Viral Wedding Card: ಪರಿಸರಕ್ಕೆ ಹಾನಿಯಿಲ್ಲ, ಕೋವಿಡ್ ರೂಲ್ಸ್ ಫಾಲೋ ಮಾಡಬೇಕು, ಊಟದ ಮೆನುವಿದು

Suvarna News   | Asianet News
Published : Nov 29, 2021, 05:19 PM ISTUpdated : Nov 29, 2021, 06:32 PM IST
Viral Wedding Card: ಪರಿಸರಕ್ಕೆ ಹಾನಿಯಿಲ್ಲ, ಕೋವಿಡ್ ರೂಲ್ಸ್ ಫಾಲೋ ಮಾಡಬೇಕು, ಊಟದ ಮೆನುವಿದು

ಸಾರಾಂಶ

ಮಂಡ್ಯದ ನಾಗೂರಿನಲ್ಲಿ ಇಂದು ನಡೆದ ವಿವಾಹವೊಂದು ವಿಶೇಷ ಕಾರಣಗಳಿಗಾಗಿ ಸುದ್ದಿಯಾಗಿದೆ. ಈ ವಿವಾಹ ಮಹೋತ್ಸವದಲ್ಲಿ ಎಷ್ಟೆಲ್ಲ ವಿಶೇಷಗಳಿತ್ತು ಎಂಬುದನ್ನು ಆಹ್ವಾನ ಪತ್ರಿಕೆಯೇ ಹೇಳುತ್ತದೆ. 

ಇದೊಂದು ವಿಶಿಷ್ಠ ವಿವಾಹ ಆಮಂತ್ರಣ ಪತ್ರಿಕೆ(wedding invitation card). ವಿವಾಹ ಸಮಾರಂಭದಲ್ಲಿ ಅಸ್ಥೆಯಿಂದ ಕೈಗೊಳ್ಳಲಾದ ಬಹಳಷ್ಟು ವಿಶೇಷಗಳನ್ನು ಸಾರುವ ಈ ವಿವಾಹ ಪತ್ರಿಕೆ ಸಧ್ಯ ಸಾಮಾಜಿಕ ಜಾಲತಾಣ(social media)ಗಳಲ್ಲಿ ವೈರಲ್ ಆಗಿದೆ. 
ನವಂಬರ್ 29ರಂದು ನಾಗೂರಿ(Nagur)ನಲ್ಲಿ ನಡೆದ ಮಂಡ್ಯ(Mandya) ಜಿಲ್ಲೆಯ ನವ ಜೋಡಿ ಶಿಶಿರ್ ಕುಮಾರ್ ಹಾಗೂ ಕೃತಿಯ ವಿವಾಹ ಆಹ್ವಾನ ಪತ್ರಿಕೆ 'ಸಪ್ತಪದಿ'ಯನ್ನು ನೋಡಿದರೇ ಈ ಜೋಡಿಯ ವ್ಯಕ್ತಿತ್ವದ ಪರಿಚಯವಾಗುತ್ತದೆ. ಈ ಪತ್ರಿಕೆಯಲ್ಲಿ ಏನೆಲ್ಲ ವಿಶೇಷತೆಗಳಿವೆ ಗೊತ್ತಾ?

ಕನ್ನಡಪ್ರೇಮ
ಇಡೀ ಪತ್ರಿಕೆಯನ್ನು ಅಚ್ಚ ಕನ್ನಡ(Kannada)ದಲ್ಲಿ ಮುದ್ರಿಸಲಾಗಿದ್ದು, ಮಾಸ್ಕ್‌(Mask)ಗೆ ಕೂಡಾ 'ಬಾಯಿ ಕುಕ್ಕಿ' ಎಂಬ ಹೊಸ ಕನ್ನಡ ಪದ ನೀಡಲಾಗಿದೆ. ಅದಲ್ಲದೆ ಜಂಗಮವಾಣಿ, ಕರ್ಣ ಪಿಶಾಚಿ, ಋತುಪರ್ಣನ ಕರವಸ್ತ್ರ, ಬುತ್ತಿ, ದಂತಪಂಕ್ತಿ ಮುಂತಾದ ಅಪರೂಪದ ಆಡುಬಳಕೆಯ ಕನ್ನಡವನ್ನು ಕೂಡಾ ಬಳಸಲಾಗಿದೆ. 

ಹಾಸ್ಯಪ್ರಜ್ಞೆ(sense of humor)
ಈ ಕನ್ನಡಪ್ರೇಮದೊಂದಿಗೆ ವಧುವರರ ಹಾಸ್ಯಪ್ರೇಮವನ್ನು ಕೂಡಾ ಮೆಚ್ಚಲೇಬೇಕು. ತಾವು ಹೇಳುವ ಮಾತುಗಳಲ್ಲೇ ಹಾಸ್ಯವನ್ನು ಹಾಸುಹೊಕ್ಕಾಗಿಸಲಾಗಿರುವುದು ಓದುಗರಲ್ಲಿ ನಗು ತರಿಸುತ್ತದೆ. ಫೋನ್‌ಗೆ ಕರ್ಣ ಪಿಶಾಚಿ ಎಂದು ಬಳಸಿರುವುದು, ದಂತಪಂಕ್ತಿ ಸರಿ ಇಲ್ಲದವರಿಗೆ ಕವಳವನ್ನು ಗುದ್ದಿ ಕೊಡಲಾಗುವುದು ಎಂದು ವಿಶೇಷವಾಗಿ ನಮೂದಿಸಿರುವುದರ ಹಿಂದಿನ ದೂರಾಲೋಚನೆ(?!), ಬೆಳಗಿನ ಬಿಗು ಉಪಹಾರ, ತಿಗಣೆರಹಿತ ಚಾಪೆ ನೀಡುತ್ತೇವೆ ಮುಂತಾಗಿ ಸೂಚನೆ ನೀಡಿರುವುದು ಕೂಡಾ ಲಘುಹಾಸ್ಯವಾಗಿ ಕಚಗುಳಿ ಇಡುತ್ತದೆ. 
ಇನ್ನು ಭೋಜನದ ಮೊದಲು ಹಾಗೂ ನಂತರ ತೂಕ ನೋಡಿಕೊಳ್ಳುವ ವ್ಯವಸ್ಥೆ ಇದೆ ಎಂದು ನಮೂದಿಸಿರುವುದು ಹಾಸ್ಯವೋ, ನಿಜವೋ ಎಂದು ಈ ಮದುವೆಗೆ ಹೋಗಿ ಬಂದವರೇ ಹೇಳಬೇಕು. 

Short couple get Married: ವೈರಲ್ ಆಗ್ತಿದೆ ಶಾರ್ಟ್ ಜೋಡಿಯ ಮದ್ವೆ ಫೋಟೋ

ಮೆನು(Menu)
ಇನ್ನು ಊಟದಲ್ಲಿ ಏನೇನಿರುತ್ತದೆ, ಮಧ್ಯೆ ಮಧ್ಯೆ ಕುಡಿಯಲು ಏನೆಲ್ಲ ಇರುತ್ತದೆ, ಊಟದ ಪಂಕ್ತಿಯಲ್ಲಿ ಏನು ನೀಡಲಾಗುತ್ತದೆ, ಊಟದ ನಂತರ ಏನೆಲ್ಲ ಉಪಚಾರವಿದೆ, ಎಲ್ಲ ಮುಗಿದ ನಂತರ ಶುರುವಾಗಲಿರುವ ಮನರಂಜನಾ ಕಾರ್ಯಕ್ರಮಗಳನ್ನು ಆಹ್ವಾನ ಪತ್ರಿಕೆಯಲ್ಲಿ ವಿವರವಾಗಿ ನೀಡಲಾಗಿದೆ. 
ಬೆಳಗಿನ ತಿಂಡಿ(breakfast) 8ರಿಂದ ಖಾಲಿಯಾಗುವ ತನಕ ಎಂದು ಹೇಳಿರುವ ಜೊತೆಗೆ ಪಾಂಡವಪುರ ಕಬ್ಬಿನಹಾಲು, ಪತಂಜಲಿ ಮಜ್ಜಿಗೆ, ಕಾಫಿ ಟೀಯನ್ನು ನಿರಂತರ ಸಪ್ಲೈ ಮಾಡಲಾಗುವುದು ಎಂದು ತಿಳಿಸಲಾಗಿದೆ. ಇನ್ನು ಊಟದ ಮೆನು  ಕೂಡಾ ಬಹಳ ವಿಶಿಷ್ಠವಾಗಿದೆ. ಅದರಂತೆ 37 ಬಗೆಯ ವಿವಿಧ ಭಕ್ಷ್ಯಗಳಿದ್ದು, ಯಾವ ಬಾಳೆಎಲೆ ಬಳಸಲಾಗುತ್ತದೆ, ಯಾವ ಉಪ್ಪು ಬಳಸಲಾಗುತ್ತದೆ, ಯಾವೆಲ್ಲ ಊರಿನ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ ಮುಂತಾಗಿ ವಿವರ ನೀಡಲಾಗಿದೆ. 

ಚೆನ್ನೈ ಕೋಡಿ ಬಾಳೆ ಎಲೆ, ಗೋಕರ್ಣ ಉಪ್ಪು, ಸುವರ್ಣಗೆಡ್ಡೆ ಪಲ್ಯ, ಸಣ್ಣಕ್ಕಿ ಅನ್ನ, ನಂದನಿಗೃತ, ಕೋಲಾರ್ ಟೊಮ್ಯಾಟೋ ಸಾರ್, ಶಿರ್ಸಿ ಅನಾನಸ್ ಮುದ್ದುಳಿ, ನಾಳಿಕೇರ ಹಾಲು, ನಾಗೂರು ಸೌತೆಕಾಯಿ ಹುಳಿ, ವಾದಿರಾಜ ಫಲದ ಬಿಳಿಹುಳಿ, ಪಂಜಾಬ್ ಗೋಧಿ ಹಲ್ವಾ, ದೇವರನಾಡಿನ ಪೂರ್ಣ ಚಂದ್ರ ತುಪ್ಪ, ತ್ರಿಲೋಕ ಸುಂದರಿ, ಕರ್ಣಕುಂಡಲ, ಉದ್ದಿನ ಹಿಟ್ಟಿನ ಗೊಜ್ಜು, ಸುನಂದ ಸಂಡಿಗೆ ಮೆಣಸು, ಧಾರವಾಡ ಎಮ್ಮೆ ಗಟ್ಟಿ ಮೌಸರು, ಖಡ್ಗರಾವಣ, ಹರ್ಷಿತ್ ಹಣ್ಣಿನ ಪಾಯಸ, ನಂದಿನಿ ಮೊಸರು ಇತ್ಯಾದಿ ಆಹಾರ ಪದಾರ್ಥಗಳಿರುತ್ತವೆ ಎನ್ನಲಾಗಿದೆ. 

Smuggling Connection: ಲೇಡಿ ಪೋಲೀಸ್ ಮದುವೆಗೂ 10 ದಿನ ಮುನ್ನ ಸಸ್ಪೆಂಡ್

ಇಷ್ಟೇ ಅಲ್ಲದೆ, ಊಟದ ಪಂಕ್ತಿಯಲ್ಲಿ ಬಟ್ಟೆಯ ಕೈ ಚೀಲ, ಮಾಸ್ಕ್, ಋತುಪರ್ಣನ ಕರವಸ್ತ್ರ, ಪಯಣದ ಬುತ್ತಿ ನೀಡಲಾಗುವುದು. ಜೊತೆಗೆ, ಅದೃಷ್ಟಶಾಲಿ ಆಮಂತ್ರಿತರ ಆಯ್ಕೆ ಹಾಗೂ ಸನ್ಮಾನ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಬಟ್ಟೆಯ ಕೈಚೀಲ ಕೊಡುವ ಪರಿಸರ ಸ್ನೇಹಿ ನಿರ್ಧಾರ ಮೆಚ್ಚುವಂಥದ್ದು. ಊಟವಾದ ಮೇಲೆ ಕವಳ, ನಶ್ಯ, ಕಾಫಿ, ಟೀ, ಪತಂಜಲಿ ಜೀರ್ಣಾಮೃತದ ವ್ಯವಸ್ಥೆಯನ್ನು ಮಾಡಿರುವುದನ್ನೂ ತಿಳಿಸಲಾಗಿದೆ. ಅಷ್ಟೇ ಅಲ್ಲ, ಮಲಗುವವರಿಗೆ ತಲೆದಿಂಬು ಚಾಪೆ ಕೂಡಾ ನೀಡಲಾಗುವುದು ಎಂದು ತಿಳಿಸಿದ್ದಾರೆ. 

ಮನರಂಜನೆ
ಇವೆಲ್ಲ ತಿನ್ನುವುದು, ಮಲಗುವುದರ ಕುರಿತಾಯಿತು. ಇದಲ್ಲದೆ ಮನರಂಜನೆ ಹಾಗೂ ಮನೋವಿಕಾಸಕ್ಕಾಗಿ ಮತ್ತೊಂದಷ್ಟು ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಅವೆಂದರೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ, ಓದುಗರ ಚಾವಡಿಯಲ್ಲಿ ಎಲ್ಲ ದಿನಪತ್ರಿಕೆಗಳು, ಮಾತೇ ಮುತ್ತು, ಚಿನಕುರಳಿ ಪ್ರಪಂಚ, ದಿಬ್ಬಣದಲ್ಲಿ ಯಕ್ಷಗಾನದ ಸ್ತ್ರೀ ವೇಷ ಹಾಗೂ ಪುರುಷ ವೇಷ, ಗೊಂಬೆ ಕುಣಿತವನ್ನೂ ಆಯೋಜಿಲಾಗಿರುವುದರ ಬಗ್ಗೆ ಪತ್ರಿಕೆ ಮಾಹಿತಿ ಒದಗಿಸಿದೆ. 

ಕೋವಿಡ್ ಜಾಗೃತಿ(Covid awareness)
ವಿವಾಹಕ್ಕೆ ಬರುವವರು ಚುನಾವಣಾ ಗುರುತಿನ ಪತ್ರ, ಆಧಾರ್ ಕಾರ್ಡ್, ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಆರೋಗ್ಯ ದೃಢೀಕರಣ ಪತ್ರ ತರುವಂತೆ ಕೋರಿದ್ದಲ್ಲದೆ, ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ , ಮಾಸ್ಕ್ ಧರಿಸಿ, ವೈದ್ಯರಿಗೆ ಗೌರವ ಸಲ್ಲಿಸಿ ಸಹಕರಿಸಿ ಎಂದು ಮನವಿ ಮಾಡಲಾಗಿದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು