ತಮಿಳುನಾಡಿನ ಕರೂರಿನಲ್ಲಿ ವಿಜಯ್ ರಾಜಕೀಯ ರ್ಯಾಲಿ ವೇಳೆ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಚೆನ್ನೈಯಲ್ಲಿ ನಡೆಯಬೇಕಿದ್ದ ‘ಕಾಂತಾರ ಚಾಪ್ಟರ್ 1’ ಪ್ರೀ ರಿಲೀಸ್ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.
ಬೆಂಗಳೂರು (ಸೆ.30): ತಮಿಳುನಾಡಿನ ಕರೂರಿನಲ್ಲಿ ವಿಜಯ್ ರಾಜಕೀಯ ರ್ಯಾಲಿ ವೇಳೆ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಚೆನ್ನೈಯಲ್ಲಿ ನಡೆಯಬೇಕಿದ್ದ ‘ಕಾಂತಾರ ಚಾಪ್ಟರ್ 1’ ಪ್ರೀ ರಿಲೀಸ್ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಪ್ರಕಟಣೆ ನೀಡಿರುವ ಹೊಂಬಾಳೆ ಫಿಲಂಸ್, ‘ಇತ್ತೀಚಿನ ತಮಿಳುನಾಡಿನಲ್ಲಿ ನಡೆದ ದುರಂತ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಮಂಗಳವಾರ ಚೆನ್ನೈನಲ್ಲಿ ನಿಗದಿಯಾಗಿದ್ದ ‘ಕಾಂತಾರ ಅಧ್ಯಾಯ 1’ರ ಪ್ರಚಾರ ಕಾರ್ಯಕ್ರಮ ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಇದು ನೊಂದವರೊಂದಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಒಗ್ಗಟ್ಟಿನ ಸಮಯ ಎಂದು ನಾವು ನಂಬುತ್ತೇವೆ. ನೊಂದ ಕುಟುಂಬಗಳಿಗೆ ನಮ್ಮ ಗಾಢಸಂತಾಪ ಮತ್ತು ಪ್ರಾರ್ಥನೆ’ ಎಂದು ತಿಳಿಸಿದೆ.
ಅ.2ರಂದು ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾ ವಿಶ್ವಾದ್ಯಂತ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಚಿತ್ರತಂಡ ಭರದ ಪ್ರಚಾರ ನಡೆಸುತ್ತಿದೆ. ಅದರಂತೆ ಮಂಗಳವಾರ ಚೆನ್ನೈಯಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಂತಾರ ವಿವಾದಕ್ಕೆ ಪವನ್, ಅಲ್ಲು ಫ್ಯಾನ್ಸ್
ಕಾಂತಾರ ವಿವಾದಕ್ಕೆ ನಟ ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳು ಕೂಡ ಜೊತೆಯಾಗಿದ್ದಾರೆ. ‘ಕನ್ನಡ ಚಿತ್ರರಂಗ, ಕನ್ನಡ ಭಾಷೆ ಮತ್ತು ಕನ್ನಡ ಪ್ರೇಕ್ಷಕರ ಹೆಸರಿನಲ್ಲಿ ನಮ್ಮ ತೆಲುಗು ಚಿತ್ರಗಳಾದ ಪುಷ್ಪ 2, ಹರಿಹರ ವೀರಮಲ್ಲು ಚಿತ್ರಗಳ ಬ್ಯಾನರ್ಗಳನ್ನು ಹರಿದು ಹಾಕಿದ್ದರು. ಓಜಿ ಚಿತ್ರದ ಬ್ಯಾನರ್ ಕೂಡ ಹರಿದಿದ್ದು, ಪ್ರದರ್ಶನಗಳಿಗೆ ಅಡ್ಡಿಪಡಿಸಿದ್ದಾರೆ. ಕರ್ನಾಟಕದಲ್ಲಿ ತೆಲುಗು ಚಿತ್ರಗಳ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವಾಗ ಅದೇ ಕರ್ನಾಟಕದವರ ಚಿತ್ರವನ್ನು ನಾವು ಯಾಕೆ ಸ್ವಾಗತಿಸಬೇಕು’ ಎನ್ನುವ ಮೂಲಕ ಕಾಂತಾರ 1 ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
