sisters drown in farm pond: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ದನ ಮೇಯಿಸಲು ಹೋಗಿದ್ದ ಗಂಗಮ್ಮ ಮತ್ತು ಶಕುಂತಲಾ ಎಂಬ ಅಕ್ಕ-ತಂಗಿಯರು ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಇಬ್ಬರ ಶವಗಳು ಪತ್ತೆಯಾಗಿದ್ದು, ಫೆನ್ಸಿಂಗ್ ಇಲ್ಲದ ಹೊಂಡದ ಬಳಿ ನಡೆದ ಈ ಘಟನೆ ಅನುಮಾನಕ್ಕೆ ಕಾರಣವಾಗಿದೆ.
ತುಮಕೂರು (ಅ.5): ದನ ಮೇಯಿಸಲು ಹೋಗಿದ್ದ ಅಕ್ಕ-ತಂಗಿಯರಿಬ್ಬರು ಕೃಷಿ ಹೊಂಡದಲ್ಲಿ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗ್ರಾಮದಲ್ಲಿ ನಡೆದಿದೆ.
ಗಂಗಮ್ಮ(37), ಶಕುಂತಲಾ (36), ಮೃತ ಅಕ್ಕತಂಗಿಯರು. ಇಬ್ಬರೂ ತವರು ಮನೆ ಹರ್ಷಪುರದಲ್ಲೇ ವಾಸಿಸುತ್ತಿದ್ದರು.
ಸಂಜೆಯಾದ್ರೂ ಮನೆಗೆ ವಾಪಸ್ ಆಗದ ಅಕ್ಕ-ತಂಗಿ:
ಎಂದಿನಂತೆ ದನ ಮೇಯಿಸಲು ಹೊಲಕ್ಕೆ ತೆರಳಿದ್ದ ಅಕ್ಕತಂಗಿಯರು, ಸಂಜೆಯಾದರೂ ಮನೆಗೆ ಮರಳದಿದ್ದಾಗ, ಕುಟುಂಬಸ್ಥರು ಅನುಮಾನಗೊಂಡು ಹುಡುಕಾಟ ಆರಂಭಿಸಿದ್ದರು. ಅಕ್ಕಪಕ್ಕದವರನ್ನು ವಿಚಾರಿಸಿ, ದನ ಮೇಯಿಸಲು ಹೋಗುತ್ತಿದ್ದ ಪಕ್ಕದ ಹೊಲದಲ್ಲಿ ಹುಡುಕಾಟ ನಡೆಸುತ್ತಿದ್ದಾಗ, ಕೃಷಿ ಹೊಂಡದ ಬಳಿ ಇಬ್ಬರ ಚಪ್ಪಲಿಗಳು ಪತ್ತೆಯಾಗಿದ್ದವು. ಬಳಿಕ ಕೃಷಿ ಹೊಂಡದಲ್ಲಿ ಹುಡುಕಿದಾಗ ಗಂಗಮ್ಮ ಮತ್ತು ಶಕುಂತಲಾ ಅವರ ಶವಗಳು ಕಂಡುಬಂದವು.
ಇದನ್ನೂ ಓದಿ: ಬೆಂಗಳೂರು: ಪತಿಯಿಂದ ವರದಕ್ಷಿಣೆ ಕಿರುಕುಳ ಆರೋಪ; ಗೃಹಿಣಿ ನೇಣಿಗೆ ಶರಣು!
ಅನುಮಾನಸ್ಪಾದ ಸಾವು:
ಈ ಹೊಂಡ ಅನಿಲ್ ಎಂಬುವರಿಗೆ ಸೇರಿದ್ದು, ಸುತ್ತಲೂ ಯಾವುದೇ ಫೆನ್ಸಿಂಗ್ ಇರಲಿಲ್ಲ. ಈ ಘಟನೆ ಬಗ್ಗೆ ಕುಟುಂಬಸ್ಥರು, ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೃಷಿ ಹೊಂಡಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
