ಮಹೇಶ್ ಶೆಟಿ ತಿಮರೋಡಿ ಗಡೀಪಾರಿಗೆ ಕಾರಣವಾದ 5 ಕೇಸ್ ಯಾವುದು, ನಿರೀಕ್ಷಣಾ ಜಾಮೀನಿಗೆ ಅರ್ಜಿ,  ಶಾಂತಿ ಕದಡುವ ಪ್ರಯತ್ನ ಹಿನ್ನಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬೆಳಗಾವಿಗೆ ಗಡೀಪಾರು ಮಾಡಲು ಆದೇಶ ನೀಡಲಾಗಿದೆ. ತಿಮರೋಡಿ ಗಡೀಪಾರಿಗೆ ಕಾರಣವಾದ 5 ಕೇಸ್ ಯಾವುದು?

ಬೆಳ್ತಂಗಡಿ (ಸೆ.23) ಧರ್ಮಸ್ಥಳ ವಿರುದ್ಧ ಗಂಭೀರ ಆರೋಪ ಮಾಡಿ ಕೋಲಾಹಲ ಎಬ್ಬಿಸಿದ ಬುರುಡೆ ಗ್ಯಾಂಗ್ ಸದಸ್ಯರ ಸಂಕಷ್ಟ ಹೆಚ್ಚಾಗುತ್ತಿದೆ. ಬುರುಡೆ ತಂದ ಚಿನ್ನಯ್ಯ ಅರೆಸ್ಟ್ ಆಗಿದ್ದರೆ, ಇತ್ತ ಬುರುಡೆ ಕತೆ ಸೂತ್ರಧಾರ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬೆಳಗಾವಿಗೆ ಗಡೀಪಾರು ಮಾಡುವಂತೆ ಪುತ್ತೂರು ಸಹಾಯಕ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರಿಗೆ ದಾಖಲಾದ 5 ಕೇಸ್ ಪ್ರಮುಖ ಕಾರಣಾಗಿದೆ. ಇದೀಗ ತಿಮರೋಡಿಗೆ ಸಂಕಷ್ಟ ದುಪ್ಪಟ್ಟಾಗಿದ್ದು ಮಾತ್ರವಲ್ಲ, ಬಂಧನ ಭೀತಿಯೂ ಕಾಡುತ್ತಿದೆ.

ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ದಾಖಲಾದ ಐದು ಪ್ರಕರಣ ಯಾವುದು?

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ತಿಮರೋಡಿ ವಿರುದ್ದ ಐದು ಪ್ರಕರಣ ದಾಖಲಾಗಿದೆ. ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗಾರ, ಕ್ಯಾಮರಾಮೆನ್ ಮೇಲೆ ಹಲ್ಲೆ ಸೇರಿ ಐದು ಕೇಸ್ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ದಾಖಲಾಗಿದೆ.

1) Belthangady Cr.no 75/2025 U/s 189(2), 191(1) (2), 115(2), 351(2), 352 R/w 190 BNS

ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗಾರ ಹರೀಶ್ ಹಾಗೂ ಕ್ಯಾಮರಾಮೆನ್ ನವೀನ್ ಪೂಜಾರಿ ಮೇಲೆ ಹಲ್ಲೆ ಕೇಸ್

2) Belthangady PS Cr No 77/2025 U/s 189(2), R/w 190(2) BNS

100ಕ್ಕೂ ಅಧಿಕ ಜನರು ಸೇರಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ದೊಂಬಿ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರ ಸ್ವಯಂ ಪ್ರೇರಿತ ಕೇಸು

3) Belthangady PS Cr No 79/2025 U/s 353(2) BNS

ಯೂ ಟ್ಯೂಬ್ ನಲ್ಲಿ ಪ್ರಚೋದನಕಾರಿ ಹೇಳಿಕೆ ಹಿನ್ನೆಲೆ ಚರಣ್ ಎಂಬವರ ದೂರಿನಡಿ ದಾಖಲಾದ ಎಫ್ಐಆರ್

4) Belthangady PS Cr No 108/2025 U/s: 25(1)(1-A) And 25(1)(1-B)(a) Arms Act 1959

ಮನೆಯಲ್ಲಿ ‌ಅಕ್ರಮ ಶಸ್ತ್ರಾಸ್ತ್ರ ಸಿಕ್ಕಿದ ಹಿನ್ನೆಲೆ ಎಸ್ಐಟಿ ಎಸ್ಪಿ ಸೈಮನ್ ದೂರಿನಡಿ ದಾಖಲಾದ ಎಫ್ಐಆರ್

5) Belthangady PS Cr No 94/2025, ಕಲಂ: 132,189(2),351(2), 263(a),190,262 BNS

ಬ್ರಹ್ಮಾವರ ಪೊಲೀಸ್‌ ಠಾಣೆಯ ಪ್ರಕರಣದಲ್ಲಿ ದಸ್ತಗಿರಿ ಮಾಡಲು ಬಂದಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಸು

ದಕ್ಷಿಣ ಕನ್ನಡದಲ್ಲಿ ಶಾಂತಿ ಕದಡಿದ ಆರೋಪ

ಮಹೇಶ್ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡದಲ್ಲಿ ಪ್ರಮುಖವಾಗಿ ಧರ್ಮಸ್ಥಳ ಪ್ರಕರಣದಲ್ಲಿ ಪ್ರದೋಚನಕಾರಿ ಹೇಳಿಕೆ, ಆರೋಪಗಳ ಮೂಲಕ ಶಾಂತಿ ಕದಡು ಪ್ರಯತ್ನ ಮಾಡಿದ್ದಾರೆ ಎಂಬ ಗಂಭೀರ ಆರೋಪವಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿಡದಂತೆ ಬೆಳಗಾವಿಗೆ ಗಡೀಪಾರು ಮಾಡಲು ಆದೇಶ ಹೊರಡಿಸಲಾಗಿದೆ.

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ತಿಮರೋಡಿ

ಅಕ್ರಮ ಶಸ್ತ್ರಾಸ್ತ್ರ ಕೂಡಿಟ್ಟ ಪ್ರಕರಣ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ತಿಮರೋಡಿ ಬಂಧನ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸ್ವೀಕರಿಸಿದೆ. ಇತ್ತ ಸರ್ಕಾರಿ ಅಭಿಯೋಜಕರಿಂದ ನಿರೀಕ್ಷಣಾ ‌ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳುವ ಸಾಧ್ಯತೆ ಇದೆ. ಪೊಲೀಸ್ ‌ವರದಿ ಪಡೆದು ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರು ಸಜ್ಜಾಗಿದ್ದಾರೆ. ಹೀಗಾಗಿ ವಾದ ಪ್ರತಿವಾದದ ಬಳಿಕ ನಿರೀಕ್ಷಮಾ ಜಾಮೀನು ಕುರಿತು ನ್ಯಾಯಲಯ ನಿರ್ಧರಿಸಲಿದೆ.