ಕಳಪೆ ಸಿನಿಮಾ, ಬೋರಿಂಗ್ ಕ್ಲೈಮ್ಯಾಕ್ಸ್; ರಿಷಬ್ ಶೆಟ್ಟಿ 'ಕಾಂತಾರ' ತೆಗಳಿದ ನಿರ್ದೇಶಕ

By Shruthi KrishnaFirst Published Oct 31, 2022, 12:02 PM IST
Highlights

ಬೆಂಗಾಲದ ಖ್ಯಾತ ನಿರ್ದೇಶಕ ಅಭಿರೂಪ್ ಬಸು ಕಾಂತಾರ ಸಿನಿಮಾ ಕಳಪೆ ಎಂದು ಹೇಳಿದ್ದಾರೆ. ಇದೊಂದು ನಗು ತರಿಸುವ ಸಿನಿಮಾ ಮತ್ತು ಬುದ್ಧಿವಂತಿಕೆಯ ಅಪಹಾಸ್ಯ ಎಂದು ಟೀಕಿಸಿದ್ದಾರೆ.

ಕಾಂತಾರ ಸಿನಿಮಾಗೆ ದೇಶ ವಿದೇಶಗಳಿಂದ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ರಿಷಬ್ ಶೆಟ್ಟಿ ನಟನೆ, ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲಾ ಕಡೆಯಿಂದ ರಿಷಬ್ ಶೆಟ್ಟಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲೂ ಕಾಂತಾರ ಅದ್ಭುತ ಕಲೆಕ್ಷನ್ ಮಾಡಿದೆ. ತಮಿಳು, ತೆಲುಗು ಹಾಗೂ ಬಾಲಿವುಡ್‌ನಲ್ಲಿ ಕಾಂತಾರ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಅಭಿಮಾನಿಗಳು ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸಿನಿ ಗಣ್ಯರು ಸಹ ಸಿನಿಮಾ ನೋಡಿ ಹಾಡಿಹೊಗಳುತ್ತಿದ್ದಾರೆ. ಅನೇಕ ಸ್ಟಾರ್ಸ್ ಕಾಂತಾರ ನೋಡಿ ಇಷ್ಟಪಟ್ಟಿದ್ದಾರೆ. ರಿಷಬ್ ಶೆಟ್ಟಿಗೆ ಬೇಷ್ ಎಂದಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಅಷ್ಟೆಯಲ್ಲ ರಿಷಬ್ ಶೆಟ್ಟಿಯನ್ನು ಮನೆಗೆ ಕರೆಸಿ ವಿಶೇಷ ಆತಿಥ್ಯ ನೀಡಿದ್ದಾರೆ. ಇಷ್ಟೆಲ್ಲ ಮೆಚ್ಚುಗೆಯ ಮಹಾಪೂರದ ನಡುವೆಯೂ ಕೆಲವರು ಚಿತ್ರದ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ, ಟೀಕಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಕನ್ನಡ ನಟ ಚೇತನ್  ಕಾಂತಾರ ಭೂತಾರಾಧನೆ, ಹಿಂದುತ್ವ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಮತ್ತೋರ್ವ ನಿರ್ದೇಶಕ ಕಾಂತಾರ ಸಿನಿಮಾ ಕಳಪೆ ಎಂದು ಜರಿದಿದ್ದಾರೆ. 

ಬೆಂಗಾಲದ ಖ್ಯಾತ ನಿರ್ದೇಶಕ ಅಭಿರೂಪ್ ಬಸು ಕಾಂತಾರ ಸಿನಿಮಾ ಕಳಪೆ ಎಂದು ಹೇಳಿದ್ದಾರೆ. ಇದೊಂದು ನಗು ತರಿಸುವ ಸಿನಿಮಾ ಮತ್ತು ಬುದ್ಧಿವಂತಿಕೆಯ ಅಪಹಾಸ್ಯ ಎಂದು ಟೀಕಿಸಿದ್ದಾರೆ. ಸಂದರ್ಶವೊಂದರಲ್ಲಿ ಮಾತನಾಡಿದ ಅಭಿರೂಪ್, ರಿಷಬ್ ಶೆಟ್ಟಿಯ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾ ದೈವಿಕ ಹಸ್ತಕ್ಷೇಪವನ್ನು ನಂಬುವಂತೆ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ. 

'ಇದು ಬುದ್ಧಿವಂತಿಕೆಯ ಅಪಹಾಸ್ಯ ಎಂದು ಭಾವಿಸುತ್ತೇನೆ. ಸಿನಿಮಾವನ್ನು ತುಂಬಾ ಕಳಪೆಯಾಗಿ ಮಾಡಲಾಗಿದೆ. ಪಾತ್ರಕ್ಕೆ ಯಾವುದೇ ನೈಜತೆ ಇಲ್ಲ. ಸಿನಿಮಾದಲ್ಲಿ ಟ್ವಿಸ್ಟ್ ಗಳು ಅಪ್ರಮಾಣಿಕವಾಗಿವೆ, ಕೆಲವು ಗಿಮಿಕ್ ಎಂದು ಗೊತ್ತಾಗುತ್ತಿದೆ. ನಾಯಕನ ಪಾತ್ರ ನಗು ತರಿಸುತ್ತದೆ. ಹೆಚ್ಚು ಮಾತನಾಡುತ್ತಿರುವ ಚಿತ್ರದ ಕ್ಲೈಮ್ಯಾಕ್ಸ್ ತಲುಪುವ ಹೊತ್ತಿಗೆ ನಾನು ನಿಜವಾಗಿಯೂ ಆಸಕ್ತಿ ಕಳೆದುಕೊಂಡಿದ್ದೆ' ಎಂದು ಹೇಳಿದ್ದಾರೆ. 

Rishab Shetty Meets Rajinikanth: ಕಾಂತಾರದ ಶಿವನಿಗೆ ಗೋಲ್ಡ್‌ ಚೈನ್‌ ಗಿಫ್ಟ್‌ ಆಗಿ ನೀಡಿದ ರಜನಿಕಾಂತ್‌?

ಇನ್ನು ಮಾತು ಮುಂದುವರೆಸಿ, 'ದೈವಿಕ ಹಸ್ತಕ್ಷೇಪ ಹೇರಳವಾಗಿದೆ. ಇದನ್ನು ನಂಬುವಂತೆ ಒತ್ತಾಯಿಸುವ ಚಿತ್ರ ಇದು ನಿಜಕ್ಕೂ ಆಘಾತಕಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದಾರೆ. 

'ಭಾರತೀಯ ಸಿನಿಮಾದ ಮಾಸ್ಟರ್‌ ಪೀಸ್‌' ಕಾಂತಾರದ ಬಗ್ಗೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಮಾತು!

ಈ ಬಗ್ಗೆ ರಿಷಬ್ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ ಗೆದ್ದು ಬೀಗುತ್ತಿರುವ ರಿಷಬ್ ಇಂಥ ಟೀಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸಕ್ಸಸ್ ಎಂಜಾಯ್ ಮಾಡುತ್ತಿರುವ ರಿಷಬ್ ಶೆಟ್ಟಿಗೆ ಇನ್ನು ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ಇವತ್ತಿಗೂ ಕಾಂತಾರ ಚಿತ್ರ ಹೌಸ್ ಫುಲ್ ಪ್ರದರ್ಶನ  ಕಾಣುತ್ತಿದೆ. ಅನೇಕರು ಒಮ್ಮೆ ಮಾತ್ರವಲ್ಲದೇ ಮತ್ತೆ ಮತ್ತೆ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.  
 

click me!