
ಝೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಪುಟ್ಟಕ್ಕನ ಮಕ್ಕಳು (Puttakkana Makkalu) ಸದಾ ಟಿಆರ್ಪಿಯಲ್ಲಿ ಟಾಪ್ಮೋಸ್ಟ್ ಸ್ಥಾನ ಪಡೆದು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯನ್ನು ಈ ಧಾರಾವಾಹಿ ಪಡೆದುಕೊಳ್ಳುತ್ತಿದೆ. ಗಂಡ ತನ್ನನ್ನು ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ ಸಹನಾ, ಸ್ನೇಹಾ ಮತ್ತು ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದೆ.
ಆದರೆ ಇದೀಗ ಕುತೂಹಲದ ಬೆಳವಣಿಗೆಯೊಂದರಲ್ಲಿ ಧಾರಾವಾಹಿ ಅನಿರೀಕ್ಷಿತ ತಿರುವು ಪಡೆದಿದೆ. ಇದರ ಪ್ರೊಮೋ ಬಿಡುಗಡೆಯಾಗಿದ್ದು, ಫ್ಯಾನ್ಸ್ ತುಂಬಾ ನಿರಾಸೆಗೊಂಡಿದ್ದಾರೆ. ಪ್ರೊಮೋದಲ್ಲಿ ನೋಡುವಂತೆ ಪುಟ್ಟಕ್ಕ ಅಪಘಾತದಲ್ಲಿ ಸಾವಿಗೀಡಾಗಿದ್ದಾಳೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮನೆಯವರ ಹೃದಯ ಚೂರುಚೂರಾಗಿದೆ. ಬಂಗಾರಮ್ಮ ಕೂಡ ಆಘಾತಗೊಂಡಿದ್ದಾರೆ. ಪುಟ್ಟಕ್ಕನನ್ನು ಹೇಗಾದರೂ ಸಾಯಿಸಲೇಬೇಕು ಎಂದು ರಾಜೇಶ್ವರಿ ಪಣತೊಟ್ಟಿದ್ದಳು. ಅವಳ ಕುತಂತ್ರದಿಂದಲೇ ಈ ಅಪಘಾತ ಸಂಭವಿಸಿದೆ. ಆದರೆ ಈ ಬಗ್ಗೆ ಯಾರಿಗೂ ಅರಿವಿಲ್ಲ. ಪುಟ್ಟಕ್ಕ ಅಪಘಾತದಲ್ಲಿ ಸಾವನ್ನಪ್ಪಿರುವುದಾಗಿ ಹೇಳಿ, ಆಕೆಯ ಮೃತದೇಹವನ್ನು ಮನೆಗೆ ತರಲಾಗಿದೆ. ಪುಟ್ಟಕ್ಕನಿಲ್ಲದ ಮನೆಗೆ ಬಂಗಾರಮ್ಮನೇ ಆಶ್ರಯ ನೀಡುತ್ತಾಳಾ ಎಂದು ಶೀರ್ಷಿಕೆ ನೀಡಲಾಗಿದೆ.
ಆದರೆ ಪುಟ್ಟಕ್ಕನಿಗೆ ಈ ರೀತಿಯ ಸಾವು ಕೊಟ್ಟಿರುವುದನ್ನು ಅಭಿಮಾನಿಗಳು ಸಹಿಸುತ್ತಿಲ್ಲ. ಪುಟ್ಟಕ್ಕ ಎಲ್ಲರಿಗೂ ಆದರ್ಶ. ಅದೆಷ್ಟೋ ಮಂದಿ ಇದೊಂದು ಧಾರಾವಾಹಿ ಎಂದು ಅಂದುಕೊಳ್ಳದೇ ತಮ್ಮ ಮನೆಯ ಕಥೆಯೇ ಅಂದುಕೊಂಡಿದ್ದರು. ಎಲ್ಲಾಸಂಕಷ್ಟಗಳನ್ನು ಹಿಮ್ಮೆಟ್ಟಿ ಬದುಕು ಸವೆಸುತ್ತಿದ್ದ ಪುಟ್ಟಕ್ಕ ಇನ್ನೊಬ್ಬಳ ಅಟ್ಟಹಾಸಕ್ಕೆ ಬಲಿಯಾಗುವುದನ್ನು ನಾವೆಂದೂ ಸಹಿಸುವುದಿಲ್ಲ. ಪುಟ್ಟಕ್ಕನಿಲ್ಲದ ಸೀರಿಯಲ್ ನಮಗೆ ಬೇಡ್ವೇ ಬೇಡ ಅಂತಿದ್ದಾರೆ ಫ್ಯಾನ್ಸ್. ಬೇರೆ ಯಾರನ್ನು ಸಾಯಿಸಿದರೂ ತಡೆದುಕೊಳ್ಬೋದಿತ್ತು. ಪುಟ್ಟಕ್ಕನನ್ನೇ ಸಾಯಿಸಿ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ? ಸತ್ಯವೇ ಶೀಘ್ರ ಸಾಯುತ್ತದೆ, ವಿಲನ್ಗೇ ಗೆಲ್ಲುತ್ತಾರೆ ಎಂದು ಹೇಳುತ್ತಿರುವುದು ನಿಜಕ್ಕೂ ಶೋಚನೀಯ ಎಂದು ನಿರ್ದೇಶಕರ ವಿರುದ್ಧ ಗರಂ ಆಗಿದ್ದಾರೆ ಫ್ಯಾನ್ಸ್. ನಿಮ್ಮ ಸೀರಿಯಲ್ಗೆ ಟಿಆರ್ಪಿ ಬೇಕಿದ್ದರೆ, ಬೇರೆ ಏನಾದ್ರೂ ಮಾಡಿ, ಪುಟ್ಟಕ್ಕನನ್ನು ಸಾಯಿಸಬೇಡಿ ಅಂತಿದ್ದಾರೆ ಅಭಿಮಾನಿಗಳು.
ಒಟ್ಟಿನಲ್ಲಿ ಪುಟ್ಟಕ್ಕ ಸಾಯುವಂತೆ ತೋರಿಸಿರುವುದನ್ನು ಫ್ಯಾನ್ಸ್ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುಟ್ಟಕ್ಕನ ಪಾತ್ರದಲ್ಲಿ ಮಿಂಚುತ್ತಿರುವ ಉಮಾಶ್ರಿಯವರ ಅಭಿನಯದ ಕುರಿತು ಹೇಳುವುದೇ ಬೇಡ. ಒಮ್ಮೆ ಬಣ್ಣ ಹಚ್ಚಿದರು ಎಂದರೆ ಸಾಕು, ಉಮಾಶ್ರೀಯವರು ಉಮಾಶ್ರಿಯಾಗಿ ಉಳಿಯುವುದಿಲ್ಲ. ತಮಗೆ ಕೊಟ್ಟಿರುವ ಪಾತ್ರಕ್ಕೆ ಜೀವ ತುಂಬುವಲ್ಲಿ ಅವರದ್ದು ಎತ್ತಿದ ಕೈ. ಇದೇ ಕಾರಣಕ್ಕೆ, ಇವರು ಮಾಡುವ ಪಾತ್ರ ಕೇವಲ ಪಾತ್ರವಲ್ಲ, ಬದಲಿಗೆ ತಮ್ಮದೇ ಕಥೆ ಎಂದುಕೊಳ್ಳುವವರೇ ಹೆಚ್ಚು. ಇಂಥ ನಾಯಕಿಯನ್ನು ಸೀರಿಯಲ್ನಲ್ಲಿ ಸಾಯಿಸಿರುವುದನ್ನು ಅಭಿಮಾನಿಗಳು ಸಹಿಸಿಕೊಳ್ಳುತ್ತಿಲ್ಲ. ಮುಂದೇನಾಗುತ್ತದೋ ಕಾದು ನೋಡಬೇಕಿದೆ.
ಸ್ವರ್ಗದಷ್ಟೇ ಬಿಗ್ಬಾಸ್ ಸುರಕ್ಷಿತ ಎಂದದ್ದು ಇದಕ್ಕೇನಾ? ಸಂಗೀತಾ ಸಹೋದರ ಕಿಡಿ- ಸುದೀಪ್ಗೆ ಪತ್ರ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.