ಆರ್ಜೆ ಮೆಹ್ವಾಶ್ ತಮ್ಮ ಹೊಸ ಪಾಡ್ಕಾಸ್ಟ್ನಲ್ಲಿ ಯಜುವೇಂದ್ರ ಚಹಾಲ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಹಾಗೂ ತಮ್ಮ, ಮುರಿದುಹೋದ ನಿಶ್ಚಿತಾರ್ಥದ ಬಗ್ಗೆ ಮಾತನಾಡಿದ್ದಾರೆ.
ಮುಂಬೈ: ಧನಶ್ರೀ ವರ್ಮಾ ಜೊತೆಗಿನ ವಿಚ್ಛೇದನದ ನಂತರ ಟೀಮ್ ಇಂಡಿಯಾ ಕ್ರಿಕೆಟರ್ ಯಜುವೇಂದ್ರ ಚಹಾಲ್ ಆರ್ಜೆ ಮೆಹ್ವಾಶ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪೊಂದು ಸಾಕಷ್ಟು ಸುದ್ದಿಯಲ್ಲಿದೆ. ಹೀಗಿರುವಾಗ ಆರ್ಜೆ ಮೆಹ್ವಾಶ್ ಸಂಬಂಧದ ಬಗ್ಗೆ ತಮ್ಮ ಚಿಂತನೆಯನ್ನು ಹೊಸ ಪಾಡ್ಕಾಸ್ಟೊಂದರಲ್ಲಿ ತೆರೆದಿಟ್ಟಿದ್ದಾರೆ. ದಿ ಗುಡ್ ಗರ್ಲ್ಸ್ ಶೋ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ ಆರ್ಜೆ ಮೆಹ್ವಾಶ್ ತಮ್ಮ ಸಂಬಂಧದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡಿದ್ದು, ಅವರ ಮಾತುಗಳು ವೈರಲ್ ಆಗಿವೆ. ತಾನು ಪ್ರಸ್ತುತ ಒಂಟಿಯಾಗಿದ್ದೇನೆ. ಆದರೆ ಖುಷಿಯಾಗಿದ್ದೇನೆ. ನಾನು ಮದುವೆಯಾಗಲು ಮಾತ್ರ ಡೇಟಿಂಗ್ ಮಾಡುತ್ತೇನೆ. ಮತ್ತು ಪ್ರಸ್ತುತ, ಮದುವೆಯ ಪರಿಕಲ್ಪನೆಯನ್ನು ನನಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಾದ್ದರಿಂದ ನಾನು ಡೇಟಿಂಗ್ ಮಾಡುತ್ತಿಲ್ಲ ಎಂದು ಆರ್ಜೆ ಮೆಹ್ವಾಶ್ ಹೇಳಿದ್ದಾರೆ.
ಮುಝೆ ಶಾದಿ ಕಾ ಕಾನ್ಸೆಪ್ಟ್ ಸಮಾಜ್ ನಹಿ ಆ ರಹಾ ಹೈ ಆಜ್ಕಲ್ ಅಂದರೆ ನನಗೆ ಇತ್ತೀಚೆಗೆ ಮದುವೆ ಎಂಬ ಕಾನ್ಸೆಪ್ಟ್ ಬಗ್ಗೆ ಅರ್ಥವಾಗುತ್ತಿಲ್ಲ, ಮದುವೆಯಾಗುವುದಕ್ಕಾಗಿ ಡೇಟ್ ಮಾಡಲು ಬಯಸುವವರಲ್ಲಿ ನಾನು ಒಬ್ಬಳು. ನಾನು ಯಾವುದೇ ಕ್ಯಾಶುವಲ್ ಎನಿಸಿದ ಡೇಟ್ಗಳಿಗೆ ಹೋಗುವುದಿಲ್ಲ, ನಾನು ಮದುವೆಯಾಗಲು ಬಯಸುವವರನ್ನು ಮಾತ್ರ ಡೇಟ್ ಮಾಡಬೇಕು ಎಂಬುದು ನನ್ನ ಭಾವನೆ ಆದರೆ ಈಗ ಮದುವೆಯ ಪರಿಕಲ್ಪನೆಯ ಬಗ್ಗೆ ಅರ್ಥ ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದೇನೆ ಹೀಗಾಗಿ ನಾನು ಯಾರನ್ನೂ ಡೇಟಿಂಗ್ ಕೂಡ ಮಾಡುತ್ತಿಲ್ಲ ಎಂದು ಆರ್ಜೆ ಮೆಹ್ವಾಶ್ ಹೇಳಿದ್ದಾರೆ. ಇದೇ ವೇಳೆ ಕ್ರಿಕೆಟಿಗ ಚಾಹಲ್ ಜೊತೆ ತಮ್ಮ ಹೆಸರು ಕೇಳಿ ಬರುತ್ತಿರುವ ಬಗ್ಗೆ, ಟ್ರೋಲ್ ಆಗುತ್ತಿರುವ ಬಗ್ಗೆ ಸ್ಪಷ್ಟವಾಗಿ ಚಾಹಲ್ ಹೆಸರು ಹೇಳದೆಯೇ ಆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟ್ರೋಲಿಂಗ್ ಮತ್ತು ಲಿಂಕ್-ಅಪ್ ವದಂತಿಗಳು ಇನ್ನು ಮುಂದೆ ತನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಅದನ್ನು ನಿಭಾಯಿಸಲು ನಾನು ಕಲಿತಿದ್ದೇನೆ ಎಂದು ಆರ್ ಜೆ ಮೆಹ್ವಾಶ್ ಹೇಳಿದ್ದಾರೆ.
ಈ ಪಾಡ್ಕಾಸ್ಟ್ನಲ್ಲಿ ಮುರಿದು ಹೋದ ತಮ್ಮ ವಿವಾಹ ನಿಶ್ಚಿತಾರ್ಥದ ಬಗ್ಗೆಯೂ ಮೆಹ್ವಾಶ್ ಮಾತನಾಡಿದ್ದು, ತನ್ನೊಂದಿಗೆ ಮದುವೆ ನಿಶ್ಚಯಗೊಂಡಿದ್ದ ವರ ನನಗೆ ಮೋಸ ಮಾಡಿದ, ಇದು ತನ್ನ ಮೇಲೆ ದೈಹಿಕ ಹಾಗೂ ಮಾನಸಿಕವಾದ ಪರಿಣಾಮ ಬೀರಿತು. ನಾನು ಅರ್ಧದಷ್ಟು ಸಮಯ ಆಸ್ಪತ್ರೆಯಲ್ಲಿರುತ್ತಿದ್ದೆ. ನಾನು ತುಂಬಾ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದೆ. ನನಗೆ ಪ್ಯಾನಿಕ್ ಅಟ್ಯಾಕ್ ಆಗುತ್ತಿತ್ತು. ಅವನು ನನ್ನ ಗೆಳೆಯ ಮಾತ್ರವಲ್ಲ, ಅವನು ನನ್ನ ವಿವಾಹವಾಗಬೇಕಿದ್ದ ವರನೂ ಆಗಿದ್ದ. ಮತ್ತು ನಾನು ನನ್ನ ಹೆತ್ತವರಿಗೆ ಸಹ ಈ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಏಕೆಂದರೆ ನಾನು ಅವನನ್ನು ಪ್ರೀತಿಸುತ್ತಿದ್ದೆ ಮತ್ತು ನಮ್ಮ ನಿಶ್ಚಿತಾರ್ಥ ಮಾಡುವಂತೆ ಪೋಷಕರಿಗೆ ಒತ್ತಾಯಿಸಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
ನಾನು ಅವನನ್ನು ಎರಡು ಬಾರಿ ಕ್ಷಮಿಸಿದ್ದೆ, ಆದರೆ ಅವನು ಮೂರನೇ ಬಾರಿಯೂ ನನಗೆ ಮೋಸ ಮಾಡಿದ ನಂತರ ನಾನು ಕೊನೆಗೆ ಈ ಸಂಬಂಧದಿಂದ ಹೊರಬರಲು ನಿರ್ಧರಿಸಿದೆ. ನನ್ನ ನಿಶ್ಚಿತಾರ್ಥವನ್ನು ರದ್ದುಗೊಳಿಸಿದರೆ ಜನರು ಏನು ಯೋಚಿಸುತ್ತಾರೆ ಎಂದು ನಾನು ಹೆದರುತ್ತಿದ್ದೆ, ಏಕೆಂದರೆ ಸಮಾಜವು ಯಾವಾಗಲೂ ಹುಡುಗಿಯನ್ನು ದೂಷಿಸುತ್ತದೆ. ಯಾವುದೇ ಬ್ರೇಕಪ್, ಯಾವುದೇ ವಿಚ್ಛೇದನ, ಯಾವುದೇ ಆಗಲಿ ಹುಡುಗಿಯನ್ನೇ ಸಮಾಜ ದೂಷಿಸುತ್ತದೆ ಎಂದು ಅವರು ಹೇಳಿದರು.
ಈ ಬ್ರೇಕಪ್ ತನ್ನ ಸ್ವಾಭಿಮಾನದ ಮೇಲೆ ದೊಡ್ಡ ಪರಿಣಾಮ ಬೀರಿತ್ತು. ಒಂದು ಸಮಯದಲ್ಲಂತೂ ತಾನೊಬ್ಬಳು ಕೆಟ್ಟ ಕಿಸ್ಸರ್ ಇದೇ ಕಾರಣಕ್ಕೆ ನನ್ನನ್ನು ಆತ ಬಿಟ್ಟು ಹೋದ ಎಂದೂ ನಾನು ಯೋಚಿಸಿದ್ದೆ. ಬ್ರೇಕಪ್ ನಮ್ಮ ಆತ್ಮವಿಶ್ವಾಸದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಬ್ರೇಕಪ್ ನಂತರ ನೀವು ನಿಮ್ಮ ಬಗ್ಗೆ ಅನುಮಾನಪಡಲು ಆರಂಭಿಸುತ್ತೀರಿ. ನೀವು ಅವನಿಗೆ ಸಾಕಾಗಲಿಲ್ಲ, ಮತ್ತು ಬಹುಶಃ ಅವನ ಪ್ರಸ್ತುತ ಗೆಳತಿ ನಿಮಗಿಂತ ಉತ್ತಮಳಾಗಿರಬಹುದು, ಅದಕ್ಕಾಗಿಯೇ ಅವನು ನಿಮ್ಮನ್ನು ಬಿಟ್ಟು ಆಕೆಯ ಬಳಿಗೆ ಹೋಗಿರಬಹುದು ಎಂದು ಯೋಚಿಸುತ್ತೀರಿ. ನೀವು ಕನ್ನಡಿಯಲ್ಲಿ ನಿಮ್ಮ ಮುಖವನ್ನು ಸಾವಿರ ಬಾರಿ ಪರಿಶೀಲಿಸುತ್ತಿರುತ್ತೀರಿ, ನೀವು ನಿಮ್ಮನ್ನು ಅನುಮಾನಿಸುತ್ತಿರುತ್ತೀರಿ ಎಂದು ಬ್ರೇಕಪ್ ನಂತರ ಮನಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಮೆಹ್ವಾಶ್ ಮನಬಿಚ್ಚಿ ಮಾತನಾಡಿದ್ದಾರೆ.
ಆದರೆ ಸ್ವಲ್ಪ ಸಮಯದ ನಂತರ ನಿಮಗೆ ಅರಿವಾಗುತ್ತದೆ ನಿಮಗೆ ಮೋಸ ಮಾಡಿದವರು ಬೇರೆಯವರಿಗೂ ಮೋಸ ಮಾಡಬಹುದು ಎಂಬ ಅರಿವು ನಿಮಗಾಗುತ್ತದೆ. ಅಂಜೆಲೀನಾ ಜೋಲಿಯಂತಹ ಜಗದ್ವಿಖ್ಯಾತ ನಟಿಗೆ ಮೋಸ ಆಗುತ್ತದೆ ಎಂದರೆ ನಾನು ಯಾವ ಲೆಕ್ಕ ಎಂದು ಮೆಹ್ವಾಶ್ ಹೇಳಿದ್ದಾರೆ. ಯಜುವೇಂದ್ರ ಹಾಗೂ ಚಹಾಲ್ ಧನಶ್ರೀ ವರ್ಮಾ ಅವರ ವಿವಾಹವು ತೊಂದರೆಯಲ್ಲಿದೆ ಎಂಬ ವರದಿಗಳು ವೈರಲ್ ಆದ ಸಮಯದಲ್ಲಿಯೇ ಚಾಹಲ್ ಮತ್ತು ಮೆಹ್ವಾಶ್ ಹೋಟೆಲ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ, ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಸಾಕಷ್ಟು ಹರಿದಾಡಿದ್ದವು. ಆದರೆ ಈ ವರದಿಗಳ ವಿರುದ್ಧ ಮೆಹ್ವಾಶ್ ಕಿಡಿಕಾರಿದ್ದರು, ಅಲ್ಲದೇ ತಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದರು. ಆದರೆ ಇದಾದ ನಂತರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಚಾಹಲ್ ಮತ್ತು ಮಹ್ವಾಶ್ ಮತ್ತೆ ಒಟ್ಟಿಗೆ ಭಾಗವಹಿಸಿದಾಗ ಮತ್ತೊಮ್ಮೆ ಗಮನ ಸೆಳೆದರು.
ಮಾರ್ಚ್ 20 ರಂದು ಮುಂಬೈನ ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ಕ್ರಿಕೆಟಿಗ ಧನಶ್ರೀ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆಯುವ ಕೆಲವೇ ಗಂಟೆಗಳ ಮೊದಲು ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಚಹಾಲ್ ಜೊತೆ ಕಾಣಿಸಿಕೊಂಡ ಮೆಹ್ವಾಶ್ ವಿರುದ್ಧ ನೆಟ್ಟಿಗರು ಕೂಡ ತೀವ್ರ ಕಿಡಿಕಾರಿದ್ದರು. ಬೇರೆಯವರ ಸಂಸಾರದಲ್ಲಿ ತಲೆ ಹಾಕಿದರು ಎಂಬ ಆರೋಪವನ್ನು ಅವರು ಎದುರಿಸಬೇಕಾಯ್ತು.