಪಿಸಿರುವ ಸಿನಿಮಾ ನೆತ್ತರುಕೆರೆ. 150ನೇ ಸಿನಿಮಾ ಆಗಿರುವ ನೆತ್ತರುಕೆರೆ, ಕಳೆದ ತಿಂಗಳು ಆಗಸ್ಟ್ 29ರಂದು (29 August 2025) ತುಳುನಾಡಿನಲ್ಲಿ ಬಿಡುಗಡೆ ಕಂಡು ಯಶಸ್ವೀ ಪ್ರದರ್ಶನ ಕಾಣುತ್ತಿದೆ. 'ಕಾಂತಾ'ರ ಖ್ಯಾತಿಯ ಸ್ವರಾಜ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ 'ನೆತ್ತರಕೆರೆ' (Netterekere) ಚಿತ್ರವು ಇದೀಗ ತುಳುನಾಡಿನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಈ ಚಿತ್ರದಲ್ಲಿ ಬಹುಭಾಷಾ ನಟ ಸುಮನ್ ತಲ್ವಾರ್ ಪ್ರಥಮ ಬಾರಿಗೆ ತುಳು ಸಿನಿಮಾದಲ್ಲಿ ಅಭಿನಯಿಸಿ, ತಮ್ಮ ವಿಶಿಷ್ಠ ಪಾತ್ರದ ಮೂಲಕ ಇಡೀ ಸಿನಿಮಾವನ್ನು ಆವರಿಸಿದ್ದಾರೆ. ನಾಯಕರಾಗಿ ಸ್ವರಾಜ್ ಶೆಟ್ಟಿ ಸಿನಿಮಾ ತುಂಬಾ ಆವರಿಸಿದ್ದಾರೆ. ನಾಯಕಿಯಾಗಿ ದಿಶಾಲಿ ಪೂಜಾರಿ, ಮುಖ್ಯ ಪಾತ್ರದಲ್ಲಿ ಭವ್ಯಶ್ರೀ ಪೂಜಾರಿ ಮಿಂಚಿದ್ದಾರೆ. ಉಳಿದಂತೆ, ಅನಿಲ್ ರಾಜ್ ಉಪ್ಪಳ, ಪುಷ್ಪರಾಜ್ ಬೊಳ್ಳಾರ್ ,ಮನೀಶ್ ಶೆಟ್ಟಿ, ಉತ್ಸವ್ ವಾಮಂಜೂರ್, ಯುವ ಶೆಟ್ಟಿ, ಪೃತ್ವಿನ್ ಪೊಳಲಿ, ನೀತ್ ಪೂಜಾರಿ, ಚಂದ್ರ ಶೇಖರ್ ಸಿದ್ಧಕಟ್ಟೆ, ನಮಿತಾ ಕಿರಣ್ ಮೊದಲಾದವರು ಪಾತ್ರಕ್ಕೆ ಜೀವತುಂಬಿದ್ದಾರೆ.

ಈ 'ನೆತ್ತರುಕೆರೆ' ಸಿನಿಮಾದಲ್ಲಿ ಬೆಳ್ಳಾರೆಯ ಬಾಯಂಬಾಡಿಯ ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ನಟಿ ಭವ್ಯ ಶ್ರೀ ಪೂಜಾರಿ ಅವರು ಮುಖ್ಯ ಪಾತ್ರವೊಂದರಲ್ಲಿ ಚೆನ್ನಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಬಗ್ಗೆ ಮಾತನಾಡಿದ ಭವ್ಯಶ್ರೀ 'ಇಂತಹ ಪಾತ್ರ ಮಾಡುವುದು ನನ್ನ ಕನಸಾಗಿತ್ತು. ಅದು ನೆತ್ತರಕೆರೆ ಸಿನಿಮಾದ ಮೂಲಕ ಈಡೇರಿದೆ. ಅವಕಾಶ ನೀಡಿದ ನಿರ್ದೇಶಕರಾದ ಸ್ವರಾಜ್ ಶೆಟ್ಟಿ ಹಾಗೂ ನಿರ್ಮಾಪಕರಾದ ಲಂಚುಲಾಲ್ ಅವರಿಗೆ ಧನ್ಯವಾದಗಳು...'ಎಂದಿದ್ದಾರೆ.

ತುಳುನಾಡಿನ ಬೆಲ್ಟ್‌ನಲ್ಲಷ್ಟೇ ರಿಲೀಸ್ ಆಗಿರುವ ಈ ಸಿನಿಮಾ ಮುಂದೆ ಕನ್ನಡನಾಡಿನಲ್ಲಿ ಸಹ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. 150ನೇ ತುಳು ಸಿನಿಮಾ ಆಗಿರುವ ನೆತ್ತರುಕೆರೆ ಕರ್ನಾಟಕದಾದ್ಯಂತ ಬಿಡುಗಡೆ ಆಗಬೇಕೆಂಬುದು ಬಹಳಷ್ಟು ಜನರ ಬಯಕೆಯಾಗಿದೆ, ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಕಾಮೆಂಟ್ ಮಾಡಿದ್ದಾರೆ . ತುಳುನಾಡಿನ ನೆಟಿವಿಟಿ ಹೊಂದಿರುವ ಈ ಸಿನಿಮಾಗೆ ಅತ್ಯದ್ಭುತ ತಾಂತ್ರಿಕ ಟಚ್ ಕೂಡ ದೊರಕಿದ್ದು, ಈ ಮೂಲಕ ಎಲ್ಲಾ ವರ್ಗಗಳ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಈ ಚಿತ್ರವು ಸಫಲವಾಗುತ್ತಿದೆ.

'ಅಸ್ತ್ರ ಪ್ರೋಡಕ್ಸನ್ ಬ್ಯಾನರ್'ನಲ್ಲಿ ಲಂಚುಲಾಲ್ ಕೆ ಎಸ್ ಅವರು 'ನೆತ್ತರುಕೆರೆ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಛಾಯಾಗ್ರಹಣ ಉದಯ ಬಲ್ಲಾಲ್, ವಿನೋದ್ ರಾಜ್ ಕೋಖಿಲ ಸಂಗೀತ ನಿರ್ದೇಶನ, ಕಾರ್ತಿಕ್ ಮುಲ್ಕಿ ಸಹಕಾರ, ಗಣೇಶ್ ನೀರ್ಚಾಲ್ ಸಂಕಲನ, ಸಾಹಸ ಮಾಸ್ ಮಾದ, ಟೈಗರ್ ಶಿವು ಮತ್ತು ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಯತೀಶ್ ಪೂಜಾರಿ ಸಹಕರಿಸಿದ್ದಾರೆ.

ಈ ಸಿನಿಮಾದ ನಿರ್ಮಾಣ ವ್ಯವಸ್ಥಾಪಕರಾಗಿ ರಾಜೇಶ್ ಕುಡ್ಲ ಹಾಗೂ ವಿಜಯ್ ಮಯ್ಯ, ನಿರ್ದೇಶನ ತಂಡದಲ್ಲಿ ಜಯರಾಜ್ ಪೂಜಾರಿ, ಅವಿನಾಶ್ ಎಸ್ ಆಪ್ತ, ಕಾರ್ತಿಕ್ ಜಯಚ೦ದ್ರನ್‌, ತುಳಸಿದಾಸ್ ಮಂಜೇಶ್ವರ. ಪತ್ರಿಕೋದ್ಯಮ ಜಗನ್ನಾಥ ಶೆಟ್ಟಿ ಬಾಳ ಸಹಕಾರ ನೀಡಿದ್ದಾರೆ. ಮೇಕಪ್ ಚೇತನ್ , ಕಲೆ ವಿಪಿನ್ ಆರ್ಟ್ಸ್, ಪ್ರಚಾರ ಕಲೆ ದೇವಿ ರೈ, ಕಟ್ಟಿಂಗ್ ಮೀಡಿಯಾ, ಕಾರ್ತಿಕ್, ಡಿಐ ಮತ್ತು ವಿ.ಎಫ್. ಎಕ್ಸ್. ಸುಪ್ರೀತ್ ಬಿ ಕೆ., ಡಿ.ಟಿ.ಎಸ್. ನವೀನ್ ರೈ ಕಾರ್ಯ ನಿರ್ವಹಿಸಿದ್ದಾರೆ.