ದಸರಾ ಹಬ್ಬದ ವೇಳೆ ಮೈಸೂರಿಗೆ ಬಲೂನ್ ಮಾರಾಟ ಮಾಡಲು ಗುಲ್ಬರ್ಗಾದಿಂದ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ 10 ವರ್ಷದ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ನಂತರ ಆಕೆಯ ಶವವು ಜೋಪಡಿಯ ಸಮೀಪದ ಗುಂಡಿಯಲ್ಲಿ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಾ೧ಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 

ಮೈಸೂರು (ಅ.9): ದಸರಾ ಹಬ್ಬದ ಸಂಭ್ರಮದ ನಡುವೆ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೈಶಾಚಿಕ ಕೃತ್ಯವೊಂದು ನಡೆದುಹೋಗಿದೆ. ಬಲೂನ್ ವ್ಯಾಪಾರಕ್ಕೆ ಬಂದಿದ್ದ ಬಡಕುಟುಂಬವೊಂದರ 10 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾ೧ಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆಯಿಂದಾಗಿ ಮೈಸೂರು ಬೆಚ್ಚಿಬಬಿದ್ದಿದೆ.

ಗುಲ್ಬರ್ಗಾದಿಂದ ಬಲೂನ್ ವ್ಯಾಪಾರಕ್ಕೆ ಬಂದಿದ್ದ ಕುಟುಂಬ:

ಗುಲ್ಬರ್ಗದಿಂದ ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ ಸುಮಾರು 50 ಕುಟುಂಬಗಳು ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ತಾತ್ಕಾಲಿಕವಾಗಿ ತಂಗಿದ್ದವು. ಚಾಮುಂಡಿ ಬೆಟ್ಟ, ವಸ್ತು ಪ್ರದರ್ಶನ, ಬನ್ನಿ ಮಂಟಪ, ದೇವರಾಜ ಮಾರುಕಟ್ಟೆ ಸೇರಿದಂತೆ ಹಲವು ಸ್ಥಳಗಳಲ್ಲಿ ಇವರು ವ್ಯಾಪಾರ ಮಾಡುತ್ತಿದ್ದರು. ಈ ಪೈಕಿ ಒಂದು ಕುಟುಂಬಕ್ಕೆ ಸೇರಿದ 10 ವರ್ಷದ ಬಾಲಕಿಯೊಬ್ಬಳು ರಾತ್ರಿ ವೇಳೆ ಕಾಣೆಯಾಗಿದ್ದಾಳೆ. ನಿನ್ನೆ ರಾತ್ರಿ 12 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡು ಬಂದಿದ್ದ ಕುಟುಂಬ, ಒಟ್ಟಿಗೆ ಎಂಟು ಜನ ಮಲಗಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಮಳೆ ಬಂದಿದೆ. ಆಗ ಎಚ್ಚರಗೊಂಡಾಗ ಬಾಲಕಿಯು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕುಟುಂಬಸ್ಥರು ಮಳೆಯಲ್ಲೇ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಬಳಿಕ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು.

ನಗ್ನ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆ:

ಬೆಳಗ್ಗೆ 6:30ರ ಸುಮಾರಿಗೆ ಜೋಪಡಿಯ ಪಕ್ಕದ ಗುಂಡಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಶವದ ಮೇಲೆ ಸರಿಯಾಗಿ ಬಟ್ಟೆಯಿರಲಿಲ್ಲ, ಇದರಿಂದ ಕುಟುಂಬಸ್ಥರು ಅತ್ಯಾ೧ಚಾರ ಮತ್ತು ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಡೆದ ಕೇವಲ ಎರಡು ದಿನಗಳ ಹಿಂದೆ, ಇದೇ ಸ್ಥಳದ ಮತ್ತೊಂದು ಬದಿಯಲ್ಲಿ ಒಬ್ಬ ವ್ಯಕ್ತಿಯ ಬರ್ಬರ ಹತ್ಯೆ ನಡೆದಿತ್ತು. ಒಟ್ಟಾರೆ ಎರಡು ದಿನಗಳ ಅಂತರದಲ್ಲಿ ಒಂದೇ ಸ್ಥಳದಲ್ಲಿ ಎರಡು ಕೊಲೆ ಘಟನೆಗಳು ನಡೆದಿರುವುದು ಆಘಾತಕಾರಿಯಾಗಿದೆ.

ಪ್ರಸ್ತುತ, ನಜರ್‌ಬಾದ್ ಪೊಲೀಸರು ಸುಮಾರು 50 ಕುಟುಂಬಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ಘಟನೆಯಿಂದ ದಸರಾ ಸಂಭ್ರಮದ ನಡುವೆಯೇ ಸ್ಥಳೀಯರಲ್ಲಿ ಭಯ ಮತ್ತು ಆತಂಕ ಮನೆಮಾಡಿದೆ.

ತನಿಖೆಯಲ್ಲಿ ಯಾವುದೇ ಶಂಕಿತರನ್ನು ಗುರುತಿಸಲಾಗಿಲ್ಲವಾದರೂ, ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.