
ಜಬಲ್ಪುರ ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಕರಿಗೆ ಹೊಸ ಸೌಲಭ್ಯವೊಂದು ಲಭ್ಯವಾಗಿದೆ. ಈಗ ವಾಟರ್ಫಾಲ್ಸ್ ಸೌಲಭ್ಯವನ್ನು ಪ್ರಯಾಣಿಕರಿಗಾಗಿ ರೈಲ್ವೆ ಒದಗಿಸಿದೆ. ಇದೇನಿದು ರೈಲಿನಲ್ಲೂ ವಾಟರ್ ಫಾಲ್ಸಾ ಅದು ಹೇಗೆ ಎಂದು ಗೊಂದಲಕ್ಕೊಳಗಾಗದಿರಿ ಇದು ರೈಲಿನ ರೂಫ್ ಸೋರಿಕೆಯಾದ ನಂತರ ಕಾಂಗ್ರೆಸ್ ಪಕ್ಷ ಸರ್ಕಾರದ ರೈಲ್ವೆ ಇಲಾಖೆಯ ಕಾಲೆಳೆದ ರೀತಿ. ಜಬಲ್ಪುರ- ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿನ ಹವಾ ನಿಯಂತ್ರಿಕ ಕೋಚ್ನಲ್ಲಿ ಏಸಿಯಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ರೈಲಿನ ರೂಫ್ನಿಂದ ನೀರು ಸೋರಿಕೆಯಾಗುತ್ತಿತ್ತು. ಇದರ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ಗಮನಿಸಿದ ಕಾಂಗ್ರೆಸ್ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಹೀಗೆ,
'ರೈಲ್ವೆ ಮಂತ್ರಿಗಳೇ ಎಂಥಾ ಮಾತು! ನೀವು ರೈಲಿನಲ್ಲಿ ಗ್ರಾಹಕರಿಗೆ ಜಲಪಾತದ ಸೌಲಭ್ಯವನ್ನು ಕೂಡ ಒದಗಿಸಿದ್ದೀರಿ, ಈ ವಿಶಿಷ್ಟವಾದ ಜಲಪಾತ ಸೌಲಭ್ಯವೂ ಜಬಲ್ಪುರ ನಿಜಮುದ್ದೀನ್ ಎಕ್ಸ್ಪ್ರೆಸ್ನಲ್ಲಿ ಕಂಡು ಬಂದಿದೆ. ಜನ ಪ್ರಯಾಣ ಮಾಡುತ್ತಾ ಜೊತೆಗೆ ಜಲಪಾತದ ಸೌಂದರ್ಯವನ್ನು ಕೂಡ ಸವಿಯಬಹುದು ಎಂಥಹಾ ಅದ್ಭುತವಿದು ಗ್ರೇಟ್ , ಜಿಂದಾಬಾದ್' ಎಂದು ಕಾಂಗ್ರೆಸ್ ಟ್ವಿಟ್ಟರ್ನಲ್ಲಿ ವ್ಯಂಗ್ಯವಾಗಿ ಬರೆದುಕೊಂಡು ಈ ವೀಡಿಯೋ ಪೋಸ್ಟ್ ಮಾಡಿ ಕೇಂದ್ರ ರೈಲ್ವೆ ಸಚಿವರ ಕಾಲೆಳೆದಿದೆ. 3 ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.
ರೈಲ್ವೆ ಟ್ರ್ಯಾಕ್ನಲ್ಲಿ ರೀಲ್ಸ್ : ಗಂಡ ಹೆಂಡ್ತಿ 2 ವರ್ಷದ ಮಗು ಸಾವು
ಘಟನೆ ನಡೆದ 22181 ಸಂಖ್ಯೆಯ ಈ ರೈಲು ಜಬಲ್ಪುರ್ ಹಜರತ್ ನಿಜಮುದ್ದೀನ್ ಗೊಂಡ್ವಾನ ರೈಲು ಜಬಲ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿತ್ತು. ಈ ವೇಳೆ ರೈಲು ಸಾಗರ್ ದಮೋಹ್ ಬಳಿ ತಲುಪಿದಾಗ ರೈಲಿನ ಎಸಿಕೋಚ್ನಲ್ಲಿ ನೀರು ಸೋರಲಾರಂಭಿಸಿದೆ. ಇದರಿಂದ ಎಸಿ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಜನ ತಮ್ಮ ಸೀಟು ಬಿಟ್ಟು ಬೇರೆಡೆ ಹೋಗಿ ನಿಲ್ಲುವಂತಾಗಿದೆ. ಹೀಗಾಗಿ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಮೊದಲಿಗೆ ತೊಟ್ಟಿಕ್ಕುವಂತೆ ಶುರುವಾದ ನೀರು ನಂತರ ನೀರಿನ ನಲ್ಲಿಯಂತೆ ಒಂದೇ ಸಮನೇ ಸುರಿಯಲಾರಂಭಿಸಿದೆ. ಇದರಿಂದ ಪ್ರಯಾಣಿಕರು ಒದ್ದೆಯಾಗಿದ್ದಾರೆ. ಇದಾದ ನಂತರ ರೈಲು ಝಾನ್ಸಿಗೆ ಬಂದು ತಲುಪಿದಾಗ ಜನ ಪ್ರತಿಭಟನೆ ಮಾಡಿದ್ದು, ಬಳಿಕ ಅಲ್ಲಿಗೆ ಬಂದ ರೈಲ್ವೆ ಸಿಬ್ಬಂದಿ ನೀರು ಬಿದ್ದ ಫ್ಲೋರ್ ಕ್ಲೀನ್ ಮಾಡಿ ಅಲ್ಲಿ ನೀರು ಸೋರುತ್ತಿದ್ದ ಜಾಗದಲ್ಲಿ ಬಕೆಟ್ ಇಟ್ಟು ಹೋಗಿದ್ದಾರೆ.
ಇತ್ತ ವೀಡಿಯೋ ನೋಡಿದ ಜನ ರೈಲ್ವೆ ಸಚಿವಾಲಯದ ವಿರುದ್ಧ ಕಿಡಿಕಾರಿದ್ದು, ಕೆಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ರೈಲ್ವೆ ಒದಗಿಸಿದ ವಾಟರ್ಫಾಲ್ಸ್ಗೆ ಪ್ರತ್ಯೇಕ ಶುಲ್ಕ ಇದೆಯೇ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಪ್ರಯಾಣಿಕರಿಗಾಗಿ ರೈಲಿನಲ್ಲಿ ರೈಲ್ವೇ ನಿರ್ಮಿಸಿರುವ ಕಾರಂಜಿಯನ್ನು ನೀವು ಎಂಜಾಯ್ ಮಾಡಿ, ಅಲ್ಲಿ ರೀಲ್ಸ್ ಮಾಡಿ, ಲಾಂಗ್ ಲೀವ್ ಇಂಡಿಯನ್ ರೈಲ್ವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಜಬಲ್ಪುರದ ವಿಭಾಗೀಯ ರೈಲ್ವೆ ಮ್ಯಾನೇಜರ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರೈಲು ಪ್ರಯಾಣಿಕರಿಗೆ ಕೇವಲ 20 ರೂ.ಗೆ IRCTC ಎಸಿ ರೂಮುಗಳು ಲಭ್ಯ!
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.