ಮಕ್ಕಳು ಶಾಲೆಗೆ ಹೋಗಿದ್ದಾರಾ.. ಪೋಷಕರೇ ಎಚ್ಚರ ! ಅಪಹರಣಕಾರರ ಪತ್ತೆ ಹಚ್ಚದ ಖಾಕಿ !

Sep 12, 2023, 10:19 AM IST

ಪೋಷಕರೇ.. ನಿಮ್ಮ ಮಕ್ಕಳು ಶಾಲೆಗೆ ಹೋಗ್ತಿದ್ದಾರಾ..? ಶಾಲೆಗಷ್ಟೇ ಅಲ್ಲ ಮನೆಯಿಂದ ಮಕ್ಕಳು ಹೊರ ಹೋದರೆ ಮರಳಿ ಮನೆ ಸೇರೋವರೆಗೂ ನಿಗಾ ಇಟ್ಟಿರಿ.. ಹೌದು ರಾಯಚೂರಿನಲ್ಲಿ(Raichur) ನಡೆದ ಘಟನೆಯೊಂದು ಈಗ ಪೋಷಕರನ್ನು ಎಚ್ಚರಿಸುವಂತಾಗಿದೆ. ಈ ಬಾಲಕನ ಹೆಸರು ಅಮಾನ್. 9ನೇ ತರಗತಿ ವಿದ್ಯಾರ್ಥಿ.. ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದ ಈತ ಸೆಪ್ಟೆಂಬರ್ 6ರಂದು ಮಧ್ಯಾಹ್ನ 2ಗಂಟೆ ಸುಮಾರಿಗೆ ಶಾಲೆಯಿಂದ(School) ಮನೆ ಕಡೆ ಬರುತ್ತಿದ್ದ. ಮಾರ್ಗ ಮಧ್ಯೆ ಅಪರಿಚಿತರ ಗ್ಯಾಂಗೊಂದು ಅಮಾನ್‌ಗೆ ಚಾಕಲೇಟ್ ಆಸೆ ತೋರಿಸಿದೆ. ಆದ್ರೆ, ಅದಕ್ಕೆಲ್ಲ ಬಾಲಕ(Boy) ಸೊಪ್ಪು ಹಾಕದಿದ್ದಾಗ ಹಿಂಬದಿಯಿಂದ ಮುಖಕ್ಕೆ ಬಟ್ಟೆಯಿಂದ ಮುಚ್ಚಿ ಪ್ರಜ್ಞೆ ತಪ್ಪಿಸಿ ವಾಹನದಲ್ಲಿ ಅಪಹರಿಸಿದ್ದಾರೆ. ಬಳಿಕ ತಿಂಥಣಿ ಬ್ರಿಜ್ ಬಳಿ ಕಾರು ಬದಲಾಯಿಸಿ, ದೇವದುರ್ಗ ತಾಲೂಕಿನ ಜಾಲಹಳ್ಳಿಗೆ  ಬಾಲಕನನ್ನು ಕರೆದೊಯ್ದಿದ್ದಾರೆ. ಅಷ್ಟೊತ್ತಿಗೆ ಬಾಲಕನಿಗೆ ಪ್ರಜ್ಞೆ ಬಂದಿದೆ. ಆದರೂ ತುಟಿ ಪಿಟಿಕ್ ಎನ್ನದ ಬಾಲಕ ಕಾರ್ನಲ್ಲಿ ಯಾರು ಇಲ್ಲದ ವೇಳೆ ಸಿನಿಮೀಯ ರೀತಿಯಲ್ಲಿ ಎಸ್ಕೇಪಾಗಿದ್ದಾನೆ. ಇತ್ತ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದ ಪೋಷಕರಿಗೆ ಸಂಜೆ ಒಂದು ಫೋನ್ ಕಾಲ್ ಬರುತ್ತೆ. ಸಂಜೆ ವೇಳೆ ಜಾಲಹಳ್ಳಿಯಿಂದ ಬಾಲಕ ಅಮಾನ್ ಪೋಷಕರಿಗೆ ಫೋನ್ ಮಾಡಿ ವಿಷ್ಯ ತಿಳಿಸಿದ್ದಾನೆ. ಕೂಡಲೇ ಪೋಷಕರು ಬಂದು ಮಗನನ್ನು ಕರೆದುಕೊಂಡು ಹೋಗಿದ್ದಾರೆ. ತನ್ನ ಚಾಣಾಕ್ಷತನದಿಂದ ಬಾಲಕ ಅಪಹರಣಕಾರರಿಂದ(Kidnappers) ತಪ್ಪಿಸಿಕೊಂಡು ಬಂದಿದ್ದಾನೆ. ಈ ಘಟನೆ ಈಗ ಹಟ್ಟಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರನ್ನೂ ಬೆಚ್ಚಿ ಬೀಳಿಸಿದೆ. ಇನ್ನು ಘಟನೆ ನಡೆದು 5 ದಿನಗಳು ಕಳೆದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ, ಅಪಹರಣಕಾರರ ಸುಳಿವಿಲ್ಲ. ಹೀಗಾಗಿ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಕೂಡ ಭಯಪಡುವ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ವೀಕ್ಷಿಸಿ:  ಕರ್ನಾಟಕದ ಹಾಲು ಮಹಾರಾಷ್ಟ್ರದ ಪಾಲು: ಸೈಲೆಂಟಾಗಿ ಕರುನಾಡ ಗಡಿಗೆ ‘ಮಹಾ’ ಡೈರಿಗಳ ಎಂಟ್ರಿ !