ಬೆಂಗಳೂರಿನ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಟ್ರ್ಯಾಕ್‌ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ರೈಲು ಸಂಚಾರ ಅರ್ಧಗಂಟೆಗೂ ಹೆಚ್ಚು ಕಾಲ ವ್ಯತ್ಯಯವಾಯಿತು. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು (ಆ.12): ಮೆಜೆಸ್ಟಿಕ್‌ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಹಸಿರು ಮಾರ್ಗದ ಕಡೆ ಹೋಗುವ ಟ್ರ್ಯಾಕ್‌ಗೆ ವ್ಯಕ್ತಿಯೊಬ್ಬ ಹಾರಿ ಆತ್ಮ1ಹತ್ಯೆಗೆ ಮುಂದಾದ ಘಟನೆ ನಡೆದಿದ್ದು ಇದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ರೈಲು ಸಂಚಾರ ವ್ಯತ್ಯಯವಾಗಿ ಪ್ರಯಾಣಿಕರು ಪರದಾಡಿದ್ದಾರೆ.

ರಾತ್ರಿ 10.15 ಗಂಟೆಗೆ ವ್ಯಕ್ತಿಯೊಬ್ಬ ಹಾರಿದ್ದಾನೆ. ತಕ್ಷಣ ಮೆಟ್ರೋ ಭದ್ರತಾ ಸಿಬ್ಬಂದಿ ತುರ್ತು ಪರಿಸ್ಥಿತಿಯ ಇಟಿಎಸ್‌ ಬಟನ್‌ ಒತ್ತಿ ರೈಲನ್ನು ನಿಲ್ಲಿಸಿದ್ದಾರೆ. ನಂತರ ಗಾಯಗೊಂಡಿದ್ದ ಆತನನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ ಎಂದು ಬಿಎಂಅರ್‌ಸಿಎಲ್‌ ಭದ್ರತಾ ಮುಖ್ಯಸ್ಥ ಸೆಲ್ವಂ ತಿಳಿಸಿದರು.

ಇದನ್ನೂ ಓದಿ: 'ಬನ್ನಿ ಸರ್, ಎಲ್ಲ ಸ್ಮಾರಕ ಕೆಡವಿಬಿಡೋಣ..' ವಿಷ್ಣು ಸ್ಮಾರಕ ಧಂಸ ಪ್ರಕರಣ, ಉಪೇಂದ್ರ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದು ಏಕೆ?

ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ರೈಲು ಏಕಾಏಕಿ ನಿಂತಿದ್ದರಿಂದ ನಾವೆಲ್ಲ ಹೊರಬಂದು ನೋಡಿದೆವು. ರೈಲಿನ ಕೆಳಗೆ ಬಿದ್ದಿದ್ದ ವ್ಯಕ್ತಿಯನ್ನು ಮೆಟ್ರೋ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.

ಪ್ರಯಾಣಿರಿಗೆ ತೊಂದರೆ ಆಗದಂತೆ ಬಿಎಂಆರ್‌ಸಿಎಲ್‌ ಈ ವೇಳೆ ನಾಲ್ಕು ಟ್ರಿಪ್‌ಗಳ ಶಾರ್ಟ್‌ ಲೂಪ್‌ ರೈಲುಗಳನ್ನು ಓಡಿಸಿದ್ದು, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಯಿತು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.