
ಈಗಂತೂ ಧಾರಾವಾಹಿಗಳದ್ದೇ ಕಾರುಬಾರು. ವಿಭಿನ್ನ ಕಥಾಹಂದರ ಹೊಂದಿರುವ ಧಾರಾವಾಹಿಗಳನ್ನು ಕಿರುತೆರೆಯ ಮೇಲೆ ತರಲು ನಿರ್ದೇಶಕರು ಸಾಕಷ್ಟು ಹರಸಾಹಸ ಪಡುತ್ತಾರೆ. ಅದರಲ್ಲಿಯೂ ಧಾರಾವಾಹಿಯ ವೀಕ್ಷಕರ ಪೈಕಿ ಹೆಚ್ಚಿನವರು ಮಹಿಳೆಯರೇ ಆಗಿರುವ ಕಾರಣ, ಮಹಿಳಾ ಪ್ರೇಕ್ಷಕರನ್ನು ಹಿಡಿದುಕೊಳ್ಳಲು ಸಾಕಷ್ಟು ಶ್ರಮ ವಹಿಸುವ ಅಗತ್ಯವೂ ಇದೆ. ಬೇರೆ ಬೇರೆ ಧಾರಾವಾಹಿಗಳಲ್ಲಿ ನಟ-ನಟಿಯರು ಬೇರೆ ಬೇರೆಯಾಗಿದ್ದರೂ ಕಥೆಯ ವಿಷಯಕ್ಕೆ ಬರುವುದಾದರೆ, ಒಂದೇ ರೀತಿ ಇರುವುದನ್ನು ಕಾಣಬಹುದು. ಆದ್ದರಿಂದ ವಿಭಿನ್ನ ಕಥೆಗಳನ್ನು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಧಾರಾವಾಹಿಗಳಲ್ಲಿ ಒಂದು ಶ್ರೀರಸ್ತು, ಶುಭಮಸ್ತು.
ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸಿರುವ ವಿಭಿನ್ನ ಕಥಾ ಹಂದರ ಹೊಂದಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ ಹಾಗೂ ಕುಟುಂಬಸ್ಥರು ಮತ್ತು ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಈ ಧಾರಾವಾಹಿಯ ವಿಷಯ ಹಲವರಿಗೆ ಆಪ್ತವಾಗಿದೆ. ಸೊಸೆ ಎಂದರೆ ಹೀಗಿರಬೇಕು ಎನ್ನುತ್ತಿದ್ದಾರೆ ಹಲವು ಮಹಿಳೆಯರು. ಈ ಧಾರಾವಾಹಿಯ ನಟಿ ತುಳಸಿ (ಸುಧಾರಾಣಿ) ಮದುವೆಯಾಗಿ ಹೋದ ಮೇಲೆ ಪತಿ ಮಾಧವ್ (ಅಜಿತ್ ಹಂದೆ) ಮನೆಯ ಕಾರಣದಿಂದ ಹಿಂಸೆ ಅನುಭವಿಸುತ್ತಿದ್ದಾಳೆ ನಿಜ. ಆದರೆ ಎಲ್ಲವೂ ಒಳ್ಳೆಯದಾಗುತ್ತದೆ, ಅದೂ ತುಳಸಿಯಿಂದಲೇ ಎನ್ನುವುದು ಸೀರಿಯಲ್ ಪ್ರಿಯರ ಅನಿಸಿಕೆ.
ಮನಸು ಮನಸುಗಳ ಸಮ್ಮಿಲನ... ತುಳಸಿ-ಮಾಧವರ ಒಲವಿನ ಗಾನದ ಶೂಟಿಂಗ್ ವಿಡಿಯೋ ವೈರಲ್
ಓರ್ವ ಮಧ್ಯ ವಯಸ್ಸಿನ ವಿಧವೆ ಅಥವಾ ವಿಧುರ ಮದುವೆಯಾಗುವುದು, ಅದರಲ್ಲಿಯೂ ಮಕ್ಕಳು ಮದ್ವೆಯಾಗಿದ್ದರೆ ಅಥವಾ ಮದುವೆ ವಯಸ್ಸಿಗೆ ಬಂದ ಸಂದರ್ಭದಲ್ಲಿ ಮದುವೆಯಾಗುವುದು ಎಂದರೆ ಎಷ್ಟೋ ಮಂದಿಗೆ ಅದು ಸಹ್ಯವಾಗದ ಮಾತು. ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡರೂ ಓರ್ವ ಹೆಣ್ಣು ವಿಧವೆಯಾಗಿಯೇ ಜೀವನ ಸವೆಸಬೇಕು ಎನ್ನುವ ಮನಸ್ಥಿತಿ ಹಲವರದ್ದು. ಗಂಡು ಇನ್ನೊಂದು ಮದ್ವೆಯಾಗುವುದನ್ನು ಒಪ್ಪಿದರೂ ಹೆಣ್ಣು ಮಾತ್ರ ಹಾಗೆಯೇ ಇರಬೇಕು ಎನ್ನುವವರೇ ಹೆಚ್ಚು. ಆದರೆ ಇಂದು ಮನಸ್ಸು ಬದಲಾಗುತ್ತಿದೆ, ಬದಲಾಗದಿದ್ದರೂ ಅದನ್ನು ಒಪ್ಪಿಕೊಳ್ಳುವಂತೆ ಕೆಲವು ಹೆಣ್ಣು ಮಕ್ಕಳು ನಡೆ ಇಡುತ್ತಾರೆ. ಈ ಧಾರಾವಾಹಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿರುವವರನ್ನು ನೋಡಿದರೆ ಇಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನಸ್ಥಿತಿಯೂ ಬದಲಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಅಂದಹಾಗೆ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಫೇಮಸ್. ಆಗಾಗ್ಗೆ ರೀಲ್ಸ್ ಮಾಡುವುದು ಉಂಟು. ಇದೀಗ ಈ ಜೋಡಿಗೆ ಫಟಾಫಟ್ ಪ್ರಶ್ನೆಗಳನ್ನು ಕೇಳಲಾಗಿದ್ದು, ಇಬ್ಬರೂ ಉತ್ತರ ನೀಡಿದ್ದಾರೆ. ಮೂಗಿನ ತುದಿಲೇ ಕೋಪ ಯಾರಿಗಿದೆ ಎಂಬ ಪ್ರಶ್ನೆಗೆ ಇಬ್ಬರಿಗೂ ಇಲ್ಲ, ಇಬ್ಬರೂ ಶಾಂತಿ ಪ್ರಿಯರು ಎಂದರು ತುಳಸಿ ಮತ್ತು ಮಾಧವ್. ತಪ್ಪನ್ನು ಕ್ಷಮಿಸುವ ಗುಣ ಇಬ್ಬರಲ್ಲಿ ಯಾರಿಗಿದೆ ಎನ್ನುವ ಪ್ರಶ್ನೆಗೆ ಇಬ್ಬರಿಗೂ ಎನ್ನುವ ಉತ್ತರ ಬಂತು. ಯಾರು ಜಾಸ್ತಿ ಚಾಟ್ಸ್ ತಿಂತೀರಾ ಎಂದು ಕೇಳಿದರೆ 50-50 ಎಂದು ಉತ್ತರಿಸಿದರು ತುಳಸಿ. ಪರಿಸ್ಥಿತಿ ಎದುರಿಸುವಲ್ಲಿ ಯಾರಿಗೆ ಧೈರ್ಯ ಹೆಚ್ಚು? ಬೇಗ ಶಾಕ್ ತಗೊಳೋರು ಯಾರು? ತ್ಯಾಗ ಮಾಡೋರು ಯಾರು ಹೆಚ್ಚು? ಜಾಸ್ತಿ ಮೊಬೈಲ್ ನೋಡೋರು ಯಾರು? ಎಂಬೆಲ್ಲಾ ಪ್ರಶ್ನೆಗೆ ಇಬ್ಬರಿಗೂ ಎನ್ನುವ ಉತ್ತರ.
ಬಿಗ್ಬಾಸ್ಗೆ ಕಾಂಟ್ರವರ್ಸಿ ಜೋಡಿ ರಾಖಿ- ಆದಿಲ್ ಖಾನ್ ಎಂಟ್ರಿ? ನಟಿ ಹೇಳಿದ್ದೇನು ನೋಡಿ...
ಅದೇ ರೀತಿ, ಕೇರ್ ಮಾಡೋದ್ರಲ್ಲಿ ಯಾರು ಎತ್ತಿದ ಕೈ ಎಂಬ ಪ್ರಶ್ನೆಗೆ ಇಬ್ಬರೂ ಎನ್ನುವ ಉತ್ತರ ಕೊಟ್ಟರು ತುಳಸಿ. ಬಳಿಕ ತುಂಬಾ ಮಾತನಾಡುವ ಪುಣ್ಯಾತ್ಮ ಯಾರು ಎಂದು ಕೇಳಿದಾಗ ತುಳಸಿ ಫಟ್ ಎಂದು ಉತ್ತರ ಕೊಟ್ಟು ಮಾಧವ್ ಎಂದು ಅವರ ಬಳಿ ಕೈ ತೋರಿದರು. ಸಣ್ಣ ಸಣ್ಣ ಜೋಕ್ಸ್ಗಳಿಗೂ ಜಾರಾಗಿ ನಗೋರು ಯಾರು ಎಂಬ ಪ್ರಶ್ನೆಗೆ ಇಬ್ಬರೂ ಎನ್ನುವ ಉತ್ತರ ಬಂತು. ಆದರೆ ಇದರಲ್ಲಿ ಹೆಚ್ಚು ಗಮನ ಸೆಳೆದದ್ದು, ಇಬ್ಬರಲ್ಲಿ ಜಾಸ್ತಿ ನಿದ್ದೆ ಮಾಡೋರು ಯಾರು ಎಂಬ ಪ್ರಶ್ನೆ. ಈ ಪ್ರಶ್ನೆಗೆ ತುಳಸಿ, ಥಟ್ ಎಂದು ಮಾಧವ್ ಕಡೆ ಕೈ ತೋರಿಸಿದರು. ಆಗ ಮಾಧವ್ ಪಾತ್ರಧಾರಿ ಅಜಿತ್ ಹಂದೆಯವರು, ಸದ್ಯ ಮಾಧವ್ಗೆ ನಿದ್ದೆ ಬರ್ತಿಲ್ಲ, ಯಾಕೆಂದ್ರೆ ಚಾಪೆ ಮೇಲೆ ಮಲಗ್ತಿದ್ದಾನಲ್ಲ ಎಂದಾಗ ತುಳಸಿ ಪಾತ್ರಧಾರಿ ಸುಧಾರಾಣಿ ಗೊಳ್ಳೆಂದು ನಕ್ಕರು. ಈ ಪ್ರಶ್ನೋತ್ತರ ಫ್ಯಾನ್ಸ್ಗೆ ತುಂಬಾ ಇಷ್ಟವಾಗಿದ್ದು, ಎಲ್ಲರೂ ಹಾರ್ಟ್ ಎಮೋಜಿ ಹಾಕಿದ್ದಾರೆ. ನಿಮ್ಮಿಬ್ಬರ ಆ್ಯಕ್ಟಿಂಗ್ ಸೂಪರ್ ಎನ್ನುತ್ತಿದ್ದರೆ, ಧಾರಾವಾಹಿಯಲ್ಲಿಯೂ ನೀವಿಬ್ಬರೂ ಹೀಗೆಯೇ ನಗುವುದನ್ನು ನೋಡುವ ಮನಸ್ಸು, ದಯವಿಟ್ಟು ಬೇಗ ಆ ದೃಶ್ಯ ತೋರಿಸಿ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.