ಶಿರಸಿ ತಾಲೂಕಿನ ಚಿಪಗಿ ಸೋಮನಳ್ಳಿಯಲ್ಲಿ ಏರ್‌ಗನ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿ 9 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮಕ್ಕಳು ಆಟವಾಡುವಾಗ ಈ ದುರ್ಘಟನೆ ಸಂಭವಿಸಿದೆ.

 ಶಿರಸಿ (ಸೆ.6): ಅಡಕೆ ತೋಟದಲ್ಲಿದ್ದ ಏರ್‌ಗನ್‌ನಿಂದ ಮಕ್ಕಳು ಆಟವಾಡುವಾಗ ಬಾಲಕನೊಬ್ಬ ಆಕಸ್ಮಿಕವಾಗಿ ಗುಂಡು ಹಾರಿಸಿದ್ದರಿಂದ 9 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಚಿಪಗಿ ಸೋಮನಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

Add Asianetnews Kannada as a Preferred SourcegooglePreferred

ಚಿಪಗಿ ಸೋಮನಳ್ಳಿ ನಿವಾಸಿ ಕೂಲಿ ಕಾರ್ಮಿಕ ಬಸಪ್ಪ ಉಂಡಿಯರ್‌ ಮಗ ಕರಿಯಪ್ಪ (9) ಮೃತ ಬಾಲಕ. ಅಡಕೆ ತೋಟದಲ್ಲಿ ಮಂಗನ ಕಾಟ ತಪ್ಪಿಸಲು ನಿತಿಶ್ ಗೌಡ ಏರ್‌ಗನ್ ಹಿಡಿದು ತೋಟ ಕಾಯುತ್ತಿದ್ದು, ಶುಕ್ರವಾರ ಬೆಳಗ್ಗೆಯೂ ತೋಟ ಕಾದು ಮೊಬೈಲ್ ಕರೆನ್ಸಿ ಹಾಕಿಸಿಕೊಳ್ಳಲು ಗಣಪತಿ ಹೆಗಡೆ ಅವರ ಮನೆಗೆ ಹೋಗಿದ್ದಾರೆ. ಅಲ್ಲಿ ಈದ್ ಮಿಲಾದ್ ರಜೆಯ ಕಾರಣ ಆಟವಾಡುತ್ತಿದ್ದ ಮೂವರು ಮಕ್ಕಳು ನಿತಿಶ್‌ ಅವರತ್ತ ಬಂದಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಮೃತ ಕರಿಯಪ್ಪನ ತಮ್ಮ 7 ವರ್ಷದ ಬಾಲಕ ಆಕಸ್ಮಿಕವಾಗಿ ಏರ್‌ಗನ್ ಟ್ರಿಗರ್ ಒತ್ತಿದ್ದಾನೆ. ಇದರಿಂದ ಹಾರಿದ ಗುಂಡು ಕರಿಯಪ್ಪನ ಎದೆಗೆ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಮನೆ ಮಾಲೀಕ ಗಣಪತಿ ಹೆಗಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.