Anekal Husband Arrested for Wifes Murder ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದ ಪತಿ, ಆಕೆ ಕರೆಂಟ್ ಶಾಕ್‌ನಿಂದ ಮೃತಪಟ್ಟಿದ್ದಾಳೆಂದು ನಾಟಕವಾಡಿದ್ದ. ಆದರೆ, ಮೃತರ ಮಗಳು ನೀಡಿದ ಸಣ್ಣ ಸುಳಿವಿನ ಮೇರೆಗೆ ತನಿಖೆ ನಡೆಸಿದ ಹೆಬ್ಬಗೋಡಿ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ. 

ಆನೇಕಲ್‌ (ಅ.18): ಶೀಲ ಶಂಕಿಸಿ ಹೆಂಡ್ತಿಯನ್ನು ಕೊಲೆ ಮಾಡಿದ್ದ ವ್ಯಕ್ತಿ ಬಳಿಕ ಆಕೆ ಕರೆಂಟ್‌ ಶಾಕ್‌ ಹೊಡೆದು ಸತ್ತಿದ್ದಾಳೆ ಡ್ರಾಮಾ ಕಟ್ಟಿದ್ದ. ಆದರೆ, ಸಣ್ಣ ಸೂಕ್ಷ್ಮದ ಹಿಂದೆ ಹೋಗಿ ತನಿಖೆ ಮಾಡಿದ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಪತ್ನಿಯನ್ನ ಕೊಲೆ ಮಾಡಿ ಡ್ರಾಮಾ ಮಾಡಿದ್ದ ಗಂಡನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಕರೆಂಟ್ ಶಾಕ್ ನಿಂದ ಸಾವನ್ನಪ್ಪಿದ್ದಾಳೆಂದು ಈತ ಕಥೆ ಕಟ್ಟಿದ್ದ. ಹೆಬ್ಬಗೋಡಿ ಪೊಲೀಸರ ತನಿಖೆಯಿಂದ ಆರೋಪಿಯನ್ನು ಬಂಧಿಸಲಾಗಿದೆ.

Add Asianetnews Kannada as a Preferred SourcegooglePreferred

ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 15 ರಂದು ಕೊಲೆ ಪ್ರಕರಣ ನಡೆದಿತ್ತು. ಶಿಕಾರಿಪಾಳ್ಯದ ಓಂ ಶಕ್ತಿ ಲೇಔಟ್ ನಲ್ಲಿ ಪತ್ನಿ ಶೀಲ ಶಂಕಿಸಿ ಸ್ವತಃ ಪತಿಯೇ ಆಕೆಯನ್ನು ಕೊಲೆ ಮಾಡಿದ್ದ. 32 ವರ್ಷ ರೇಷ್ಮಾ ತನ್ನ ಪತಿ ಪ್ರಶಾಂತ್‌ ಕುಮಾರ್‌ನಿಂದ ಕೊಲೆಯಾಗಿದ್ದಳು. ಇನ್ನು ರೇಷ್ಮಾಗೆ ಇದು 2ನೇ ವಿವಾಹವಾಗಿತ್ತು. ಮೊದಲ ಪತಿ ಸಾವು ಕಂಡ ಬಳಿಕ 15 ವರ್ಷದ ಮಗಳೊಂದಿಗೆ ರೇಷ್ಮಾ ವಾಸವಿದ್ದಳು.

ಈ ವೇಳೆ ರೇಷ್ಮಾಗೆ ಇನ್ಸ್‌ಟಾಗ್ರಾಮ್‌ ಮೂಲಕ ಪ್ರಶಾಂತ್‌ ಎನ್ನುವ ವ್ಯಕ್ತಿ ಪರಿಚಯವಾಗಿದ್ದ. 9 ತಿಂಗಳ ಹಿಂದೆ ರೇಷ್ಮಾ ಹಾಗೂ ಪ್ರಶಾಂತ್‌ ವಿವಾಹವಾಗಿದ್ದರು. ಆದರೆ, ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತ ಪಡಿಸಿ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ.

ಸೂಕ್ಷ್ಮ ಗಮನಿಸಿ ಪೊಲೀಸ್‌ಗೆ ತಿಳಿಸಿದ್ದ ಮಗಳು

15ನೇ ತಾರೀಕಿನಿಂದು ಇದೇ ರೀತಿಯಾಗಿ ಗಲಾಟೆ ನಡೆದಿದೆ. ಈ ವೇಳೆ ಕೈನಿಂದ ಹೊಡೆದು ಕತ್ತು ಹಿಸುಕಿ ರೇಷ್ಮಾಳನ್ನು ಪ್ರಶಾಂತ್‌ ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಮೃತದೇವನ್ನು ಬಾತ್‌ರೂಮ್‌ನಲ್ಲಿ ಎಸೆದು, ವಾಟರ್ ಹೀಟರ್ ಸ್ವೀಚ್ ಅನ್ ಮಾಡಿ ಅಲ್ಲಿಂದ ಪರಾರಿಯಾಗಿದ್ದ.

ಮೃತ ರೇಷ್ಮಾ ಅವರ ಮಗಳು ಮನೆಗೆ ಬಂದು ನೋಡಿದಾಗ ಅಸ್ವಸ್ಥಳಾಗಿ ತಾಯಿ ಬಾತ್‌ರೂಮ್‌ನಲ್ಲಿ ಬಿದ್ದಿದ್ದು ಕಂಡಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಆದರೆ, ಮನೆಯ ಬಾತ್ ರೂಮ್ ಚಿಲಕ ಹೊರಗಿನಿಂದ ಹಾಕಿದ್ದರಿಂದ ಮಗಳು ಅನುಮಾನಗೊಂಡಿದ್ದಳು.

ಈ ವಿಚಾರವನ್ನು ಪೊಲೀಸರಿಗೆ ಹಾಗೂ ಸಂಬಂಧಿಕರಿಗೆ ರೇಷ್ಮಾ ಅವರ ಮಗಳು ತಿಳಿಸಿದ್ದಳು. ಕೂಡಲೇ ಆರೋಪಿ ಪ್ರಶಾಂತ್‌ನನ್ನು ವಶಕ್ಕೆ ಪಡೆದು ಹೆಬ್ಬಗೋಡಿ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಪ್ರಶಾಂತ್‌ ಕೊಲೆಯ ರಹಸ್ಯ ಬಾಯಿಬಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಹೆಬ್ಬಗೋಡಿ ಪೊಲೀಸರು ಜೈಲಿಗಟ್ಟಿದ್ದಾರೆ.