
ಅಂದಹಾಗೆ ಭಾರತದ ಜೊತೆ ಕ್ಯಾತೆ ತೆಗೆದು ಮುಸುಡಿ ಸುಟ್ಟುಕೊಂಡ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಈಗ ಎಲ್ಲಿದ್ದಾರೆ? ಅವರು ಇನ್ನೆಲ್ಲಿರಲು ಸಾಧ್ಯ, ಬಂಕರ್ನಲ್ಲಿ ಅಡಗಿ ಕೂತಿದ್ದಾರೆ ಅನ್ನುತ್ತಿವೆ ಚೀನಾದ ನಿಕಟ ಸಂಪರ್ಕ ಇಟ್ಟುಕೊಂಡ ಕೆಲವು ಮಾಧ್ಯಮಗಳು. ಆದರೆ ಇಂಥ ಸತ್ಯಗಳು ಚೀನಾದ ಮಾಧ್ಯಮಗಳಲ್ಲಿ ಬರುವುದಿಲ್ಲ. ಯಾಕೆಂದರೆ ಅವೆಲ್ಲವೂ ಸರ್ವಾಧಿಕಾರಿ ಕಮ್ಯುನಿಸ್ಟ್ ಸರಕಾರದಿಂದ ನಿಯಂತ್ರಿತವಾಗಿವೆ, ಚೀನಾದ ದೊಡ್ಡ ಪತ್ರಿಕೆ ಗ್ಲೋಬಲ್ ಟೈಮ್ಸ್ ಅಂತೂ ಸರಕಾರದ ಕೈಗೊಂಬೆ. ಇಂಥ ಸತ್ಯಗಳು ಚೀನಾದ ನಿಕಟ ಸಂಪರ್ಕ ಇಟ್ಟುಕೊಂಡ ದಕ್ಷಿಣ ಕೊರಿಯಾದ ಕೆಲವು ಮಾಧ್ಯಮಗಳ ಮೂಲಕ ಹೊರಗೆ ಬರುತ್ತವೆ.
ಕ್ಸಿ ಜಿನ್ಪಿಂಗ್ ಭೂಮಿಯ ಅಡಿಯಲ್ಲಿ ಪಾತಾಳದಲ್ಲಿರುವ ಬಂಕರ್ನಲ್ಲಿ ಅಡಗಿ ಕೂತಿದ್ದಾನೆ. ಕ್ಸಿ ಅಡಗಿ ಕೂರಲು ಅನುಕೂಲವಾಗುವಂತೆ ರಾಜಧಾನಿ ಬೀಜಿಂಗ್ನಲ್ಲೊಂದು, ಬೀಜಿಂಗ್ನ ಹೊರಭಾಗದಲ್ಲೊಂದು ಹೀಗೆ ಎರಡು ಅಡಗುದಾಣಗಳಿವೆ. ಎರಡೂ ಸರ್ವ ಸುಸಜ್ಜಿತ. ಆತ ಯಾವಾಗ ಎಲ್ಲಿರುತ್ತಾನೆ ಎಂಬುದು ಆತನ ಭದ್ರತಾ ನಿರ್ದೇಶಕರಿಗೆ ಬಿಟ್ಟರೆ ಇನ್ಯಾರಿಗೂ ಗೊತ್ತಿರುವುದಿಲ್ಲ. ಆತ ಒಂದು ಬಂಕರ್ಗೆ ಹೋಗುವಾಗ, ಇನ್ನೊಂದು ಬಂಕರ್ಗೂ ಆತನ ಡಮ್ಮಿಯನ್ನು ಕಳಿಸಲಾಗುತ್ತದೆ. ಹಿತಶತ್ರುಗಳು ಗೊಂದಲಕ್ಕೊಳಗಾಗಲಿ ಎಂಬುದಕ್ಕಾಗಿ ಈ ಏರ್ಪಾಡು. ನಮ್ಮಲ್ಲಿ ಇಂದಿರಾ ಗಾಂಧಿ ಅವರು ಅಂಗಕ್ಷಕರಿಂದಲೇ ಕೊಲೆಯಾದಂತೆ ಕ್ಸಿಗೂ ಆಗದಿರಲಿ ಎಂಬುದಕ್ಕೆ ಈ ಮುನ್ನೆಚ್ಚರಿಕೆ. ಅಧ್ಯಕ್ಷರ ಕ್ಯಾನ್ವಾಯ್ ಹೋಗುವಾಗ ಒಂದೇ ಥರ ಕಾಣುವ ನಾಲ್ಕು ಕಾರುಗಳನ್ನು ಬಳಸುತ್ತದೆ. ಯಾವುದರಲ್ಲಿ ಆತ ಕುಳಿತಿದ್ದಾನೆ ಎಂಬುದು ಗೊತ್ತಾಗುವುದಿಲ್ಲ. ಈ ಕಾರುಗಳು ಕ್ಷಿಪಣಿ ಬಂದು ಬಡಿದರೂ ಅಲ್ಲಾಡದಷ್ಟು ಬಲಿಷ್ಠ.
ಬಂಕರ್ ಭೂಮಿಯ ಮೇಲಿನಿಂದ ಐನೂರು ಅಡಿ ಆಳದಲ್ಲಿದೆ. ಅಲ್ಲಿಗೆ ಜಗತ್ತಿನ ವಿದ್ಯಮಾನಗಳನ್ನು ಸಕಾಲಕ್ಕೆ ತಲುಪಿಸುವ ಎಲ್ಲ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ, ಒಂದು ಕುಟುಂಬ ಆರು ತಿಂಗಳು ಹೊರಗೆ ಹೋಗದೇ ಕಾಲ ಕಳೆಯಲು ಬೇಕಾದಷ್ಟು ಅವಶ್ಯಕ ಸಾಮಗ್ರಿಗಳು, ಪ್ರತ್ಯೇಕ ಅಡುಗೆಯವರು, ನ್ಯೂಕ್ಲಿಯರ್ ಬಾಂಬ್ ದಾಳಿಗೆ ತುತ್ತಾದಾಗಲೂ ಛಿದ್ರವಾಗದಂಥ ಬಲಿಷ್ಠ ಕವಚ, ಆತ್ಮರಕ್ಷಣಾ ಸಾಮಗ್ರಿ, ನ್ಯೂಕ್ಲಿಯರ್ ಬಾಂಬ್ಗಳನ್ನು ಕ್ಷಿಪಣಿ ಸಮೇತ ಅಮೆರಿಕ ಸೇರಿದಂತೆ ಪ್ರಮುಖ ವೈರಿ ರಾಷ್ಟ್ರಗಳ ಕಡೆಗೆ ಉಡಾಯಿಸಲು ಸನ್ನದ್ಧವಾಗಿರುವ ಬಟನ್ಗಳು- ಇವೆಲ್ಲವೂ ಇವೆ. ವೈರಿಗಳು ಬಂಕರ್ ಪತ್ತೆ ಹಚ್ಚಿ ಬಾಗಿಲಿನಿಂದ ನುಗ್ಗಿದರೆ ತಪ್ಪಿಸಿಕೊಂಡು ಪಾರಾಗಲು ರಹಸ್ಯದ್ವಾರ- ಎಲ್ಲವೂ ಇವೆ.
ಭಾರತ, ಅಮೆರಿಕಾ ಸೇರಿ ಚೀನಾ ಬುಡಕ್ಕೆ 'D'ಬಾಂಬ್..!
ಅದಿರಲಿ, ಕ್ಸಿ ಅಡಗಿ ಕೂರಲು ಕಾರಣವೇನು? ಕಾರಣವೇನೆಂದರೆ ಕ್ಸಿ ಮೈತುಂಬಾ ಶತ್ರುಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಅತ್ತ ಅಮೆರಿಕ, ಇಸ್ರೇಲ್, ಇತ್ತ ಜಪಾನ್, ಮತ್ತೀಗ ಭಾರತ. ಸುತ್ತಮುತ್ತಲಿನ ಕಝಕಿಸ್ತಾನ್, ತಜಿಕಿಸ್ತಾನ್ ಮುಂತಾದ ಎಲ್ಲ ಸಣ್ಣಪುಟ್ಟ ದೇಶಗಳನ್ನೂ ಕೆಣಕಿದ್ದಾನೆ. ರಷ್ಯದ ಬೇಹುಗಾರಿಕೆ ಪಡೆಯಂತೂ ಕ್ಸಿಯನ್ನುಮುಗಿಸಲು ಸಮಯ ಕಾಯುತ್ತಿದೆ. ಚೀನಾದ ಕೊರೊನಾ ವೈರಸ್ನಿಂದಾಗಿ ಸಂಪೂರ್ಣ ಛಿದ್ರವಾಗಿರುವ ಯುರೋಪ್ ದೇಶಗಳು ಈಗ ಆತನನ್ನು ಮುಗಿಸುವವರಿಗೆ ಸಾಕಷ್ಟು ಹಣ ಕೊಡುವುದಾಗಿ ಸುಪಾರಿ ಕೊಟ್ಟಿವೆ. ಇಸ್ರೇಲ್ನ ಬೇಹುಗಾರರು ಈ ದಿಕ್ಕಿನಲ್ಲಿ ಹೊರಟಿದ್ದಾರೆ. ಆದರೆ ಯಾರೇ ವಿದೇಶೀಗರು ಕಂಡರೂ ಸಂಶಯಿಸುವ ಚೀನಾದ ಬುದ್ಧಿಯಿಂದಾಗಿ ಇದನ್ನು ಕಾರ್ಯರೂಪಕ್ಕೆ ತರಲು ಆಗುತ್ತಿಲ್ಲ.
ಇದು ಕೆಂಪು ರಾಕ್ಷಸನ ಕ್ರೂರ ಸಾಮ್ರಾಜ್ಯ; ಚೀನಾದೊಳಗೆ ನಡೆಯುವ ಕತೆಯಿದು..!
ಮಾವೊ ತ್ಸೆ ತುಂಗನ ಬಳಿಕ ಇಡೀ ಚೀನಾವನ್ನು ಬಿಗಿ ಮುಷ್ಟಿಯಲ್ಲಿಟ್ಟುಕೊಂಡಿರುವ ಸರ್ವಾಧಿಕಾರಿ ಈತ. ಈತನಿಗೆ ಸೈನ್ಯವೂ ಹೆದರುತ್ತದೆ; ಆದರೆ ಸೈನ್ಯದಲ್ಲೂ ಆತನನ್ನು ಕಂಡರೆ ಆಗದವರು ಇದ್ದಾರೆ. ಕೆಲವು ಸೈನ್ಯಾಧಿಕಾರಿಗಳು ಎಷ್ಟು ಬಲಿಷ್ಠರಾಗಿದ್ದಾರ ಎಂದರೆ, ಮಿಸುಕಾಡಿದರೆ ಬೀಜಿಂಗ್ಗೆ ಸೈನ್ಯ ನುಗ್ಗಿಸಿ ಕ್ಸಿಯನ್ನು ಸೆರೆಹಿಡಿದು ಕೊಲ್ಲಿಸಿ ತಾವೇ ಪಟ್ಟ ಏರಲೂ ಬಲ್ಲಷ್ಟು ಬಲಿಷ್ಠರು ಇದ್ದಾರೆ. ಭಾರತದ ಗಡಿಗಳ ಮೇಲೆ ದಾಳಿ ಮಾಡುವಲ್ಲಿ ಇಂಥ ಸೈನ್ಯಾಧಿಕಾರಿಗಳ ಕಿತಾಪತಿಯೇ ಅಧಿಕ. ಕ್ಸಿ ಬೇಡ ಬೇಡ ಎಂದರೂ ಹೀಗೆ ಭಾರತವನ್ನು ಕೆಣಕುವುದು ಇವರ ಚಾಳಿ. ಕ್ಸಿಗೆ ಇವರ ಅಂಜಿಕೆಯಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.