ಧರ್ಮಸ್ಥಳದ ಧರ್ಮಾಧಿಕಾರಿಯವರನ್ನು ಭೇಟಿಯಾದ ರಿಷಬ್ ಶೆಟ್ಟಿ ದಂಪತಿ

Nov 2, 2022, 9:19 PM IST

ಬೆಳ್ತಂಗಡಿ (ನ.02): ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಧರ್ಮಸ್ಥಳಕ್ಕೆ ನಟ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಭೇಟಿ ನೀಡಿದ್ದು,ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ದಂಪತಿಗೆ ನಟ ಪ್ರಮೋದ್ ಶೆಟ್ಟಿ ‌ಸಾಥ್ ಕೊಟ್ಟಿದ್ದಾರೆ. ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ರಿಷಬ್ ದಂಪತಿ  ಭೇಟಿಯಾಗಿದ್ದಾರೆ. ಈ ವೇಳೆ ಕಾಂತಾರಾ ಆ ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆಯನ್ನು ಹೆಗ್ಗಡೆ ಅವರು ವ್ಯಕ್ತಪಡಿಸಿದ್ದು, ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆಯವರ ಜೊತೆಗೂ ರಿಷಬ್ ಚರ್ಚೆ ನಡೆಸಿದ್ದಾರೆ. ಕೆಲ ಕಾಲ ಸಿನಿಮಾದ ಬಗ್ಗೆ ಮಾತುಕತೆ ನಡೆಸಿದ ರಿಷಬ್ ಶೆಟ್ಟಿ ದಂಪತಿ ಬಳಿಕ ಧರ್ಮಾಧಿಕಾರಿಗಳ ಆಶೀರ್ವಾದ ಪಡೆದಿದ್ದಾರೆ. ಇನ್ನು ಧರ್ಮಸ್ಥಳ ಭೇಟಿ ಬಳಿಕ  ಮಾತನಾಡಿದ ನಟ ರಿಷಬ್ ಶೆಟ್ಟಿ, ಸಿನಿಮಾ ಮಾಡುವ ಮುನ್ನ ಹೆಗ್ಗಡೆಯವರನ್ನ ಭೇಟಿ ಮಾಡಿದ್ದೆ. ಆ ಬಳಿಕ ಟ್ರೇಲರ್ ರಿಲೀಸ್ ಆದ ಬಳಿಕ ಮತ್ತೆ ಬಂದಿದ್ದೆ. ಸಿನಿಮಾ ರಿಲೀಸ್  ಬಳಿಕ ಹೆಗ್ಗಡೆಯವರ ಭೇಟಿಗೆ ಸಾಕಷ್ಟು ಸಲ ಬರಬೇಕು ಅಂದುಕೊಂಡಿದ್ದೆ. ಆದರೆ ಇದೀಗ ಕಾಲ ಕೂಡಿ ಬಂತು, ಬಂದು ಆಶೀರ್ವಾದ ಪಡೆದೆವು. ಸಿನಿಮಾ 30 ದಿನ ದಾಟಿ ಯಶಸ್ವಿಯಾಗಿ ಓಡ್ತಾ ಇದೆ ಎಂದು ತಿಳಿಸಿದರು.