Apr 9, 2022, 8:04 PM IST
ಬೆಂಗಳೂರು (ಏ.9): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ವ್ಹೀಲಿಂಗ್ (Wheeling) ಮಾಡುವ ಪುಂಡರ ಹಾವಳಿ ಆರಂಭವಾಗಿದೆ. ಬೆಂಗಳೂರು ಪೊಲೀಸರು (Bangalore Police) ವ್ಹೀಲಿಂಗ್ ಮೇಲೆ ಸಾಕಷ್ಟು ನಿಗಾ ವಹಿಸಿ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಯುವಜನತೆ ಮಾತ್ರ ಇದರ ಕ್ರೇಜ್ ನಿಂದ ಹೊರಬರುತ್ತಿಲ್ಲ. ವ್ಹೀಲಿಂಗ್ ಮಾಡುವ ಮೂಲಕ ತಮ್ಮ ಪ್ರಾಣದೊಂದಿಗೆ ಇತರರ ಪ್ರಾಣಕ್ಕೂ ಸಂಚಕಾರ ತರುತ್ತಿದ್ದಾರೆ.
ಅಂಥದ್ದೊಂದು ಘಟನೆ ಬೆಂಗಳೂರಿನ ಗೋರಿಪಾಳ್ಯದಲ್ಲಿ (Goripalya) ನಡೆದಿದೆ. ನರಸಿಂಹಸ್ವಾಮಿ ದೇವಸ್ಥಾನದ (Narasimhaswamy Temple)ಬಳಿ ಕಳೆದ ಬುಧವಾರ ನಡೆದ ಘಟನೆ ಇದಾಗಿದ್ದು, ಇಬ್ಬರು ಪುಂಡರು ವ್ಹೀಲಿಂಗ್ ಶೋಕಿ ಮಾಡುತ್ತಿದ್ದ ವೇಳೆ, ರಸ್ತೆಯಲ್ಲಿ ನಡೆದು ಬರುತ್ತಿದ್ದ ಮಹಿಳೆಗೆ ಗುದ್ದಿದ್ದಾರೆ. ಇಡೀ ಬೈಕ್ ಅನ್ನು ಮಹಿಳೆಯ ಮೇಲೆ ಬೀಳಿಸಿದ್ದಾರೆ.
ಆಕ್ಸಿಜನ್ ಇಲ್ಲದ 108: ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು
ಈ ಘಟನೆಯಲ್ಲಿ ಮಹಿಳೆಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಲೆ ಹಾಗೂ ಬೆನ್ನಿನ ಭಾಗಕ್ಕೆ ಹೆಚ್ಚಿನ ಪೆಟ್ಟು ಬಿದ್ದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜನ ಗಲಾಟೆ ಮಾಡುತ್ತಾರೆ ಎನ್ನುವುದನ್ನು ಅರಿತ ಪುಂಡರು ಬೈಕ್ ಸಮೇತ ಎಸ್ಕೇಪ್ ಆಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.