
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಹಾಗೂ ಎ.ಹರ್ಷ (A.Harsha) ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದ 'ಭಜರಂಗಿ 2' (Bhajarangi 2) ಸಿನಿಮಾ ಒಟಿಟಿಯಲ್ಲಿ (OTT Platform) ಪ್ರಸಾರವಾಗಲಿದ್ದು, ಈ ಚಿತ್ರವನ್ನು ಶಿವರಾಜ್ಕುಮಾರ್ ಅವರು ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ಅರ್ಪಿಸಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದು, ಈ ವಿಚಾರ ಕೇಳಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಶಿವಣ್ಣ, ನನ್ನ ಅಭಿನಯದ 'ಭಜರಂಗಿ 2' ಸಿನಿಮಾ ಜೀ5ನಲ್ಲಿ (Zee5) ರಿಲೀಸ್ ಆಗುತ್ತಿದೆ.
ನಾನು ಹಾಗೂ ನನ್ನ ಚಿತ್ರತಂಡ ಈ ಸಿನಿಮಾವನ್ನು ಅಪ್ಪುಗೆ ಡೆಡಿಕೇಟ್ ಮಾಡುತ್ತೇವೆ. ಇದು ಅಪ್ಪು ಎಡಿಟಿಂಗ್ ರೂಮ್ನಲ್ಲೇ ಎಡಿಟ್ ಮಾಡಿದ ಚಿತ್ರ. ಸಾಕಷ್ಟು ಬಾರಿ ಅವನು ಸಿನಿಮಾದ ದೃಶ್ಯ ನೋಡಿ ಮೆಚ್ಚುಗೆಯ ಮಾತನಾಡಿದ್ದ. ಪ್ರೀ ರಿಲೀಸಿಂಗ್ ಇವೆಂಟ್ಗೂ ಅಪ್ಪು ಬಂದು ಬೆಂಬಲಿಸಿದ್ದರು, ಡ್ಯಾನ್ಸ್ ಮಾಡಿದ್ದರು. ರಿಲೀಸ್ ಆದ ದಿನವೂ ಬೆಳಗ್ಗೆ ಟ್ವೀಟ್ ಮಾಡಿ ಶುಭಕೋರಿದ್ದರು. ಅಲ್ಲದೇ ಸಿನಿಮಾ ಡಿಸ್ಟ್ರಿಬ್ಯೂಟರ್ ಬಳಿ ಮಾಹಿತಿ ಪಡೆದಿದ್ದರು. ಇದರಲ್ಲೇ ಗೊತ್ತಾಗತ್ತೆ ಭಜರಂಗಿಗೆ ಎಷ್ಟು ಹತ್ರ ಅಪ್ಪು ಅಂತಾ. ಈ ಸಿನಿಮಾದಲ್ಲಿ ಅಪ್ಪುಗೆ ರಿಲೇಟ್ ಆಗುವ ಸಾಕಷ್ಟು ಸನ್ನಿವೇಶಗಳು ಸಹ ಇವೆ ಎಂದು ಶಿವಣ್ಣ ಪುನೀತ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಅಪ್ಪುಗೆ ಭಜರಂಗಿ 2 ನೋಡುವ ಆಸೆ ಇತ್ತು: ಶಿವರಾಜ್ಕುಮಾರ್
'ಭಜರಂಗಿ 2' ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಲು ಮಿಸ್ ಮಾಡಿಕೊಂಡವರು ಈಗ ಕುಟುಂಬದ ಜೊತೆ ಮನೆಯಲ್ಲಿಯೇ ಕುಳಿತು ನೋಡಬಹುದು. ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಮಾಡಿದ್ದ ಶಿವಣ್ಣನ ಭಜರಂಗಿಗೆ ಅಭಿಮಾನಿಗಳು ಜೈಕಾರ ಹಾಕಿದ್ದರು. ಶಿವಣ್ಣನ ನಟನೆಗೆ, ಹರ್ಷ ಡೈರೆಕ್ಷನ್ಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಹಾಗೇ ಬಾಕ್ಸಾಫೀಸಿನಲ್ಲೂ ಸದ್ದು ಮಾಡಿತ್ತು. ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿದ 'ಭಜರಂಗಿ 2' ಸಿನಿಮಾವನ್ನು ಈಗ ಒಟಿಟಿಯಲ್ಲಿ ನೋಡುವ ಸೌಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ. ಇದೇ ಡಿಸೆಂಬರ್ 23ರಂದು 'ಜೀ5' ಒಟಿಟಿ ಮೂಲಕ 'ಭಜರಂಗಿ 2' ಚಿತ್ರ ಬಿಡುಗಡೆ ಆಗಲಿದೆ.
ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ ಹಾಗೂ ರೋಮಾಂಚನಗೊಳಿಸುವ ಅದ್ಭುತ ದೃಶ್ಯ ವೈಭವವಿರುವ 'ಭಜರಂಗಿ 2' ಚಿತ್ರ ಅಕ್ಟೋಬರ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ, ಎಲ್ಲೆಡೆ ಹೌಸ್ಫುಲ್ ಪ್ರದರ್ಶನವಾಗಿ, ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಹಲವು ಚಿತ್ರಮಂದಿರಗಳಿಗೆ ಶಿವಣ್ಣ ಭೇಟಿ ನೀಡಿದ್ದರು. ಅದಾಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ ಕನ್ನಡ ಚಿತ್ರರಂಗದ ಪಾಲಿಗೆ ಕಹಿ ಸುದ್ದಿಯೊಂದು ಸಿಡಿಲಿನಂತೆ ಬಂದೆರಗಿತ್ತು. ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಕೇಳಿ ಎಲ್ಲವೂ ಸ್ತಬ್ದವಾದಂತಾಗಿತ್ತು. ಆ ಘಟನೆ ಬಳಿಕ ಚಿತ್ರಮಂದಿರದ ಕಡೆಗೆ ಬರಲು ಬಹುತೇಕರು ಹಿಂದೇಟು ಹಾಕಿದ್ದರು.
Crazy Star Ravichandran: ಡಿಸೆಂಬರ್ 17ಕ್ಕೆ ಓಟಿಟಿಯಲ್ಲಿ ಕನ್ನಡಿಗ ಸಿನಿಮಾ ರಿಲೀಸ್
ಕೋವಿಡ್ ಸಂಕಷ್ಟದಲ್ಲಿ ನಿರ್ಮಾಪಕರು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಹೀಗಾಗಿ ಸಿನಿಮಾ ಪ್ರದರ್ಶನ ಮತ್ತೆ ಶುರು ಮಾಡಿ ಎಂದು ಶಿವಣ್ಣ ಅವರು ಹೇಳಿದ ನಂತರವೇ ರಾಜ್ಯದ ಚಿತ್ರಮಂದಿರಗಳಲ್ಲಿ 'ಭಜರಂಗಿ 2' ಚಿತ್ರ ಮರು ಪ್ರದರ್ಶನ ಆರಂಭವಾಗಿತ್ತು. ಪುನೀತ್ ರಾಜ್ಕುಮಾರ್ ನಿಧನದಿಂದ ಆಘಾತಗೊಂಡಿದ್ದ ಸಿನಿಪ್ರೇಕ್ಷಕರು ಶಿವರಾಜ್ ಕುಮಾರ್ ಮೇಲಿನ ಪ್ರೀತಿಯಿಂದ ಚಿತ್ರಮಂದಿರಕ್ಕೆ ಮತ್ತೆ ಮರಳಿ ಬಂದಿದ್ದರು. 'ಭಜರಂಗಿ 2' ಚಿತ್ರದಲ್ಲಿ ಜಾಕಿ ಭಾವನಾ (Bhavana), ಸೌರವ್ ಲೋಕೇಶ್ (Sourav Lokesh), ಹಿರಿಯ ನಟಿ ಶ್ರುತಿ (Shruti), ಚೆಲುವ ರಾಜು (Cheluva Raju), ಶಿವರಾಜ್ ಕೆ.ಆರ್.ಪೇಟೆ, ಕುರಿ ಪ್ರತಾಪ್ ಸೇರಿದಂತೆ ವಿಶೇಷವಾದ ತಾರಾಗಣವಿದೆ. ಈ ಸಿನಿಮಾಗೆ ಖ್ಯಾತ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ (Arjun Janya) ಸಂಗೀತ ನಿರ್ದೇಶನ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.