ಕಲಬುರಗಿ ಪಂಚಪ್ರಾಣ ಅಂದಿದ್ದ ಪುನೀತ್: ಅಪ್ಪು ನೆನೆದು ಕಣ್ಣೀರಾದ ಅಭಿಮಾನಿಗಳು

By Kannadaprabha NewsFirst Published Oct 30, 2021, 1:59 PM IST
Highlights

*  ದೊಡ್ಮನೆ ಹುಡುಗನ ಕಲಬುರಗಿ ನಂಟು 
*  ಅಭಿಮಾನಿಗಳ ಪ್ರೀತಿ, ಆದರಕ್ಕೆ ಬೆರಗಾಗಿದ್ದ ಪುನೀತ್ 
*  ಪುನೀತರ ಎಲ್ಲಾ ಕನಸುಗಳು ಹಾಗೇ ಉಳಿದು ಹೋದವು 
 

ಕಲಬುರಗಿ(ಅ.30):  ಕಲಬುರಗಿ(Kalaburagi) ಅಂದ್ರೆ ನನಗೆ ಪಂಚಪ್ರಾಣ, ಕಲಬುರಗಿಗೆ ಮತ್ತೆ ಮತ್ತೆ ಬರುವೆ, ಮುಂದಿನ ಸಿನಿಮಾದ ಚಿತ್ರೀಕರಣಕ್ಕೆ(Shooting) ಇದೇ ಊರನ್ನೇ ಆಯ್ದುಕೊಳ್ಳುವೆ, ಆಗ ಬಂದಾಗ ಗಾಣಗಾಪುರಕ್ಕೆ ಹೋಗಿ ದತ್ತ ಮಹಾರಾಜಾರ ನಿರ್ಗುಣ ಪಾದುಕೆ ಪೂಜಿಸುವೆ ಎಂದು ಹೇಳಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ವಿಧಿಯಾಟದಲ್ಲಿ ಬಾರದ ಊರಿಗೆ ತೆರಳಿದ್ದಾರೆ. ಈ ಬೆಳವಣಿಗೆ ಕಲಬುರಗಿಯಲ್ಲಿರೋ ಪುನೀತ್ ಅಭಿಮಾನಿಗಳನ್ನು ಕಣ್ಣೀರಾಗಿಸಿದೆ.

"

ಇಲ್ಲಿಗೆ ಬಂದು ಶೇಂಗಾ ಹೋಳಿಗೆ, ಜೋಳದ ರೊಟ್ಟಿ ಸವಿದು ಊಟದ(Food) ಬಗ್ಗೆ ಮೆಚ್ಚುಗೆ ಹೇಳಿದ್ದ ಪವರ್ ಸ್ಟಾರ್(Power Star) ಇಷ್ಟು ಬೇಗ ಬಾರದ ಊರಿಗೆ ಪಯಣ ಬೆಳೆಸುತ್ತಾರೆಂದು ಕನಸಲ್ಲೂ ಯೋಚಿಸಿರಲಿಲ್ಲ ಎಂದು ಕಲಬುರಗಿ ಮಂದಿ ಕಣ್ಣೀರು ಹಾಕುತ್ತಿದ್ದಾರೆ.

ದೊಡ್ಮನೆ ಹುಡುಗನ ಕಲಬುರಗಿ ನಂಟು: 

ದೊಡ್ಮನೆ ಹುಡುಗ, ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ಗೂ ಕಲಬುರಗಿಗೂ ತುಂಬ ಹತ್ತಿರದ ನಂಟಿತ್ತು. ಇಲ್ಲಿನ ಅಫಜಲ್ಪೂರ ತಾಲೂಕಿನ ಸ್ಟೇಷನ್ ಗಾಣಗಾಪುರ ಗುತ್ತೇದಾರ್ ಕುಟುಂಬಕ್ಕೂ ದೊಡ್ಮನೆಗೂ(Dodmane) ನಂಟು. ಆ ನಂಟಿನಿಂದಲೇ ಪುನೀತ್ ಅವಕಾಶ ಸಿಕ್ಕಾಗೆಲ್ಲಾ ಕಲಬುರಗಿಗೆ ಬಂದು ಹೋಗುತ್ತಿದ್ದರು.

ಪುನೀತ್‌ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಜಗ್ಗೇಶ್‌ ಆಗ್ರಹ

ಕಳೆದ ಮಾರ್ಚ್ 21 ರಂದು ಪುನೀತ್ ರಾಜಕುಮಾರ್ ಕಲಬುರಗಿಗೆ ಆಗಮಿಸಿ ಅಭಿಮಾನಿಗಳನ್ನೆಲ್ಲ(Fans) ಭೇಟಿ ಮಾಡಿ ಕೈ ಕುಲುಕಿದ್ದರು. ತಾವು ನಟಿಸಿದ ಯುವರತ್ನ ಚಿತ್ರದ ಪ್ರಚಾರಕ್ಕಾಗಿ ಕಲಬುರಗಿಗೆ ಆಗಮಿಸಿದ್ದಾಗ ಸಾವಿರಾರು ಸಂಖ್ಯೆಯಲ್ಲಿ ಜನ ಇವರನ್ನು ಕಾಣಲು, ಮಾತನಾಡಿಸಲು ಇಲ್ಲಿ ಸೇರಿದ್ದರು. 

ಇಲ್ಲಿರುವ ಶರಣಬಸವೇಶ್ವರ ಮಂದಿರದಲ್ಲಿ(Sharanabasaveshwara Temple) ಜನಜಾತ್ರೆಯೇ ಅಪ್ಪುವಿಗಾಗಿ ಸೇರಿತ್ತು. ಇಲ್ಲಿ ಅಭಿಮಾನಿಗಳೆಲ್ಲರೂ ಸೇರಿಕೊಂಡು ಗುಲಾಬಿ ಹೂವಿನ ಸುರಿಮಳೆ ಮಾಡಿದ್ದಲ್ಲದೆ ಅವರಿಗೆ ಶುಭ ಕೋರಿದ್ದರು. ಇದಕ್ಕೂ ಮುಂಚೆ ತಮ್ಮ ತಂದೆ ಡಾ. ರಾಜಕುಮಾರ್ ಜೊತೆಗೂ ಪುನೀತ್ ಕಲಬುರಗಿಗೆ ಆಗಮಿಸಿದ್ದರು. ಮಾಲೀಕಯ್ಯಾ ಗುತ್ತೇದಾರ್ ನೇತೃತ್ವದಲ್ಲಿ ಚಂದ್ರಸೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಡಾ. ರಾಜಕುಮಾರ್ ಜೊತೆಗೆ ಪುನೀತ್ ಭಾಗವಹಿಸಿದ್ದರು.

ನನ್ನ ಹುಟ್ಟು ಹಬ್ಬಕ್ಕೆ ಕೇಕ್ ತಿನ್ನಿಸಿದ್ರು: 

ಕಳೆದ ಸೆ.14ರಂದು ನನ್ನ ಹುಟ್ಟುಹಬ್ಬ(Birthday), ಕರೆ ಮಾಡಿ ಬೆಂಗಳೂರಿಗೆ ಕರೆಯಿಸಿಕೊಂಡಿದ್ದ ಪುನೀತ್ ಮನೆಯಲ್ಲೇ ಕೇಕ್ ಕತ್ತರಿಸಿ ನನಗೆ ತಿನ್ನಿಸಿ ಶುಭ ಕೋರಿದ್ದರು. ಅಂದು ನಾನು ಇಡೀ ದಿನ ಪುನೀತ್ ಜೊತೆ ಕಳೆದಿದ್ದೆ. ಅದೇ ನನಗೂ ಪುನೀತ್‌ಗೂ ಆಂತಹ ಕೊನೆಯ ಬೇಟಿ, ತುಂಬ ಒಲ್ಳೆಯ ವ್ಯಕ್ತಿತ್ವ ಅವರದ್ದಾಗಿತ್ತು. ಕುಟುಂಬ ಸಂಬಂಧಗಳ ಜೊತೆಗೇ ಸ್ನೇಹ- ಪ್ರೀತಿಗೆ ಅವರು ಎಂದೂ ಬಿಟ್ಟು ಕೊಟ್ಟವರಲ್ಲ ಎಂದು ನಿತೀನ್ ಗುತ್ತೇದಾರ್ ಕಂಬನಿ ಮಿಡಿದರು.
ಕನ್ನಡಪ್ರಭ(Kannada Prabha) ಜೊತೆ ಮಾತನಾಡಿದ ನಿತಿನ್ ಗುತ್ತೇದಾರ್ ತಮ್ಮ ಹಾಗೂ ದೊಡ್ಮನೆ ಕುಟುಂಬದ ಮದ್ಯೆ ಅವಿನಾಭಾವ ಸಂಬಂಧವಿತ್ತು. ಈ ಸಂಬಂಧವೇ ಪುನೀತ್ ಜೊತೆ ತಮ್ಮ ಸ್ನೇಹ, ಪ್ರೀತಿ ಗಟ್ಟಿಯಾಗಿ ಬೆಸೆಯುವಂತೆ ಮಾಡಿತ್ತು ಎನ್ನುತ್ತಾರೆ.

ಮಾರ್ಚ್‌ನಲ್ಲಿ ಕಲಬುರಗಿಗೆ ಬಂದಾಗ ತಮ್ಮ ಮನೆಯಲ್ಲೇ ಸಮಾರಂಭ ಆಯೋಜಿಸಿದ್ದ ನಿತೀನ್ ಗುತ್ತೇದಾರ್ ಕಲಬುರಗಿಯಲ್ಲಿ ಪುನೀತ್ ಅಭಿಮಾನಿಗಳು ತುಂಬ ಇದ್ದಾರೆ. ಅವರ ನಿಧನ ಎಲ್ಲರಿಗೂ ಬರ ಸಿಡಿಲು ಬಡಿದಂತೆ ಆಗಿದೆ ಎಂದು ಕಣ್ಣೀರು ಹಾಕಿದರು.

ಉಡಾಳ ಹುಡುಗನ ಬದುಕು ಬದಲಿಸಿದ ಪುನೀತ ‘ರಾಜಕುಮಾರ'

ಪುನೀತ್ ರಾಜಕುಮಾರ್ ಮಾರ್ಚ್ 3ನೇ ವಾರ ಕಲಬುರಗಿಗೆ ಬಂದಿದ್ದಾಗ ಇಲ್ಲಿನ ಐತಿಹಾಸಿಕ ದಾಸೋಹ ಪೀಠ ಶರಣಬಸವೇಶ್ವರ ಮಂದಿರ, ಮನೆಗಳಿಗೂ ಭೇಟಿ ನೀಡಿದ್ದರು. ದಾಸೋಹ ಪೀಠಾಧಿಪತಿಗಳಾದ ಡಾ. ಶರಣಬಸವಪ್ಪ ಅಪ್ಪ ಅವರನ್ನು ಕಂಡು ಆಶಿರ್ವಾದ ಸಹ ಪಡೆದಿದ್ದರು. 

ಕಲಬುರಗಿಯಲ್ಲೇ ಸಿನಿಮಾ ಚಿತ್ರೀಕರಣ ಮಾಡೋದಾಗಿ ಹೇಳಿದ್ದ ಅಪ್ಪು: 

ತಮ್ಮ ಮುಂದಿನ ಸಿನಿಮಾ ಚಿತ್ರೀಕರಣ ಕಲಬುರಗಿಯಲ್ಲೇ ಮಾಡೋದಾಗಿ ಹೇಳಿದ್ದ ಪುನೀತ ಮಾತು ಹಾಗೇ ಉಳಿದು ಹೋಗಿವೆ. ಶರಣಬಸವೇಶ್ವರ ಮಂದಿರದ ಅಂಗಳದಲ್ಲಿ ಅಭಿಮಾನಿಗಳೊಂದಿಗೆ ಮಾತುಕತೆ ನಡೆದಾಗ ಈ ಭರವಸೆ ನೀಡಿದ್ದರು. ಆದರೆ ವಿಧಿಯಾಟ ನೋಡಿ, ಅವರೇ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. 

ಯುವರತ್ನ ಪ್ರಚಾರಕ್ಕೆಂದು ಕಲಬುರಗಿಗೆ ಬಂದಾಗ ಇಲ್ಲಿನ ಅಭಿಮಾನಿ ಬಲಗ ಅವರಿಗೆ 12 ಜೆಸಿಬಿ ಬಳಸಿ ಗುಲಾಬಿ ಹೂವಿನ ಮಲೆಗರೆದಿತ್ತು. ಅಭಿಮಾನಿಗಳ ಪ್ರೀತಿ, ಆದರಕ್ಕೆ ಪುನೀತ್ ಬೆರಗಾಗಿದ್ದರು. ಕಲಬುರಗಿ ಅಂದ್ರೆ ತಮಗೆ ಪಂಚಪ್ರಾಣ ಅಂದಿದ್ರು. ಕಲಬುರಗಿಗೆ ಬಂದಾಗ ನಿತೀನ್ ಗುತ್ತೇದಾರ್ ಮನೆಯಲ್ಲಿ ಶೇಂಗಾ ಹೋಳಿಗೆ, ಜೋಳದ ರೊಟ್ಟಿ ಸವಿದಿದ್ದ ಪುನೀತ್ ಮುಂದಿನ ಸಲ ಕಲಬುರಗಿಗೆ ಬಂದಾಗ ಗಾಣಗಾಪುರ ದತ್ತಾತ್ರೇಯ ಸ್ವಾಮಿ ದರುಶನಕ್ಕೂ ಹೋಗೋದಾಗಿ ಹೇಳಿದ್ದರು. ಆದರೆ ವಿಧಿಯಾಟ. ಪುನೀತರ ಎಲ್ಲಾ ಕನಸುಗಳು ಹಾಗೇ ಉಳಿದು ಹೋದವು.
 

click me!