
ಪತ್ನಿಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿಯೊಬ್ಬನಿಗೆ ದೊಡ್ಡ ನಿರಾಳತೆ ಸಿಕ್ಕಿದೆ. ಹೌದು ಪತ್ನಿಯ ಕೊಲೆ ಮಾಡಲಾಗಿದೆ ಎಂದು ಗಂಡನನ್ನು ಬಂಧಿಸಿದ ಪೊಲೀಸರು ಆತನನ್ನು ಜೈಲಿಗೆ ಕಳುಹಿಸಿದ್ದರು. ಗಂಡ ಕಳೆದೊಂದು ತಿಂಗಳಿನಿಂದ ಮಾಡದ ಕೊಲೆಗಾಗಿ ಜೈಲಿನಲ್ಲಿದ್ದ. ಆದರೆ ಇತ್ತ ಕೊಲೆಯಾಗಿದ್ದಾಳೆ ಎನ್ನಲಾದ ಆತನ ಪತ್ನಿ ತನ್ನ ಪ್ರಿಯಕರನೊಂದಿಗೆ ಆರಾಮವಾಗಿ ವಾಸ ಮಾಡುತ್ತಿದ್ದಳು. ಈ ವಿಚಾರ ಗೊತ್ತಾಗುತ್ತಿದ್ದಂತೆ ಪೊಲಿಸರು ಆತನನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಾರೆ. ಉತ್ತರ ಪ್ರದೇಶದ ಕೌಸಂಬಿಯಲ್ಲಿ ಈ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಕೌಸಂಭಿ ಎಸ್ಪಿ ರಾಜೇಶ್ ಕುಮಾರ್, ಹೀಗೆ ಗಂಡನನ್ನು ಕೊಲೆಯ ನೆಪದಲ್ಲಿ ಜೈಲಿಗಟ್ಟಿ ಇತ್ತ ಪ್ರಿಯಕರನೊಂದಿಗೆ ವಾಸಿಸುತ್ತಿದ್ದ ಮಹಿಳೆಯನ್ನು ಅಂಕಿತಾ ಎಂದು ಗುರುತಿಸಲಾಗಿದೆ. ಅಂಕಿತಾ ಗುರುಗ್ರಾಮ್ನ ಮನ್ಸೇರ್ನಲ್ಲಿ ತನ್ನ ಸಂಬಂಧಿ ರಾಮು ಅಲಿಯಾಸ್ ಸಂಕಲ್ಪ ಮಿಶ್ರಾ ಎಂಬಾತನ ಜೊತೆ ವಾಸ ಮಾಡುತ್ತಿದ್ದಳು. ಆಕೆಯನ್ನು ಈಗ ಹರ್ಯಾಣದಲ್ಲಿ ಪತ್ತೆ ಮಾಡಿ ಕರೆತರಲಾಗಿದೆ. ಪೊಲೀಸರು ಆಕೆಯ ಪತಿಯನ್ನು ಬಿಡುಗಡೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಕೆಯ ತಂದೆಯೂ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
2016ರಲ್ಲಿ ಮದುವೆಯಾಗಿದ್ದ ಅಂಕಿತಾ ಹೆಚ್ಚಿನ ಸಮಯವನ್ನು ತಾಯಿ ಮನೆಯಲ್ಲೇ ಕಳೆಯುತ್ತಿದ್ದಳು. ಕೌಸಂಬಿಯ ಮಹೇಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ವಾರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಲ್ವಾರ ಗ್ರಾಮದ ನಿವಾಸಿ ಯೋಗೇಂದ್ರ ತಿವಾರಿ ಅವರು ಮಾತನಾಡಿ ತಮ್ಮ ಮಗ ರಾಜು ತಿವಾರಿ ಜೊತೆ 2016ರಲ್ಲಿ ಅಂಕಿತಾ ಮದುವೆ ನಡೆದಿತ್ತು ಅಂಕಿತಾ ಸದರ್ ಕೊತ್ವಾಲಿ ಪ್ರದೇಶದ ತೆವಾನ್ ಗ್ರಾಮದ ನಿವಾಸಿ ಎಂದರು. ಮದುವೆಯಾದಾಗಿನಿಂದಲೂ ಸೊಸೆಯ ನಡವಳಿಕೆ ವಿಭಿನ್ನವಾಗಿತ್ತು. ಅವಳು ತನ್ನ ಹೆಚ್ಚಿನ ಸಮಯವನ್ನು ತನ್ನ ಹೆತ್ತವರ ಮನೆಯಲ್ಲಿಯೇ ಕಳೆದಳು. 2024 ರಲ್ಲಿ, ಅಂಕಿತಾ ತನ್ನ ತಾಯಿಯ ಚಿಕ್ಕಪ್ಪನ ಮಗ ಫತೇಪುರ ನಿವಾಸಿಯಾದ ರಾಮು ಅಲಿಯಾಸ್ ಸಂಕಲ್ಪ ಮಿಶ್ರಾ ಎಂದೂ ಕರೆಯಲ್ಪಡುವವನ ಜೊತೆ ತಮಗೆ ತಿಳಿಸದೆ ದೆಹಲಿಗೆ ತೆರಳಿದ್ದಳು.
ಈ ವಿಷಯದ ಬಗ್ಗೆ ಸಂಬಂಧಿಕರಲ್ಲಿ ಚರ್ಚಿಸಿದಾಗ ಕುಟುಂಬದಲ್ಲಿ ಪಂಚಾಯಿತಿ ಮಾಡಲಾಯ್ತು. ಪಂಚಾಯಿತಿ ತೀರ್ಮಾನದ ನಂತರ ಅಂಕಿತಾ ಮತ್ತೆ ಮನೆಗೆ ಬಂದಿದ್ದಳು. ಅಲ್ಲದೇ ಸಂಕಲ್ಪ್ ಜೊತೆ ಮತ್ತೆ ಯಾವುದೇ ಸಂಬಂಧವನ್ನು ಹೊಂದುವುದಿಲ್ಲ ಎಂದು ಆಕೆ ಭರವಸೆ ನೀಡಿದ್ದಳು. ಆದರೆ ಆಕೆಯ ವರ್ತನೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಇರಲಿಲ್ಲ. ಆಕೆ ಮನೆಯಲ್ಲಿ ಜಗಳವಾಡುತ್ತಿದ್ದಳು ಹಾಗೂ ಯಾವಾಗಲೂ ಫೋನ್ನಲ್ಲೇ ಇರುತ್ತಿದ್ದಳು. ಆಕೆಯ ಈ ವಿಚಾರದ ಬಗ್ಗೆ ಪೋಷಕರಿಗೆ ತಿಳಿಸಿದಾಗ ಅವರು ಅಸಹಾಯಕೆ ವ್ಯಕ್ತಪಡಿಸಿದ್ದರು.
ನಂತರ ಈ ವರ್ಷದ ಜನವರಿಯಲ್ಲಿ ಆಕೆ ಯಾರಿಗೂ ತಿಳಿಸದೇ ಮನೆಯಿಂದ ಓಡಿ ಹೋದಳು. ಈ ಬಾರಿ, ಅವಳು ತನ್ನೊಂದಿಗೆ ಆಭರಣ ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದಳು. ಈ ಬಾರಿ ಆಕೆಯ ಪೋಷಕರ ಒಪ್ಪಿಗೆ ಇತ್ತು. ಇದಾದ ನಂತರ ಜನವರಿ 22ರಂದು ಮಗ ನಾಪತ್ತೆ ದೂರು ದಾಖಲಿಸಿದ್ದ. ಇದರ ನಡುವೆ ಅಂಕಿತಾ ಕುಟುಂಬದವರು ಒಂದು ಮಾಸ್ಟರ್ ಪ್ಲಾನ್ ಮಾಡಿದ್ದರು. ಇದಕ್ಕಿದ್ದಂತೆ ಆಕೆಯ ತಾಯಿಯ ಕಡೆಯವರು ಪಿತೂರಿ ನಡೆಸಿದ್ದರು. ಮಗಳು ಅಂಕಿತಾಳನ್ನು ಆಕೆಯ ಪತಿ ಮನೆಯವರು ಕೊಲೆ ಮಾಡಿ ಶವವನ್ನು ನಾಶ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಅಂಕಿತಾ ಪತಿ ರಾಜು ತಿವಾರಿ ಮಾವ ಯೋಗೇಂದ್ರ ತಿವಾರಿ, ಅತ್ತಿಗೆ ಹಾಗೂ ಮನೆಯಲ್ಲಿದ್ದ ಇತರ ಅತ್ತೆಯರ ವಿರುದ್ಧ ಅವರು ಪ್ರಕರಣ ದಾಖಲಿಸಿದ್ದರು.
ನಮ್ಮ ತಪ್ಪಿರಲಿಲ್ಲ, ಆದರೂ ಬಂಧನ ಭೀತಿಯಿಂದ ಮನೆಗೆ ಬೀಗ ಹಾಕಿ ಇಡೀ ಕುಟುಂಬದವರು ಓಡಿ ಹೋದೆವು. ಪೊಲೀಸರ ಒತ್ತಡದಿಂದಾಗಿ ರಾಜು ತಿವಾರಿ ಫೆಬ್ರವರಿ 27 ರಂದು ನ್ಯಾಯಾಲಯದಲ್ಲಿ ಶರಣಾಗಿದ್ದು, ಅಂದಿನಿಂದ ಜೈಲಿನಲ್ಲೇ ಕಳೆದಿದ್ದಾರೆ. ಈಗ, ನನ್ನ ಸೊಸೆ ತನ್ನ ಪ್ರಿಯಕರ ರಾಮು ಮಿಶ್ರಾ ಜೊತೆ ಹರಿಯಾಣದ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಒಂದು ತಿಂಗಳಿನಿಂದ, ನಮ್ಮ ಕುಟುಂಬವು ಇವರ ಸುಳ್ಳು ದೂರಿನ ಕಾರಣಕ್ಕೆ ಪರಾರಿಯಾಗಿತ್ತು, ನನ್ನ ಸೊಸೆ ಮತ್ತು ಆಕೆಯ ಪೋಷಕರು ಜೊತೆಯಾಗಿ ಸಂಚು ಹೂಡಿದ್ದರು ಎಂದು ಯೋಗೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಬಿಆರ್ಟಿಯ ಹಲವು ಕಡೆಗಳಲ್ಲಿ ಭಾರಿ ಬೆಂಕಿ: ಧಗಧಗನೇ ಹೊತ್ತಿ ಉರಿಯುತ್ತಿರುವ ಹುಲಿ ಸಂರಕ್ಷಿತ ಪ್ರದೇಶ
ಇತ್ತ ಸೊಸೆ ಅಂಕಿತಾ ಪ್ರಿಯಕರನೊಂದಿಗೆ ಸಿಕ್ಕ ನಂತರ ಮಾವ ಯೋಗೇಂದ್ರ ತಿವಾರಿ ಅವರು ಅಂಕಿತಾ ಅವರ ತಂದೆ ಶಾರದಾ ಪ್ರಸಾದ್ ಮಿಶ್ರಾ, ಅವರ ಸಹೋದರ ಗೋಪಾಲ್ ಮಿಶ್ರಾ, ಅವರ ಸೋದರ ಸಂಬಂಧಿ ರಾಮು ಅಲಿಯಾಸ್ ಸಂಕಲ್ಪ ಮಿಶ್ರಾ ಮತ್ತು ಸಂಬಂಧಿ ರಾಂಪುರ ಧಮವಾನ್ ನಿವಾಸಿ ವರುಣ್ ತ್ರಿಪಾಠಿ ವಿರುದ್ಧ ಮಹೇಘಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂಕಿತಾಳ ತಂದೆ ಶಾರದಾ ಪ್ರಸಾದ್ ಮತ್ತು ಸೋದರ ಗೋಪಾಲ್ ಮಿಶ್ರಾನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು, ಅಂಕಿತಾ ಪತಿ ರಾಜು ತಿವಾರಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಜಸ್ಟ್ ಟಚ್ ಆಗಿದ್ದಕ್ಕೆ ಇಟ್ಟಿಗೆ ಹಾಗೂ ಹೆಲ್ಮೆಟ್ನಿಂದ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕನ್ನು ನಜ್ಜುಗುಜ್ಜಾಗಿಸಿದ ಮಹಿಳೆ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.