
ಬೆಂಗಳೂರು: ರಾಕಿಂಗ್ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಇಂದು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಆರು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರದ ಅವಧಿ 3 ಗಂಟೆ 14 ನಿಮಿಷಗಳು.
ಎಲ್ಲಾ ಭಾಗಗಳಲ್ಲಿಯೂ ಚಿತ್ರದ ಮೇಲೆ ನಿರೀಕ್ಷೆ ಇದ್ದು, ಟಿಕೆಟ್ ದರಗಳು ಹೆಚ್ಚಾಗಿವೆ. ಭಾರತದ ಸಿನಿಮಾರಂಗದ ಇತಿಹಾಸದಲ್ಲೇ ಅತ್ಯಧಿಕ ರು.3600 ಟಿಕೆಟ್ ದರ ಬೆಂಗಳೂರಿನಲ್ಲಿ ನಿಗದಿಯಾಗಿದ್ದು, ಅಷ್ಟೂ ಟಿಕೆಟ್ಗಳೂ ಸೋಲ್ಡೌಟ್ ಆಗಿವೆ. ಹಿಂದೆ ‘ಧುರಂಧರ್’ ಸಿನಿಮಾಕ್ಕೆ 3100 ರು. ಟಿಕೆಟ್ ದರವಿದ್ದದ್ದು ಈವರೆಗಿನ ದಾಖಲೆಯಾಗಿತ್ತು.
ಬೆಳಗ್ಗೆ 6ಗಂಟೆಯಿಂದ ಶೋಗಳು ಆರಂಭವಾಗಲಿದ್ದು, ಮಧ್ಯರಾತ್ರಿ 11.45ರವರೆಗೆ ಮುಂದುವರಿಯಲಿವೆ. ವಿಶ್ವಾದ್ಯಂತ ಬರೋಬ್ಬರಿ 12 ಸಾವಿರ ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಭಾರತ ಒಂದರಲ್ಲೇ ಸುಮಾರು 8 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.
ರಿಲೀಸ್ಗೂ ಮುನ್ನ ಅಡ್ವಾನ್ಸ್ ಬುಕಿಂಗ್ನಿಂದಲೇ ಸುಮಾರು 50 ಕೋಟಿ ರು.ಗಳಷ್ಟು ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಬಿಡುಗಡೆ ಪೂರ್ವ ರೂ. 20 ಕೋಟಿ ಗಳಿಕೆಯಾಗಿದೆ ಎಂದು ವರದಿಯಾಗಿದೆ. ಚಿತ್ರತಂಡ ಮೊದಲ ದಿನವೇ ಅದ್ದೂರಿ ಗಳಿಕೆ ನಿರೀಕ್ಷೆ ಇಟ್ಟುಕೊಂಡಿದೆ.
ಗ್ಲೋಬಲ್ ಸಿನಿಮಾಟಾಕ್ಸಿಕ್ ಗ್ಲೋಬಲ್ ಸಿನಿಮಾ ಆಗಿದ್ದು, ವಿಶ್ವಾದ್ಯಂತ ಒಟ್ಟು 47 ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ದಿನದ ಕಲೆಕ್ಷನ್ ಸುಮಾರು 200 ಕೋಟಿ ದಾಖಲಾಗುವ ನಿರೀಕ್ಷೆ ಇದೆ. ವಿದೇಶಗಳಲ್ಲಿ ಭಾರತೀಯ ಭಾಷೆಗಳ ವಿತರಣೆ ಹಕ್ಕನ್ನು ಫಾರ್ಸ್ ಫಿಲಂ ಖರೀದಿಸಿದೆ. ಪ್ರಖ್ಯಾತ ಸಂಸ್ಥೆ ಲಯನ್ಸ್ ಗೇಟ್ ಇಂಗ್ಲಿಷ್ ಓವರ್ಸೀಸ್ ವಿತರಣೆ ಹಕ್ಕು ತನ್ನದಾಗಿಸಿಕೊಂಡಿದೆ.
ನಾಲ್ಕು ವರ್ಷಗಳ ಬಳಿಕ ಯಶ್ ದರ್ಶನ
ಭರ್ತಿ ನಾಲ್ಕು ವರ್ಷಗಳ ಬಳಿಕ ಯಶ್ ಅವರನ್ನು ರಾಯನಾಗಿ ಬಿಗ್ಸ್ಕ್ರೀನ್ನಲ್ಲಿ ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ಯಶ್ ಅಭಿಯಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಮೂರು ಶೇಡ್ಗಳಲ್ಲಿ ಯಶ್ ಅಬ್ಬರ, ದೇಶದ ಟಾಪ್ 5 ಐವರು ನಾಯಕಿಯರ ನಟನಾ ವೈಭವ, ಮೈನವಿರೇಳಿಸುವ ಸಾಹಸ, ರೊಮ್ಯಾನ್ಸ್, ಎಮೋಶನಲ್ ಕಥಾಹಂದರ ಸಿನಿಮಾದ ಹೈಲೈಟ್ ಆಗಿದ್ದು, ಗೀತು ಮೋಹನ್ದಾಸ್ ನಿರ್ದೇಶನದ ಈ ಸಿನಿಮಾ ದೊಡ್ಡವರಿಗೆ ಭರಪೂರ ಮನರಂಜನೆ ನೀಡುವ ನಿರೀಕ್ಷೆ ಇದೆ.
ತಮ್ಮ ಸಿನಿಮಾ ರಿಲೀಸ್ಗೂ ಮುನ್ನ ಧರ್ಮಸ್ಥಳ ಮಂಜುನಾಥಸ್ವಾಮಿ ದರ್ಶನ ಮಾಡುವ ಪದ್ಧತಿಯನ್ನು ‘ಟಾಕ್ಸಿಕ್’ ಸಿನಿಮಾದಲ್ಲಿಯೂ ಯಶ್ ಮುಂದುವರಿಸಿದ್ದಾರೆ.
ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಯಶ್ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದರು. ನಿರ್ಮಾಪಕ ವೆಂಕಟ್ ನಾರಾಯಣ್ ಜೊತೆಗಿದ್ದರು.
ಈ ವೇಳೆ ಯಶ್, ‘ನಾನು ಪ್ರತೀ ಸಿನಿಮಾ ರಿಲೀಸ್ ಮುಂಚೆ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆಯುತ್ತೇನೆ. ಕೆಲಸದ ಒತ್ತಡದ ಕಾರಣ ಈ ಬಾರಿ ರಿಲೀಸ್ಗೂ ಒಂದು ದಿನ ಮೊದಲು ಬಂದಿದ್ದೇನೆ. ದೇವರ, ಜನರ ಆಶೀರ್ವಾದ ನಮ್ಮ ಮೇಲಿರಲಿ’ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.