
‘ನಾವೆಲ್ಲ ಚಿಕ್ಕೋರಿದ್ದಾಗ ಅಪರಿಚಿತರು ಚಾಕ್ಲೇಟ್ ಕೊಡೋಕೆ ಬರ್ತಾರೆ, ತಗೊಳ್ಬಾರ್ದು ಅಂತ ದೊಡ್ಡವರು ಹೇಳ್ತಿದ್ರು. ಆದರೆ ಈಗ ಚಾಕ್ಲೇಟ್ನ ಆಮಿಷ ಇಲ್ಲ. ಮೊಬೈಲ್ ಮೂಲಕ ರಾಜಾರೋಷವಾಗಿ ಕಳ್ಳ ಒಳನುಗ್ಗುತ್ತಾನೆ.’
ರಮೇಶ್ ಅರವಿಂದ್ ಹೀಗೆ ವಿವರಿಸಿದ್ದು ಇಂದಿನ ವಸ್ತುಸ್ಥಿತಿಯನ್ನು ಮಾತ್ರವಲ್ಲ, 100 ಚಿತ್ರ ಒನ್ಲೈನ್ಅನ್ನೂ. ಈ ತಿಂಗಳ 19ರಂದು ರಮೇಶ್ ನಿರ್ದೇಶನ ಹಾಗೂ ನಟನೆಯ ‘100’ ಚಿತ್ರ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆಯಾಯಿತು. ‘ಪ್ರತೀ ಕತೆಯಲ್ಲೂ ಒಬ್ಬ ಹೀರೋ ಒಬ್ಬ ವಿಲನ್ ಇರ್ತಾನೆ. ಬಟ್ ನಮ್ಮ ಕತೇಲಿ ಹೀರೋನೆ ಇಲ್ಲ, ಇಬ್ರೂ ವಿಲನ್ನೇ’ ಅನ್ನೋ ಸಾಲಿನೊಂದಿಗೆ ಶುರುವಾಗುವ ಟ್ರೈಲರ್ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಅದಕ್ಕುತ್ತರ ಸಿನಿಮಾದಲ್ಲಿ ಸಿಗುತ್ತೆ ಅಂತಾರೆ ರಮೇಶ್.
‘ಮನೆಯೊಳಗೆ ಬರುವ ಅಪರಿಚಿತರು ಮನೆಯ ಯಜಮಾನನಿಗೇ ಗೊತ್ತಾಗದ ಹಾಗೆ, ಆತನ ಪ್ರತಿಪಾದಿಸುವ ಮೌಲ್ಯಗಳನ್ನು ಹೇಗೆ ಬ್ರೇಕ್ ಮಾಡ್ತಾರೆ, ಆನ್ಲೈನ್ ಜಗತ್ತು ಫ್ಯಾಮಿಲಿಯೊಂದಕ್ಕೆ ಹೇಗೆಲ್ಲ ಮೋಸ ಮಾಡಬಹುದು ಅನ್ನೋದನ್ನೆಲ್ಲ ಸಿನಿಮಾದಲ್ಲಿ ಹೇಳಿದ್ದೇವೆ. ಚಿತ್ರವನ್ನು ತೆಲುಗಿಗೂ ಡಬ್ ಮಾಡಲಾಗಿದೆ’ ಎಂದರು.
ಸಿನಿಮಾಟೋಗ್ರಾಫರ್ ಸತ್ಯ, ನಿರ್ಮಾಪಕ ಎಂ ರಮೇಶ್ ರೆಡ್ಡಿ, ಕಲಾ ನಿರ್ದೇಶಕ ಮೋಹನ್ ಪಂಡಿತ್, ಸಂಕಲನಕಾರ ಶ್ರೀನಿವಾಸ್ ಹಾಗೂ ಚಿತ್ರತಂಡದವರು ಹಾಜರಿದ್ದರು. ಚಿತ್ರದಲ್ಲಿ ರಮೇಶ್ ಜೊತೆ ರಚಿತಾ ರಾಮ್, ಪೂರ್ಣ, ಬೇಬಿ ಸ್ಮಯ, ಶೋಭರಾಜ್ ಮತ್ತಿತರರು ನಟಿಸಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತವಿದೆ.
ಇನ್ನು ರವಿ ಬಸ್ರೂರು ಸಂಗೀತ ಸಂಯೋಜನೆಯಿರುವ ಈ ಚಿತ್ರದಲ್ಲಿ ನಾಲ್ಕು ಫೈಟ್ಗಳಿದ್ದು, ಒಂದೊಂದಕ್ಕೂ ಗಟ್ಟಿಯಾದ ಭಾವನಾತ್ಮಕ ಕಾರಣಗಳಿವೆಯಂತೆ. ಎರಡು ಫೈಟ್ ದೃಶ್ಯಗಳನ್ನು ಜಾಲಿ ಬಾಸ್ಟಿನ್ ಮತ್ತೆರೆಡು ಫೈಟ್ ದೃಶ್ಯಗಳನ್ನು ರವಿವರ್ಮ ಮಾಡಿದ್ದಾರಂತೆ. ಹಾಗೂ ಸಿನಿಮಾದಲ್ಲಿರುವ ಚೇಸಿಂಗ್ ದೃಶ್ಯಕ್ಕೆ (Chasing scene) 100ರಿಂದ 150 ಕಾರುಗಳನ್ನು ಬಳಸಲಾಗಿದೆ. ಇಡೀ ರಸ್ತೆ ಬಾಡಿಗೆಗೆ ತೆಗೆದುಕೊಂಡು ಆ ದೃಶ್ಯವನ್ನು ಚಿತ್ರೀಕರಣ ಮಾಡಲಾಗಿದೆ. ಈ ಸನ್ನಿವೇಶಗಳನ್ನು ಚಿತ್ರೀಕರಿಸಿದ್ದೇ ಒಂದು ದೊಡ್ಡ ಥ್ರಿಲ್ಲಿಂಗ್ ಅನುಭವ. ರವಿವರ್ಮಾ ಅದ್ಭುತ ತಂತ್ರಜ್ಞರು ಅವರು ಚಿತ್ರಮಂದಿರದ ಒಳಗೆ ಒಂದು ಫೈಟ್ ಸನ್ನಿವೇಶ ಶೂಟ್ ಮಾಡಿದ್ದಾರೆ. ನಿರ್ಮಾಪಕರು ರಮೇಶ್ ರೆಡ್ಡಿ ಯಾವುದಕ್ಕೂ ಕಡಿಮೆ ಮಾಡದೇ ಆ ದೃಶ್ಯಗಳಿಗಾಗಿ ಖರ್ಚು ಮಾಡಿದ್ದಾರೆ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ. ಚಿತ್ರವು ಇದೇ ನವೆಂಬರ್ 19ರಂದು ತೆರೆ ಕಾಣಲಿದೆ.
ರಮೇಶ್ ನೀಡುವ 5 ಟಿಫ್ಸ್
1. ಹೊಸ ನಿರ್ದೇಶಕರಿಗೆ :
ಘಟನೆಯನ್ನು ದೃಶ್ಯದ ಮೂಲಕ ಹೇಗೆ ಹೇಳಬೇಕು ಅನ್ನುವ ವಿಷ್ಯುವಲ್ ಲಿಟರೆಸಿ ಬೆಳೆಸಿಕೊಳ್ಳಬೇಕು. ಸಿನಿಮಾದಲ್ಲಿ ಬರುವ 60-70 ಮನಸ್ಥಿತಿಗಳ ಸೈಕಾಲಜಿ ಅರಿತುಕೊಂಡು ಹ್ಯಾಂಡಲ್ ಮಾಡುವ ಜಾಣ್ಮೆ ಬೇಕು. ಎಲ್ಲಕ್ಕಿಂತ ಮುಖ್ಯ ಕತೆ ಹೇಳುವ ಕಲೆ ತಿಳಿಯಬೇಕು.
2. ನಟರಿಗೆ:
ಇಂಥಾ ಘಟನೆಗೆ ಈ ಪಾತ್ರ ಹೇಗೆ ಪ್ರತಿಕ್ರಿಯಿಸಬಹುದು ಅನ್ನುವ ಗ್ರಹಿಕೆ. ಫೋಕಸ್ ಆಗಿದ್ದೇ ಆರಾಮವಾಗಿಯೂ ಇದ್ದರೆ ಡೈಲಾಗ್ ತಪ್ಪಲ್ಲ. ಜೊತೆಗೆ ಈ ಪಾತ್ರಕ್ಕೆ ಈ ಕ್ಷಣಕ್ಕೂ ಮೊದಲು ಏನಾಗಿತ್ತು ಅಂತ ಕಂಡುಕೊಂಡು ಬಳಿಕ ನಟನೆ ಮುಂದುವರಿಸಬೇಕು.
3. ಬರಹಗಾರನಿಗೆ
ಸಿನಿಮಾ ಬರಹಗಾರನಿಗೆ ಬರವಣಿಗೆಯಲ್ಲಿ ಫ್ರೆಶ್ನೆಸ್ ಬೇಕು. ಏಕತಾನತೆ ಅನಿಸಿದರೆ ಅದನ್ನು ಬ್ರೇಕ್ ಮಾಡಿ ಮತ್ತೆ ಕಟ್ಟುತ್ತಾ ಹೋಗಬೇಕು. ಕುತೂಹಲವನ್ನು ಕೊನೇವರೆಗೆ ಹಿಡಿದಿಟ್ಟುಕೊಳ್ಳೋದು ಗೊತ್ತಿರಬೇಕು. ಎಮೋಶನ್ಅನ್ನು ಕೊನೇವರೆಗೂ ಬಿಡಬಾರದು. ಇಲ್ಲಿ ಬುದ್ಧಿವಂತಿಕೆಗಿಂತಲೂ ಭಾವನೆ ಜನರಿಗೆ ಹೆಚ್ಚು ಕನೆಕ್ಟ್ ಆಗುತ್ತೆ.
5. ನಿರೂಪಕನಿಗೆ
ನನ್ನೆದುರು ಕೂತ ವ್ಯಕ್ತಿಯ ಜೊತೆಗೆ ಒಂದು ಕನೆಕ್ಷನ್ ಬೆಳೆಯುವಂತೆ ನೋಡಿಕೊಳ್ಳಬೇಕು. ಆ ಕ್ಷಣ ಮನಸ್ಸು ದೇಹ ಎಲ್ಲ ಅಲ್ಲೇ ಇದ್ದರೆ ಸ್ಪಾಂಟೆನಿಟಿಗೆ ಧಕ್ಕೆ ಆಗಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.