79 ವರ್ಷದ ಬಳಿಕ ವಿದ್ಯಾರ್ಥಿ ಭವನ ಎರಡನೇ ಶಾಖೆ, ಎಲ್ಲಾಗ್ತಿದೆ ಗೊತ್ತಾ?

By Suvarna NewsFirst Published Apr 19, 2022, 11:52 AM IST
Highlights

ಬೆಂಗಳೂರಿನ ವಿದ್ಯಾರ್ಥಿ ಭವನ ಎಂದರೆ ಅದೊಂದು ಹೋಟೆಲ್ ಅಲ್ಲ, ಎಮೋಶನ್ ಎಂಬ ಮಟ್ಟಿಗೆ ಇಲ್ಲಿನ ಜನರ ನಂಟು ಅದರೊಂದಿಗೆ ಬೆಸೆದುಕೊಂಡಿದೆ. ಅದರಲ್ಲೂ ಹಳೆ ಬೆಂಗಳೂರಿನ ತಲೆಮಾರಿಗೆ ಅದು ನಿಜಕ್ಕೂ ಅನುಭವಗಳ ಗುಚ್ಛ ನೀಡಿದ ಸ್ಥಳ. ಇದೀಗ ವಿದ್ಯಾರ್ಥಿ ಭವನ ತನ್ನ ಎರಡನೇ ಶಾಖೆ ತೆರೆಯುತ್ತಿದೆ. 

ಗಾಂಧಿ ಬಜಾರ್(Gandhi Bazar) ಹೆಸರು ಮಾಡಲು ಸಾಕಷ್ಟು ಕಾರಣಗಳಿವೆ. ಇಲ್ಲಿನ ಮರಗಿಡಗಳು, ಉದ್ಯಾನಗಳು, ಶಾಪಿಂಗ್ ಕೇಂದ್ರಗಳು, ಚಾಟ್‌ ಸ್ಟ್ರೀಟ್ಸ್, ಅಚ್ಚಗನ್ನಡ ಮಾತು, ಪುಸ್ತಕದಂಗಡಿಗಳು... ಇವೆಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ವಿದ್ಯಾರ್ಥಿ ಭವನ(Vidhyarti Bhavan). 

ಹೌದು, ಗಾಂಧಿ ಬಜಾರಿನ ಡಿವಿಜಿ ಸರ್ಕಲ್(DVG circle) ಬಳಿ 1943ರಿಂದಲೂ ನಿಂತಿರುವ ವಿದ್ಯಾರ್ಥಿ ಭವನ ಎಂದರೆ ದಕ್ಷಿಣ ಬೆಂಗಳೂರಿಗರ ಅಚ್ಚುನೆಚ್ಚಿನ ತಾಣ.  1943ರಿಂದ ಇಂದಿನ ತಲೆಮಾರಿನವರೆಗೂ ಇದು ಕೇವಲ ರೆಸ್ಟೋರೆಂಟ್ ಆಗಿ ಉಳಿದಿಲ್ಲ. ಸಾಕಷ್ಟು ಅನುಭವ ಗುಚ್ಛಗಳನ್ನು ನೀಡಿದೆ. ಇಲ್ಲಿ ದೊಡ್ಡ ದೊಡ್ಡ ಸಾಹಿತಿಗಳು ತಮ್ಮ ಅಮೂಲ್ಯ ಯೋಚನೆಗಳನ್ನು ಹಂಚಿಕೊಂಡಿದ್ದಾರೆ. ಕುಟುಂಬಗಳು ಒಂದಾಗಿ ಯಾವ ತಲೆಬಿಸಿಯಿಲ್ಲದ ಹರಟೆ ಸಮಯ ಕಳೆದು ಹೋಗಿವೆ. ಗೆಳೆಯರಿಗೆ ಮೀಟಿಂಗ್ ಪಾಯಿಂಟ್ ಆಗಿ ಗುರುತಿಸಿಕೊಂಡಿದೆ. ಇಂದಿಗೂ ಹಳೆಯ ಕಟ್ಟಡವನ್ನೇ ಉಳಿಸಿಕೊಂಡು ಪುಟ್ಟ ಜಾಗದಲ್ಲಿ ಅದೇ ರುಚಿಯನ್ನು ನೀಡುತ್ತಿದೆ. 

ಎಲ್ಲಿರಲಿದೆ ಮತ್ತೊಂದು ಶಾಖೆ(branch)?
79 ವರ್ಷಗಳ ಇತಿಹಾಸದಲ್ಲಿ ವಿದ್ಯಾರ್ಥಿ ಭವನವು ಗರಿಗರಿಯಾದ ದೋಸೆ, ಪೂರಿ ಸಾಗು, ಸ್ಟ್ರಾಂಗ್ ಫಿಲ್ಟರ್ ಕಾಫಿ ಸೇರಿದಂತೆ ದಕ್ಷಿಣ ಭಾರತದ ಕೆಲವೇ ತಿನಿಸುಗಳನ್ನೇ ಅಚ್ಚುಕಟ್ಟಾಗಿ ನೀಡುತ್ತಾ ಬಂದಿದೆ. ಯಾವಾಗ ನೋಡಿದರೂ ಈ ಭವನದ ಎದಿರು ಜನರ ಗುಂಪೊಂದು ಕಾಯುತ್ತಲೇ ನಿಂತಿರುತ್ತದೆ. ವಿದ್ಯಾರ್ಥಿ ಭವನ ಎಂದರೆ ಸಾಕು ಮಸಾಲೆ ದೋಸೆ ಎಂಬ ಪದ ಜೋಡುಪದದಂತೆ ಜೊತೆಗೇ ನಾಲಿಗೆ ಮೇಲೆ ಬಂದು ಬಿಡುತ್ತದೆ. ಇಲ್ಲಿನ ಮಸಾಲೆದೋಸೆ ಅಷ್ಟು ಫೇಮಸ್. ಅದರ ಜೊತೆಗೆ ತಟ್ಟೆಗಳನ್ನು ಒಂದರ ಮೇಲೊಂದು ಹಿಡಿದು ಬರುವ ರೀತಿಯೂ ಅಷ್ಟೇ ಫೇಮಸ್. ಇದನ್ನು ಸವಿಯುವ ಸಲುವಾಗಿ ಜನರು ಗಂಟೆಗಟ್ಟಲೆ ಹೊರಗೆ ಬಿಸಿಲು ಮಳೆ ಎನ್ನದೆ ಕಾಯುತ್ತಾರೆ. ಇಷ್ಟೊಂದು ಜನ ಕಾಯುತ್ತಾರೆಂದೂ ಇದುವರೆಗೂ ಹೋಟೆಲ್ ವಿಸ್ತರಣೆ ಕೂಡಾ ಮಾಡಿರಲಿಲ್ಲ. ಆದರೆ ಇದೀಗ ವಿದ್ಯಾರ್ಥಿ ಭವನವು ತನ್ನ ಎರಡನೇ ಶಾಖೆ ತೆರೆಯಲು ಮುಂದಾಗಿದ್ದು, ದೋಸೆ ಪ್ರಿಯರಿಗೆ ಸಂತೋಷ ತಂದಿದೆ. 


ಗಾಂಧಿ ಬಜಾರಿನಷ್ಟೇ ಪುರಾತನ ಪ್ರಸಿದ್ಧ ತಾಣವಾದ ಮಲ್ಲೇಶ್ವರಂ(Malleshwaram)ನಲ್ಲಿ ವಿದ್ಯಾರ್ಥಿ ಭವನದ ದೋಸೆ ಸೇರಿದಂತೆ ದಕ್ಷಿಣದ ತಿನಿಸುಗಳನ್ನು ಇನ್ನು ಮುಂದೆ ಸವಿಯುವ ಅವಕಾಶ ಸಿಗಲಿದೆ. ಎರಡನೇ ಶಾಖೆಯ ಉದ್ಘಾಟನೆಗೆ ದಿನಾಂಕವನ್ನು ನೀಡದಿದ್ದರೂ, ವಿದ್ಯಾರ್ಥಿ ಭವನದ ಆಡಳಿತ ಮಂಡಳಿಯು ಶೀಘ್ರದಲ್ಲೇ ತೆರೆಯಲಿದೆ ಎಂದು ಹೇಳಿದೆ. ಹೊಸ ಶಾಖೆಯು ಮೇ ಮೊದಲ ವಾರದಲ್ಲಿ ತೆರೆಯುವ ನಿರೀಕ್ಷೆಯಿದೆ.

ಬೆಂಗಳೂರಿನ ಪ್ರವಾಸಿಗರಿಗೆ ಆಸ್ಪ್ರೇಲಿಯಾ ಪ್ರವಾಸಕ್ಕೆ ಮುಕ್ತ ಆಹ್ವಾನ

ವಿದ್ಯಾರ್ಥಿ ಭವನ ಪ್ರಿಯರು
ಗಾಂಧಿ ಬಜಾರ್‌ನಲ್ಲಿರುವ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡುವ ಜನರ ಸಂಖ್ಯೆಯೇ ಬೆಂಗಳೂರಿನ ಪಾಕಶಾಲೆ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಅದರ ವಿಶೇಷತೆಗೆ ಸಾಕ್ಷಿಯಾಗಿದೆ. ವಾರದ ದಿನಗಳಲ್ಲಿ ರೆಸ್ಟೋರೆಂಟ್‌‌ನಲ್ಲಿ ಪ್ರತಿದಿನ ಸರಾಸರಿ 1,200 ಮಸಾಲೆ ದೋಸೆಗಳು ಖರ್ಚಾಗುತ್ತದೆ. ಮತ್ತು ವಾರಾಂತ್ಯದಲ್ಲಿ, ಈ ಸಂಖ್ಯೆ 2,000 ದಾಟುತ್ತದೆ!

ಹೊಸ ಶಾಖೆಯನ್ನು ತೆರೆಯುವ ವಿದ್ಯಾರ್ಥಿ ಭವನದ ಕ್ರಮವನ್ನು ಅನೇಕ ಬೆಂಗಳೂರಿಗರು ಸ್ವಾಗತಿಸಿದ್ದಾರೆ. ಆದರೂ, ಸಾಮಾಜಿಕ ಮಾಧ್ಯಮ(Social media) ಬಳಕೆದಾರರಲ್ಲಿ ಕೆಲವರು ಮಲ್ಲೇಶ್ವರಂಗೆ ಪ್ರಸಿದ್ಧತೆ ತಂದುಕೊಟ್ಟಿರುವ CTR ಮತ್ತು ವೀಣಾ ಸ್ಟೋರ್‌ಗಳಂತಹ ತಿನಿಸುಗಳೊಂದಿಗೆ ಸ್ಪರ್ಧಿಸಲು ಇದನ್ನು ಮಾಡಲಾಗಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಕ್ಕರೆ ತಯಾರಿಸುವುದು ಹೇಗೆ: ವಿಡಿಯೋ ನೋಡಿ

ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹೀಗೆ ಬರೆದಿದ್ದಾರೆ: 'ಮಲ್ಲೇಶ್ವರಕ್ಕೆ ಬರಲಿದೆ ವಿ.ಬಿ. ಇನ್ನು ಇದು ಉತ್ತರ ಮತ್ತು ದಕ್ಷಿಣ ಬೆಂಗಳೂರು ಚರ್ಚೆಯಾಗಲಿದೆ. ರಿಯಲ್ CTR vs VB ಚರ್ಚೆಯು ಮುಂದುವರಿಯಬಹುದು.' 

ಮತ್ತೊಬ್ಬ ಬಳಕೆದಾರರು ಮಲ್ಲೇಶ್ವರಂನಲ್ಲಿ ಹೊಸ ವಿದ್ಯಾರ್ಥಿ ಭವನ ಸ್ವಾಗತಾರ್ಹ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಸಿಟಿಆರ್ ಈಗ ಬಸವನಗುಡಿಗೆ ಹೋಗಬೇಕು. ನಮ್ಮ ಮಲ್ಲೇಶ್ವರಂಗೆ ವಿಬಿಗೆ ಸ್ವಾಗತ' ಎಂದಿದ್ದಾರೆ.

ವಿದ್ಯಾರ್ಥಿ ಭವನವನ್ನು 1943 ರಲ್ಲಿ ವೆಂಕಟರಮಣ ಉರಾಲ್ ಅವರು ಸ್ಥಾಪಿಸಿದರು. ನಂತರ ಅವರ ಸಹೋದರ ಪರಮೇಶ್ವರ ಉರಾಲ್ ಅದನ್ನು ಸ್ವಾಧೀನಪಡಿಸಿಕೊಂಡರು. 1970ರಲ್ಲಿ ರಾಮಕೃಷ್ಣ ಅಡಿಗ ಅವರಿಗೆ ಈ ಹೋಟೆಲನ್ನು ಮಾರಾಟ ಮಾಡಲಾಯಿತು. ಪ್ರಸ್ತುತ ಅಡಿಗರೇ ಇದರ ಮಾಲೀಕರಾಗಿದ್ದಾರೆ.
 

click me!