ಕಲಾವಿದರ ಸಿನಿಮಾಗಳು ಆದರ್ಶವೇ ಹೊರತು, ಅವರ ವೈಯಕ್ತಿಕ ಬದುಕಲ್ಲ: ದುನಿಯಾ ವಿಜಿ

By Kannadaprabha NewsFirst Published Jun 15, 2020, 5:07 PM IST
Highlights

ಖಿನ್ನತೆ ಕಾಡಿದರೆ ಅದನ್ನು ಕನಿಷ್ಟ ವೈದ್ಯರಲ್ಲಾದರೂ ಹಂಚಿಕೊಳ್ಳಬೇಕಲ್ಲ? ನಮ್ಮ ಕಷ್ಟಗಳೇನಿರುತ್ತದೆ? ಬಾಲ್ಯದಲ್ಲಿ ಶಾಲೆಯಲ್ಲಿ ಫೇಲಾದಾಗ ಯಾರೋ ತಮಾಷೆ ಮಾಡಿದ್ರು ಅಂತ, ಅಪ್ಪ ಅಮ್ಮ ಬೈದ್ರು ಎನ್ನುವ ಕಾರಣಕ್ಕೆಲ್ಲ ಆತ್ಮಹತ್ಯೆಗೆ ಶರಣಾದವರನ್ನು ನೋಡಿದ್ದೇನೆ. ಆದರೆ ಯಾರೋ ಏನೋ ಅಂದರು ಎನ್ನುವ ಕಾರಣಕ್ಕೆ ಅಂತ್ಯ ಹಾಡುವಷ್ಟು ನಿಕೃಷ್ಟವಾಗಿದೆಯೇ ನಮ್ಮ ಪ್ರಾಣ?
 

ಆರ್. ಕೇಶವಮೂರ್ತಿ 

ನಾವೆಲ್ಲೂ ನಾಯಿ, ಹುಲಿ, ಆನೆ ಅಥವಾ ಬೇರೆ ಯಾವುದೇ ಪ್ರಾಣಿಗಳು ಆತ್ಮಹತ್ಯೆ ಮಾಡಿರುವುದರ ಬಗ್ಗೆ ಕೇಳಿಲ್ಲ. ಅದೇ ರೀತಿ ಗಿಡಮರಗಳು ಕೂಡ. ಆದರೆ ನಾವು ಮನುಷ್ಯರಾಗಿ ಪ್ರಾಣಿಗಳನ್ನು ಬೇಟೆಯಾಡುತ್ತೇವೆ, ಮರಗಳನ್ನು ಕೂಡ ಕಡಿಯುತ್ತೇವೆ. ಆದರೆ ಯಾವತ್ತೂ ಕೂಡ ಪ್ರಾಣಿಗಳು ಹಿಂಡಿನಿಂದ ದೂರಾಗಿ, ತಾವಾಗಿಯೇ ನಮ್ಮ ಮುಂದೆ ನನ್ನನ್ನು ಕೊಂದು ಬಿಡು ಎಂದು ಮುಂದೆ ಬಂದಿಲ್ಲ. ಭೂಮಿಯಲ್ಲಿ ಭದ್ರವಾಗಿ ಬೇರು ಬಿಟ್ಟ ಮರಗಳನ್ನು ಬುಡ ಸಮೇತ ಕಡಿಯುವುದೇ ಒಂದು ಸಾಹಸ. ಆದರೆ ಅವೆಲ್ಲವನ್ನು ನಿಯಂತ್ರಿಸಬಲ್ಲ ನಾವೇ ನಮ್ಮ ಮನಸಿನ ನಿಯಂತ್ರಣ ಕಳೆದುಕೊಂಡು ಸಾಯಲು ಬಯಸುತ್ತೇವೆ ಎಂದರೆ ಅದಕ್ಕಿಂತ ವಿಪರ್ಯಾಸ ಮತ್ತೊಂದಿಲ್ಲ. ಅದಕ್ಕೆ ಕಾರಣ ಕೂಡ ಅಲ್ಲೇ ಇದೆ. ಮರಗಳು ಹೇಗೆ ಬೇರುಗಳನ್ನು ಭೂಮಿ ತುಂಬ ಹರಡಿಕೊಂಡಿರುವುದೋ, ಪ್ರಾಣಿಗಳು ಹೇಗೆ ಹಿಂಡು ಹಿಂಡಾಗಿ ಸುತ್ತಾಡುವುದೋ ಅದೇ ರೀತಿ ಮನುಷ್ಯ ಕೂಡ ಎಲ್ಲರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುತ್ತಿರಬೇಕು. ಯಾಕೆಂದರೆ ಮನುಷ್ಯ ಮೂಲತಃ ಸಮಾಜ ಜೀವಿ. ಸಾಮಾನ್ಯ ಮನುಷ್ಯ ಒಂಟಿಯಾಗಿದ್ದುಕೊಂಡು, ಒಂಟಿತನ ಆವಾಹಿಸಿಕೊಂಡು ಬದುಕುವುದು ಕಷ್ಟ. ಆಗಲೇ ಆತ್ಮಹತ್ಯೆಯಂಥ ಆಲೋಚನೆ ತಲೆಗೆ ಬರಲು ಸಾಧ್ಯ.

ಮನೆಯಲ್ಲೇ  ಕಿರುತೆರೆ ಕಲಾವಿದರ ಆತ್ಮಹತ್ಯೆ, ವಾಸನೆ ಬಂದ ಮೇಲೆ ಗೊತ್ತಾಯ್ತು

ಕಷ್ಟ ಮನುಷ್ಯನಿಗೆ ಬರದೆ ಮರಗಿಡಗಳಿಗೆ ಬರುತ್ತವಾ ಎನ್ನುವ ಮಾತಿದೆ.  ಪ್ರಕೃತಿ ಸಹಜವಾದ ಗಾಳೆ, ಮಳೆ, ಬಿಸಿಲಿನ ಬೇಗೆ ಸಹಿಸಿ ಬೆಳೆಯುವ ಅವುಗಳನ್ನು  ಚಿತ್ರ ವಿಚಿತ್ರವಾಗಿ ಕತ್ತರಿಸುವ ಮನುಷ್ಯರಿರುವಾಗ ಕಷ್ಟ ಬರದೇ ಇರಲು ಸಾಧ್ಯವೇ? ಅವುಗಳಿಗೆ ಹೇಳಲು ಬಾಯಿ ಇಲ್ಲ. ಆದರೆ ಬಾಯಿ ಇರುವ ಮನುಷ್ಯ ಕಷ್ಟಗಳ ವಿಚಾರದಲ್ಲಿ ಮೌನವಾಗಿರಬಾರದು.  ಬದಲಾವಣೆ ಇಲ್ಲದೆ ಜಗತ್ತೇ ಇಲ್ಲ. ಹೀಗಿರುವಾಗ ಕಷ್ಟ ನಮ್ಮೆದುರಿಗೆ ಬಂದೇ ಬರುತ್ತದೆ. ಮತ್ತೆ ಸುಖ ಬರುವ ನಿರೀಕ್ಷೆಯನ್ನು ನಾವು ತೊರೆಯಬಾರದು. ಖಿನ್ನತೆ ಕಾಡಿದರೆ ಅದನ್ನು ಕನಿಷ್ಟ ವೈದ್ಯರಲ್ಲಾದರೂ ಹಂಚಿಕೊಳ್ಳಬೇಕಲ್ಲ? ನಮ್ಮ ಕಷ್ಟಗಳೇನಿರುತ್ತದೆ? ಬಾಲ್ಯದಲ್ಲಿ ಶಾಲೆಯಲ್ಲಿ ಫೇಲಾದಾಗ ಯಾರೋ ತಮಾಷೆ ಮಾಡಿದ್ರು ಅಂತ, ಅಪ್ಪ ಅಮ್ಮ ಬೈದ್ರು ಎನ್ನುವ ಕಾರಣಕ್ಕೆಲ್ಲ ಆತ್ಮಹತ್ಯೆಗೆ ಶರಣಾದವರನ್ನು ನೋಡಿದ್ದೇನೆ. ಆದರೆ ಯಾರೋ ಏನೋ ಅಂದರು ಎನ್ನುವ ಕಾರಣಕ್ಕೆ ಅಂತ್ಯ ಹಾಡುವಷ್ಟು ನಿಕೃಷ್ಟವಾಗಿದೆಯೇ ನಮ್ಮ ಪ್ರಾಣ? ಕಲಾವಿದನಾದರೂ ಅಷ್ಟೇ, ಮಾಡುವ ಪಾತ್ರಗಳಿಂದ ನೀತಿ ಕಲಿಯುತ್ತಾ ಹೋಗಬೇಕು. ಇಂದು ನಾಯಕನಾಗಿದ್ದವನು ನಾಳೆ ಪೋಷಕ ಪಾತ್ರ ಮಾಡಬೇಕಾದರೆ ಹೇಗೆ ಎನ್ನುವುದಕ್ಕೂ ತಯಾರಾಗಿರಬೇಕು. ಎಲ್ಲ ಪಾತ್ರಗಳನ್ನು ಆವಾಹಿಸಿಕೊಂಡು ನಟಿಸಬೇಕು. ಆದರೆ ಸಾಯುವ ಪಾತ್ರ ಮಾಡಿದರೂ ಮನಸು ಆ ಪಾತ್ರದ ಮೂಲಕ ಬದುಕುವುದನ್ನು ಕಲಿಯಬೇಕು. 

ಸುಶಾಂತ್ ಬರೆದಿಟ್ಟಿರುವ ಆ 50 ಕನಸುಗಳು ನಿಮ್ಮನ್ನೂ ಒಮ್ಮೆ ಬೆರಗುಗೊಳಿಸಿದರೆ ಅಚ್ಚರಿಯಿಲ್ಲ !

ನಾನು ಆತ್ಮಹತ್ಯೆ ಬಗ್ಗೆ ಯಾಕೆ ಹೇಳುತ್ತಿದ್ದೇನೆ ಎನ್ನುವುದು ನಿಮಗೆ ಈಗಾಗಲೇ ತಿಳಿದಿರುತ್ತದೆ. ಆ ಕಲಾವಿದನ ಆತ್ಮಕ್ಕೆ ಶಾಂತಿ ಸಿಗಲಿ. ಆದರೆ ಆತನಿಗೆ ಶ್ರದ್ಧಾಂಜಲಿ ಎಂದು ಬರೆಯುತ್ತಾ ಒಂದಷ್ಟು ಮಂದಿ ನೆಗೆಟಿವ್ ವಿಚಾರಗಳನ್ನು ಹಂಚುತ್ತಿರುವುದನ್ನು ನೋಡಿದೆ. ಅದಕ್ಕಾಗಿ ಹೇಳುತ್ತಿದ್ದೇನೆ, ಸೌಂದರ್ಯ, ಪ್ರತಿಭೆ, ಹಣ ಎಲ್ಲ ಇದ್ದರೂ ಆತನಿಗೆ ಜಗತ್ತಲ್ಲಿ ಬದುಕುವುದು ಕಷ್ಟವಾಗಿರಬೇಕಾದರೆ ನಾವೇಕೆ ಬದುಕಿರಬೇಕು ಎಂದು ಒಂದಷ್ಟು ಯುವ ಸಮೂಹ ಪ್ರಶ್ನಿಸುತ್ತಿದೆ. ಅದು ದೊಡ್ಡ ಸುಳ್ಳು. ಕಲಾವಿದರ ಸಿನಿಮಾಗಳು ಆದರ್ಶವೇ ಹೊರತು ಅವರ ವೈಯಕ್ತಿಕ ಬದುಕಲ್ಲ. ನಮ್ಮ ಬದುಕಿಗೆ ಕಷ್ಟವನ್ನು ಎದುರಿಸಿ ಬದುಕಿ ತೋರಿಸಿದ ಗಾಂಧಿ, ಅಂಬೇಡ್ಕರ್, ಕಲಾಂ ಅವರಂಥ ಜ್ಞಾನಿಗಳು ಆದರ್ಶವಾಗಿರಲಿ. ಕಲಾವಿದರನ್ನು ಆದರ್ಶ ಎನ್ನುವಾಗ ಅವರ ಸಿನಿಮಾದ ಒಳ್ಳೆಯ ಪಾತ್ರಗಳನ್ನಷ್ಟೇ ಅನುಕರಿಸಿ. ಆತ್ಮಹತ್ಯೆಯೇ ಸಮಸ್ಯೆಗೆ ಪರಿಹಾರ ಎಂದರೆ ಇಂದು ಎಲ್ಲರೂ ದಿನ ದಿನ ಆತ್ಮಹತ್ಯೆ ಮಾಡಬೇಕಾದೀತು.

click me!