ಚಾಮರಾಜನಗರ ಜಿಲ್ಲೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ವಶಪಡಿಸಿಕೊಂಡಿದ್ದಕ್ಕೆ ಮನನೊಂದು ಮಹಿಳೆಯೊಬ್ಬರು ಆತ್ಮ೧ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಚಾಮರಾಜನಗರ (ಆ.16): ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಕ್ಕೆ ಜಮೀನು ವಶಕ್ಕೆ ಪಡೆದಿದ್ದಕ್ಕೆ ಮನನೊಂದು ಮಹಿಳೆಯೋರ್ವಳು ನೇಣುಬಿಗಿದುಕೊಂಡು ಸಾವನ್ನಪ್ಪಿದ ದುರ್ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ದೊಡ್ಡ ಆಲತ್ತೂರಿನಲ್ಲಿ ನಡೆದಿದೆ.
52 ವರ್ಷದ ರಾಜಮ್ಮ ಮೃತ ಮಹಿಳೆ. ರಾಜಮ್ಮರಿಗೆ ಪಿತ್ರಾರ್ಜಿತವಾಗಿ 90 ಸೆಂಟ್ ಭೂಮಿ ಬಂದಿತ್ತು. ಇದ್ದ ಚೂರುಪಾರು ಭೂಮಿಯಲ್ಲಿ ಕುಟುಂಬ ವ್ಯವಸಾಯ ಮಾಡಿ ಜೀವನ ನಡೆಸುತ್ತಿದರು. ಕಳೆದವಾರ ಇದ್ದಕ್ಕಿದ್ದ ಹಾಗೆ ಬಂದ ಕಂದಾಯ ಇಲಾಖೆಯ ಅಧಿಕಾರಿಗಳು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 20 ಸೆಂಟ್ ಭೂಮಿ ವಶಪಡಿಸಿಕೊಂಡಿರುವುದಾಗಿ ಹೇಳಿದ್ದರು. ಈ ಘಟನೆಯಿಂದ ಮನನೊಂದ ರಾಜಮ್ಮ ಇಂದು ಮುಂಜಾನೆ ತಮ್ಮ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ.
ರಾಜಮ್ಮರ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ:
ಈ ಘಟನೆಯಿಂದ ಕುಪಿತರಾದ ಗ್ರಾಮಸ್ಥರು ರಾಜಮ್ಮರ ಶವವನ್ನಿಟ್ಟು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.ರಾಜಮ್ಮರಿಗೆ ಪಿತ್ರಾರ್ಜಿತವಾಗಿ 90 ಸೆಂಟ್ ಜಮೀನು ಬಂದಿತ್ತು. ಈ ಚೂರುಪಾರು ಭೂಮಿಯಲ್ಲಿ ಅವರ ಕುಟುಂಬ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಆದರೆ ಅಧಿಕಾರಿಗಳು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ರಾಜಮ್ಮರ 20 ಸೆಂಟ್ ಭೂಮಿಯನ್ನು ವಶಪಡಿಸಿಕೊಂಡಿದ್ದು ರಾಜಮ್ಮರ ಸಾವಿಗೆ ಅಧಿಕಾರಿಗಳು ಕಾರಣವೆಂದು ಆರೋಪಿಸಿರುವ ಗ್ರಾಮಸ್ಥರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಯಾವುದೇ ಕಾರಣಕ್ಕೂ ಶವವನ್ನು ತೆಗೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.ಈ ಘಟನೆಯಿಂದ ಗ್ರಾಮದಲ್ಲಿ ಆಕ್ರೋಶದ ವಾತಾವರಣ ಸೃಷ್ಟಿಯಾಗಿದ್ದು, ಜಿಲ್ಲಾಡಳಿತದಿಂದ ತಕ್ಷಣದ ಕ್ರಮಕ್ಕೆ ಒತ್ತಾಯವಾಗುತ್ತಿದೆ.
