ಭಾನುವಾರ (ಅ.31) ಅಪ್ಪನ ಸಮಾಧಿಯ ಪಕ್ಕದಲ್ಲಿಯೇ ಅಪ್ಪು ಅಂತ್ಯಸಂಸ್ಕಾರ

By Suvarna NewsFirst Published Oct 29, 2021, 8:45 PM IST
Highlights

* ಅಪ್ಪನ ಸಮಾಧಿಯ ಪಕ್ಕದಲ್ಲಿಯೇ ಮಗನ ಅಂತ್ಯಸಂಸ್ಕಾರ
* ಕಂಠೀರವ ಸ್ಟುಡಿಯೋ ಆವರಣದಲ್ಲಿ  ಪುನೀತ್ ರಾಜ್‌ಕುಮಾರ್ ಅಂತ್ಯಸಂಸ್ಕಾರ
* ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶ

ಬೆಂಗಳೂರು, (ಅ.29): ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar) ಅಂತ್ಯಸಂಸ್ಕಾರವನ್ನು  ಅವರ ತಂದೆ ಸಮಾಧಿಯ ಪಕ್ಕದಲ್ಲಿಯೇ ಮಾಡಲು ರಾಜ್ಯ ಸರ್ಕಾರ ಹಾಗೂ ಕುಟುಂಬಸ್ಥರು ತೀರ್ಮಾನಿಸಿದೆ.

ಪುನೀತ್ ರಾಜ್‌ಕುಮಾರ್ ಅಂತ್ಯಸಂಸ್ಕಾರವನ್ನು (Last Rite) ಭಾನುವಾರ(ಅ.31) ಕಂಠೀರವ ಸ್ಟುಡಿಯೋ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪುನೀತ್ ಸಾವಿನ ಸುದ್ದಿ ಕೇಳಿ ಒಡೆದು ಹೋಯ್ತು ಅಭಿಮಾನಿಯ ಹೃದಯ

ಕಂಠೀರವ ಸ್ಡುಡಿಯೋ ಆವರಣದಲ್ಲಿರುವ ಡಾ ರಾಜ್ ಕುಮಾರ್ ಸಮಾಧಿ ಸಮೀಪ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಸೂಚಿಸಿದ್ದು, ನಾಳೆ (ಅ.30) ಇಡೀ ದಿನ ಕಂಠೀರವ ಸ್ಟುಡಿಯೋದಲ್ಲಿ (Kanteerava Studio)ಸಾರ್ವಜನಿಕರ ಅಂತಿಮ ದರ್ಶನ ಇರಲಿದೆ.

 ಇಂದು (ಅ.29) ಜಿಮ್ ಮಾಡುವಾಗ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ನಟ ಪುನೀತ್ ರಾಜಕುಮಾರ್​ರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಇದರಿಂದ ಕನ್ನಡ ಚಿತ್ರರಂಗ, ಕನ್ನಡ ನಾಡು ಅಪಾರ ನಷ್ಟಕ್ಕೊಳಗಾಗಿದ್ದು, ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ತಂದೆಯ ಹಾದಿಯಲ್ಲೇ ಸಾಗಿರುವ ಪುನೀತ್, ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಪುನೀತ್ ನಿಧನಕ್ಕೆ ನಾಡು ಅಪಾರ ಶೋಕದಲ್ಲಿ ಮುಳುಗಿದ್ದು, ಸಂತಾಪ ಸೂಚಿಸುತ್ತಿದೆ.

ಪುನೀತ್ ನಿಧನ: ನಾಳೆ (ಅ.30) ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ

ಅಭಿಮಾನಿಗಳ ಸಾಗರ

ಪುನೀತ್ ರಾಜ್​ಕುಮಾರ್ ಅವರ ಹಠಾತ್​ ನಿಧನ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಲಕ್ಷಾಂತರ ಅಭಿಮಾನಿಗಳು(Fans) ಕಣ್ಣೀರು ಹಾಕುತ್ತಿದ್ದಾರೆ. ನಟ-ನಟಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಇನ್ನು ಕಂಠೀರವ ಸ್ಟುಡಿಯೋ(Kanteerava Studio)ದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದ್ದು, ಪುನೀತ್ ರಾಜ್‌ಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಅಭಿಮಾನಗಳ ಸಾಗರವೇ ಹರಿದುಬರುತ್ತಿದೆ. ಇದರಿಂದ ಸಾಕಷ್ಟು ನೂಕುನುಗ್ಗಲು ಉಂಟಾಗಿದ್ದು, ಅದನ್ನು ತಡೆಯಲು  ಪೊಲೀಸರು ಹರಸಾಹಸಪಡುತ್ತಿದ್ದಾರೆ.

 ಆಘಾತದಿಂದ ಪ್ರಾಣಬಿಟ್ಟ ಅಭಿಮಾನಿ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದ ಸುದ್ದಿ ಕೇಳಿ ಚಾಮರಾಜನಗರ ಜಿಲ್ಲೆಯಲ್ಲಿ ಅಭಿಮಾನಿಯೋರ್ವ ಸಾವನ್ನಪ್ಪಿದ್ದಾನೆ
ಹನೂರು ತಾಲೂಕಿನ ಮರೂರು ಗ್ರಾಮದ ಮುನಿಯಪ್ಪ (30)  ಎನ್ನುವಾತ ಹೃದಯಘಾತದಿಂದ ನಿಧನರಾಗಿದ್ದಾರೆ. ಇಂದು (ಅ.29) ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಪುನೀತ್ ರಾಜ್‍ಕುಮಾರ್ ನಿಧನದ ಸುದ್ದಿ ತಿಳಿದು ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾನೆ. ಮುನಿಯಪ್ಪ ಬಾಲ್ಯದಿಂದಲೂ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ. ಪುನೀತ್ ರಾಜ್ ಕುಮಾರ್ ಅವರ ಎಲ್ಲಾ ಚಿತ್ರಗಳನ್ನು ವೀಕ್ಷಿಸುತ್ತಿದ್ದನು.

ಖಾಸಗಿ ಶಾಲೆಗಳಿಗೆ ರಜೆ ಘೋಷಣೆ
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth rajkumar) ನಿಧನ ಹಿನ್ನೆಲೆಯಲ್ಲಿ ನಾಳೆ (ಅ.30)  ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಈ ಕುರಿತು ಖಾಸಗಿ ಶಾಲೆಗಳ (Private School) ಒಕ್ಕೂಟ ರೂಪ್ಸಾ (Rupsa) ಇಂದು (ಅ.29) ಪ್ರಕಟಣೆ ಹೊರಡಿಸಿದ್ದು, ಪುನೀತ್ ರಾಜ್‌ಕುಮಾರ್ ಅಗಲಿಕ ಹಿನ್ನೆಲೆಯಲ್ಲಿ ಶೋಕಾಚರಣೆ ನಿಮಿತ್ತ ಖಾಸಗಿ ಶಾಲೆಗಳಿಗೆ ನಾಳೆ (ಶನಿವಾರ) ರಜೆ ಘೋಷಿಸಲಾಗಿದೆ ಎಂದು ರುಪ್ಸಾ ಒಕ್ಕೂಟ ಅಧ್ಯಕ್ಷ ‌ಲೋಕೇಶ್ ತಾಳಿಕಟ್ಟೆ ಮಾಹಿತಿ ನೀಡಿದ್ದಾರೆ. 

ಎಂಬಿಎ ಪರೀಕ್ಷೆಗೆ ಮುಂದೂಡಿಕೆ
ಇನ್ನು ನಾಳೆ (ಅ.30) ನಡೆಯಬೇಕಿದ್ದ ಬೆಂಗಳೂರು ಸಿಟಿ ವಿಶ್ವವಿದ್ಯಾಲದ ಎಂಬಿಎ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ.  ಪರೀಕ್ಷೆ ‌ಮುಂದೂಡಿಕೆ ಕುರಿತು ಬೆಂಗಳೂರು ಸಿಟಿ ವಿಶ್ವವಿದ್ಯಾಲಯ ಸುತ್ತೋಲೆ ಹೊರಡಿಸಿದೆ. ಎಂಬಿಎ ಅಂತಿಮ ವರ್ಷದ ಪರೀಕ್ಷೆಗಳನ್ನು ಮಂಗಳವಾರಕ್ಕೆ ಮುಂಡೂಡಲಾಗಿದೆ ಎಂದು ಬೆಂಗಳೂರು ಸಿಟಿ ವಿವಿ ಕುಲಪತಿ ಲಿಂಗರಾಜು ತಿಳಿಸಿದ್ದಾರೆ.  

ಬೆಂಗ್ಳೂರಲ್ಲಿ ಮದ್ಯ ಮಾರಾಟ ನಿಷೇಧ

ಬೆಂಗಳೂರು ನಗರದಲ್ಲಿ ತಕ್ಷಣವೇ ಜಾರಿಗೆ ಬರುವಂತೆ  ಅ.31ರ ಮಧ್ಯರಾತ್ರಿ ವರೆಗೆ  ಸಂಪೂರ್ಣವಾಗಿ ಮದ್ಯ ಮಾರಾಟ (Liquor Sale Ban) ನಿ‍ಷೇಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (Kamal Pant) ಆದೇಶ ಹೊರಡಿಸಿದ್ದು,  ತತಕ್ಷಣವೇ ಜಾರಿಗೆ ಬರಲಿದೆ.

ನಗರಾದ್ಯಂತ ಫುಲ್ ಟೈಟ್ ಸೆಕ್ಯೂರಿಟಿ
ನಗರಾದ್ಯಂತ 6 ಸಾವಿರ ಪೊಲೀಸರು, ಕೆಎಸ್ಆರ್‌ಪಿ KSRP ಪ್ಲಟೂನ್ ನಿಯೋಜನೆ ಮಾಡಲಾಗಿದ್ದು,  ಭಾನುವಾರ ಮಧ್ಯ ರಾತ್ರಿ ವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಎಷ್ಟೇ ಜನ ಬಂದ್ರೂ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುತ್ತೆ. ಈ ಸಂದರ್ಭದಲ್ಲಿ ಕುಚೇಷ್ಟೇ ಮಾಡಿದ್ರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕಮಿಷನರ್ ಕಮಲ್ ಪಂಥ್ ಎಚ್ಚರಿಕೆ ಕೊಟ್ಟಿದ್ದಾರೆ.

ಪುನೀತ್ ಅವರ ನಿವಾಸದ ಬಳಿ ಯಾರೂ ತೆರಳದಂತೆ ಸರಕಾರ ಮನವಿ ಮಾಡಿದ್ದು, ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗ ಬೇಡಿ. ಶಾಂತ ರೀತಿಯಲ್ಲಿ ಇರಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದಾರೆ.
 

click me!