ಸಚಿವೆ ನಿರ್ಮಲಾ ಉಟ್ಟ ಇಳಕಲ್ ಸೀರೆಗೆ ಕಸೂತಿ ಮಾಡಿದ್ದು ಧಾರವಾಡದ ಮಹಿಳಾಮಣಿಗಳು

By Vinutha PerlaFirst Published Feb 1, 2023, 1:31 PM IST
Highlights

ಕೈಮಗ್ಗದ ಸೀರೆಯನ್ನು ಇಷ್ಟಪಡುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಬಾರಿ ಬಾಗಲಕೋಟೆಯ ಇಳಕಲ್ ಸೀರೆಯುಟ್ಟು ಬಜೆಟ್ ಮಂಡಿಸಿದರು. ಈ ಸೀರೆಗೆ ಕಸೂತಿ ಹಾಕಿರೋದು ನಾರಾಯಣಪುರದಲ್ಲಿ ಇರುವ ಆರತಿ ಕ್ರಾಪ್ಟ್ಸ್‌ನ ಮಹಿಳಾಮಣಿಗಳು ಅನ್ನೋದು ವಿಶೇಷ. 

ಧಾರವಾಡ: ಕೇಂದ್ರ ಬಜೆಟ್ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಧರಿಸಿದ ಸೀರೆಗಳು ಪ್ರತಿ ಬಾರಿಯೂ ಮಹತ್ವವನ್ನು ಪಡೆದುಕೊಂಡಿವೆ. ಕೈಮಗ್ಗದ ಸೀರೆಯನ್ನು ಇಷ್ಟಪಡುವ ಸಚಿವೆ ಈ ಬಾರಿಯೂ ಅಂಥಾ ಸೀರೆಗಳ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡನೆಗಾಗಿ ಗಾಢ ಕೆಂಪು ಬಣ್ಣದ ಇಳಕಲ್ ಸೀರೆಯನ್ನು ಉಟ್ಟಿದ್ದರು. ಇಳಕಲ್ ಸೀರೆ ಕರ್ನಾಟಕದ ಬಾಗಲಕೋಟೆಯ ಜಿಲ್ಲೆಯಲ್ಲಿ ತಯಾರಾಗುತ್ತಿದ್ದು, ಹೆಸರುವಾಸಿಯಾಗಿದೆ.

ಇಳಕಲ್ ಸೀರೆಯಲ್ಲಿ ಕಸೂತಿ ಕಲೆಯರಳಿಸಿದ ಧಾರವಾಡದ ಮಹಿಳಾಮಣಿಗಳು
ಸಚಿವೆ ನಿರ್ಮಲಾ ಸೀತಾರಾಮನ್, ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮರೂನ್ ಕಲರ್) ಬಣ್ಣದ ಸೀರೆಯುಟ್ಟು  ಬಜೆಟ್ ಮಂಡಿಸಿದರು. ಈ ಸೀರೆಗೆ ಕಸೂತಿ ಹಾಕಿ ವಿಶೇಷವಾಗಿ ರೂಪಿಸಿದ್ದು ಧಾರವಾಡ ನಗರದಲ್ಲಿ. ಇಲ್ಲಿನ ನಾರಾಯಣಪುರದಲ್ಲಿ ಇರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್‌ನ ಮಹಿಳಾಮಣಿಗಳು ಅನ್ನುವುದು ಇನ್ನೂ ವಿಶೇಷ. ಜಿಲ್ಲೆಯ ಸಂಸದರು, ಕೇಂದ್ರ ಸಚಿವರು ಆಗಿರುವ ಪ್ರಲ್ಹಾದ ಜೋಶಿ ಅವರು ನವಲಗುಂದ ಕಸೂತಿ ಕಲೆ ಬಗ್ಗೆ, ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮ (Programme) ಒಂದರಲ್ಲಿ ವಿವರಿಸಿ, ಈ ಸೀರೆಗಳನ್ನು ಜಿಲ್ಲೆಯ ಪರವಾಗಿ ಉಡುಗೊರೆ (Gift)ಯಾಗಿ ನೀಡಿದ್ದರು.

Budget 2023: ಕೈಮಗ್ಗ ಸೀರೆಯ ಮೇಲಿನ ಪ್ರೀತಿ ಸಾಬೀತುಪಡಿಸಿದ ಸಚಿವೆ, ಕೆಂಪು ಬಣ್ಣದ ಇಳಕಲ್ ಸೀರೆಯಲ್ಲಿ ನಿರ್ಮಲಾ

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಸೈಯದ್ ನಯೀಮ್ ಅಹ್ಮದ ಮೂಲಕ ಕಸೂತಿ ಪರಿಣಿತರನ್ನು ಗುರುತಿಸಿ, ಕಸೂತಿ ಸೀರೆ (Saree) ತಯಾರಿಗೆ ಸೂಚಿಸಿದ್ದರು. ಆರತಿ ಕ್ರಾಪ್ಟ್ಸ್ ಮಾಲೀಕರಾದ  ಆರತಿ ಹಿರೇಮಠ ಅವರು ಸಂತಸದಿಂದ ಕಸೂತಿ ಕಾರ್ಯ ಆರಂಭಿಸಿದ್ದರು. 

ಆರತಿ ಕ್ರಾಪ್ಟ್ಸ್ ನ ಕಸೂತಿ ಕೈ ಚಳಕ:
ಆರತಿ ಕ್ರಾಪ್ಟ್ಸ್ ಮಾಲೀಕರಾದ  ಆರತಿ ಹಿರೇಮಠ ಅವರು ಸಂತಸದಿಂದ ಕಸೂತಿ ಕಾರ್ಯ ಆರಂಭಿಸಿದ್ದರು.ಕಳೆದ 32 ವರ್ಷಗಳಿಂದ ಕಸೂತಿ ಕ್ಷೇತ್ರದಲ್ಲಿ ತೊಡಗಿ ಕೊಂಡಿರುವ ಆರತಿ, ಸುಮಾರು 210 ಜನ ಮಹಿಳೆಯರ ತಂಡ ಕಟ್ಟಿ, ಅವರಿಗೆ ಅಗತ್ಯವಿರುವ ಕಸೂತಿ ತರಬೇತಿ ನೀಡಿ, ಸ್ವಯಂ ಉದ್ಯೋಗ ನೀಡಿದ್ದಾರೆ. ಗ್ರಾಹಕರಿಂದ ಕಸೂತಿ ಸಾರಿ, ಶಲ್ಯೆ, ಉಡುಗೆಗಳ ಬೇಡಿಕೆ ಪಡೆಯುವ ಆರತಿ ಹಿರೇಮಠ ಅವರು ಕಸೂತಿ ಮಾಡುವ  ತಮ್ಮ ಮಹಿಳಾ ಸಿಬ್ಬಂದಿ ಮನೆಗೆ ತೆರಳಿ, ಪರಿಕರ ಪೂರೈಸುತ್ತಾರೆ ಮತ್ತು ಸಿದ್ದವಾದ ವಸ್ತುಗಳನ್ನು ತಾವೇ ಕಲೆಕ್ಟ್ ಮಾಡುತ್ತಾರೆ.

ಇಳಕಲ್ ಸೀರೆ ಅಂದ್ರೆ ಸುಮ್ನೆ ಏನಲ್ಲ..ಸಾಂಪ್ರದಾಯಿಕ ಸೀರೆಗಿದೆ 1000 ವರ್ಷದ ಇತಿಹಾಸ

ಕೇಂದ್ರ ಹಣಕಾಸು ಸಚಿವರಿಗೆ ಕಳುಹಿಸಿದ್ದ ಸೀರೆಗಳ ವಿಶೇಷತೆಯೇನು ?
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮ್ ಅವರ ಆಸಕ್ತಿಯ ಬೇಡಿಕೆಯಂತೆ  ಸೀರೆಗಳನ್ನು ಕಳುಹಿಸಲಾಗಿದ್ದು, ಅದರಲ್ಲಿ ಇಂದು ಅವರು ತೊಟ್ಟಿರುವ ಗಾಢ ಕೆಂಪು ಬಣ್ಣದ  ಸೀರೆಯೂ ಸೇರಿದೆ. ಕೈಮಗ್ಗದಲ್ಲಿ ನೇಯ್ದ ಇಳಕಲ್‌ ರೇಷ್ಮೆ  ಸೀರೆಗಳಿಗೆ ಸಾಂಪ್ರದಾಯಿಕ ಧಾರವಾಡ ಕಸೂತಿ ಹಾಕಲಾಗಿದೆ. ಐದೂವರೇ ಮೀಟರ್ ಉದ್ದದ ಇಳಕಲ್‌ ಸೀರೆಗೆ ಚಿಕ್ಕಪರಾಸ್ ದಡಿಯಿದ್ದು, ತೇರು, ಗೋಪುರ, ನವಿಲು, ಕಮಲದ ಚಿತ್ರಗಳ ಕಸೂತಿ ಹಾಕಲಾಗಿದೆ. ಕೈಮಗ್ಗ ಉದ್ಯಮಕ್ಕೆ  ಪ್ರೋತ್ಸಾಹಿಸುವ ಮತ್ತು  ಸ್ವಯಂ ಉದ್ಯೋಗನಿರತ ಮಹಿಳೆಯರನ್ನು ಬೆನ್ನು ತಟ್ಟುವ ಕೇಂದ್ರ ಸಚಿವರ ಈ ಕ್ರಮ ನಮಗೆ ಸಂತಸ ಮತ್ತು ಹೆಮ್ಮೆ ಮೂಡಿಸಿದೆ. 

ಕೇಂದ್ರ ಬಜೆಟ್ ಮಂಡಿಸುವ ಸಂದರ್ಭದಲ್ಲಿ  ಇಡೀ ದೇಶ, ಜಗತ್ತು ಅವರತ್ತ ದೃಷ್ಟಿ ನೆಟ್ಟಿರುತ್ತದೆ, ಅವರು ನಮ್ಮೂರಿನ ಸೀರೆಯಲ್ಲಿ ಬಲಿಷ್ಠ ಭಾರತ ದೇಶದ ಬಜೆಟ್ ಮಂಡಿಸುತ್ತಿರುವುದು ನಮ್ಮ ಜಿಲ್ಲೆ, ರಾಜ್ಯಕ್ಕೆ ಹೆಮ್ಮೆ ಮೂಡಿಸಿದೆ. ಮತ್ತು ಕಸೂತಿ ಅಂತಹ ಗ್ರಾಮೀಣ ಕಲೆಗಳಿಗೆ, ಮಹಿಳೆಯರಿಗೆ ಈ ಮೂಲಕ ಬೆಂಬಲಿಸಿ, ಪ್ರೋತ್ಸಾಹ ನೀಡುತ್ತಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಸೂತಿ ಕಲೆ ತಜ್ಞೆ ಆರತಿ ಹಿರೇಮಠ ಕೃತಜ್ಞತೆ ಸಲ್ಲಿಸಿದ್ದಾರೆ.

click me!