
ಇಂದಿನ ಬಹುತೇಕ ಯುವತಿಯರು ಮಾತೆತ್ತಿದರೆ ವೆಲ್ಸೆಟಲ್ಡ್ ಹುಡುಗ ಬೇಕು ಎನ್ನುತ್ತಾರೆ. ಅವರ ಡಿಮಾಂಡ್ ಕೇಳಿ ಹಲವು ಹುಡುಗರು ಮದುವೆಯಾಗುವ ಆಸೆಯನ್ನೇ ಬಿಟ್ಟುಬಿಡುವ ಸ್ಥಿತಿಯೂ ಬಂದಿದೆ. ಲಕ್ಷ ಲಕ್ಷ ಬಿಟ್ಟು ಕೋಟಿ ಕೋಟಿಯಲ್ಲಿಯೇ ಹಲವು ಯುವತಿಯರ ಡಿಮಾಂಡ್ ಇರುತ್ತದೆ. ತಾವು ದುಡಿಯುತ್ತಿರಲಿ, ದುಡಿಯದೇ ಇರಲಿ ಹುಡುಗ ಹೀಗಿರಬೇಕು ಎನ್ನುವ ಭರ್ಜರಿ ಡಿಮಾಂಡ್ ಇರುತ್ತದೆ. ಇಷ್ಟು ಡಿಮಾಂಡ್ ಇಡಲು ಎಷ್ಟು ಬುದ್ಧಿ ಉಪಯೋಗಿಸುತ್ತಾರೋ, ಅಷ್ಟೇ ಬುದ್ಧಿ ತಾವು ಕಂಡ ಹುಡುಗನ ಹಿನ್ನೆಲೆ, ಅವನು ತಮಗೆ ಮೋಸ ಮಾಡ್ತಿದ್ದಾನಾ, ಅವನು ಬಣ್ಣಬಣ್ಣದ ಮಾತುಗಳಿಂದ ಮರುಳು ಮಾಡ್ತಿದ್ದಾನಾ ಎನ್ನುವುದನ್ನು ಯೋಚಿಸುವುದಕ್ಕೆ ಉಪಯೋಗಿಸುವುದೇ ಇಲ್ಲ. ಅದಕ್ಕಾಗಿಯೇ ಇಂದು ಯುವತಿಯರನ್ನು ಬಗೆ ಬಗೆ ರೂಪದಲ್ಲಿ ಗಾಳ ಹಾಕುವುದು ಫೇಕುಗಳಿಗೆ ಬಲು ಸುಲಭವಾಗಿಬಿಟ್ಟಿದೆ.
ದೊಡ್ಡ ಮೊತ್ತದ ಕಾರು, ಬೈಕು, ಸಿನಿಮಾ ತಾರೆಯರ ರೀತಿ ಹೇರ್ಸ್ಟೈಲ್ ಹೀಗೆಲ್ಲಾ ಮಾಡಿ, ತಾನು ಕೋಟ್ಯಧಿಪತಿ ಎಂದು ಹೇಳಿಕೊಂಡ ತಕ್ಷಣ ಬೀಳುವ ಯುವತಿಯರು ಎಷ್ಟು ಮಂದಿ ಇಲ್ಲ ಹೇಳಿ, ಹಲವಾರು ಲವ್ ಜಿಹಾದ್ ಕೇಸ್ಗಳಲ್ಲಿ ಹಿಂದೂ ಯುವತಿಯರು ಬಲೆಗೆ ಬೀಳುತ್ತಿರುವುದಕ್ಕೆ ಬಹುಮುಖ್ಯ ಕಾರಣ ಇದೇ ಎನ್ನುವುದು ಇದಾಗಲೇ ವರದಿಗಳು ಹೇಳಿವೆ. ಇಂಥವರನ್ನೇ ಗಾಳ ಹಾಕುವ ಯುವಕರು ಹೆಣ್ಣುಮಕ್ಕಳ ಈ ಶ್ರೀಮಂತಿಕೆಯ ಹಪಾಹಪಿಯನ್ನು ಚೆನ್ನಾಗಿ ಅರಿತಿದ್ದಾರೆ. ಇದೀಗ ಅಂಥದ್ದೇ ಒಂದು ಕೇಸ್ ನಡೆದಿದ್ದು, ತಾನು ಡಾಕ್ಟರ್ ಎಂದು ಹೇಳಿಕೊಂಡಿರುವ ತಮಿಳುನಾಡಿನ ಪ್ರದೀಪ್ ಜೋಸೆಫ್ ಎಂಬಾತ ಮೆಟ್ರಿಮೋನಿಯಲ್ ಸೈಟ್ನಲ್ಲಿ ತನ್ನ ಬಗ್ಗೆ ಬರೆದುಕೊಂಡು ಹಲವು ಯುವತಿಯರಿಂದ ಲಕ್ಷ ಲಕ್ಷ ಪೀಕಿರುವ ಘಟನೆ ನಡೆದಿದೆ.
ಬೆಂಗಳೂರು ಮತ್ತು ಮೈಸೂರಿನ ಎಜುಕೇಟೆಡ್ ಯುವತಿಯರೇ ಇವನ ಮೋಸದಲ್ಲಿ ಸಿಲುಕಿರುವುದು ತಿಳಿದಿದೆ. ವೈವಾಹಿಕ ವೆಬ್ಸೈಟ್ನಲ್ಲಿ ನಕಲಿ ಗುರುತನ್ನು ಸೃಷ್ಟಿಸಿ ಶ್ರೀಮಂತ ಮತ್ತು ವಿದ್ಯಾವಂತ ವರನೆಂದು ಹೇಳಿಕೊಂಡಿದ್ದಾನೆ ಈಗ. ಪ್ರದೀಪ್ ಸೊಲೊಮನ್ ಅಲಿಯಾಸ್ ಪ್ರದೀಪ್ ಜೋಸೆಫ್ ಎಂದು ಗುರುತಿಸಿಕೊಂಡಿರುವ ಈತ ತಮಿಳುನಾಡಿನವ. ಆದ್ರೆ ಗಾಳ ಹಾಕಿರೋದು ಕರ್ನಾಕಟದ ಯುವತಿಯರಿಗೆ.
ತಾನು ಪಿಎಚ್ಡಿ ಪದವೀಧರನೆಂದು ಮತ್ತು ಆರ್ಥಿಕವಾಗಿ ಉತ್ತಮವಾಗಿ ನೆಲೆಸಿರುವುದಾಗಿ ಹೇಳಿಕೊಂಡು ಪ್ರೊಫೈಲ್ ತೆರೆದಿದ್ದಾನೆ. ವೈವಾಹಿಕ ವೇದಿಕೆಗಳ ತನ್ನ ಸುಂದರ ಫೋಟೋ ಹಾಕಿ ಡಾಕ್ಟರ್ ಎಂದಿದ್ದಾನೆ. ಹುಡುಗಿಯರಿಗೆ ಮತ್ತು ಶ್ರೀಮಂತ ಅಳಿಯನನ್ನು ಹುಡುಕುತ್ತಿರುವ ಹುಡುಗಿಯ ಮನೆಯವರಿಗೆ ಇನ್ನೇನು ಬೇಕು. ಹಿನ್ನೆಲೆಯನ್ನೂ ತಿಳಿಯದೇ ಆತನನ್ನು ಸಂಪರ್ಕಿಸಿದ್ದಾರೆ ಕೆಲವರು. ಹುಡುಗಿಯರಿಗೆ ಬಣ್ಣ ಬಣ್ಣದ ಮಾತುಗಳನ್ನಾಡಿದ್ದಾನೆ. ಕೆಲವು ಕೇಸ್ಗಳಲ್ಲಿ ಅಪ್ಪ-ಅಮ್ಮನ ವಿಶ್ವಾಸವನ್ನೂ ಗಳಿಸಿದ್ದಾನೆ.
ಕೊನೆಗೆ ಆ ನೆಪ ಈ ನೆಪ ಹೇಳಿ ಅವರಿಂದ ಲಕ್ಷ ಲಕ್ಷ ಪೀಕಿದ್ದಾನೆ. ತನ್ನ ಅಪಾರ ಹಣವು ವ್ಯವಹಾರ ಅಥವಾ ಹಣಕಾಸಿನ ವಹಿವಾಟಿನಲ್ಲಿ "ಸಿಕ್ಕಿಹೋಗಿದೆ" ಮತ್ತು ತುರ್ತಾಗಿ ತಾತ್ಕಾಲಿಕ ಆರ್ಥಿಕ ಸಹಾಯದ ಅಗತ್ಯವಿದೆ ಎಂದು ಹೇಳುತ್ತಿದ್ದ. ಅವನ ಭರವಸೆಗಳನ್ನು ನಂಬಿದ ಹಲವಾರು ಕುಟುಂಬಗಳು ಅವನಿಗೆ ಲಕ್ಷಾಂತರ ರೂಪಾಯಿಗಳನ್ನು ವರ್ಗಾಯಿಸಿವೆ. ಕೋಟ್ಯಧಿಪತಿ ಸಿಗುವಾಗ ಒಂದಿಷ್ಟು ಲಕ್ಷ ಹೋದ್ರೆ ದೊಡ್ಡ ವಿಷ್ಯವೇನಲ್ಲ ಬಿಡಿ ಎಂದುಕೊಂಡು ಯುವತಿಯರು ಅವನು ಕೇಳಿದಷ್ಟು ದುಡ್ಡು ಕೊಟ್ಟಿದ್ದಾರೆ. ಆಮೇಲೆ ಚಾಪ್ಟರ್ ಕ್ಲೋಸ್. ಮತ್ತೊಂದು ಮಿಕನ್ನ ಹಿಡಿಯುವಲ್ಲಿ ಈತ ತಲ್ಲೀನ. ಹೀಗೆ ಅನೇಕರಿಗೆ ಟೋಪಿ ಹಾಕಿರುವ ಈತನ ವಿರುದ್ಧ ಯಾರೋ ಒಬ್ಬರು ದೂರು ಸಲ್ಲಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಇನ್ನೂ ಆ್ಯಕ್ಟೀವ್, ಪೊಲೀಸ್ರಿಗೆ ಸಿಗ್ತಿಲ್ಲ!
ಸದ್ಯ, ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ತಂಡಗಳು ಪ್ರಸ್ತುತ ಆರೋಪಿಗಾಗಿ ಹುಡುಕಾಟ ನಡೆಸುತ್ತಿವೆ, ಅವರು ಬಂಧನದ ಭಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇವನಿಗೆ ಇವನ ಅಮ್ಮ ಎಂದು ಹೇಳುವ ಕಲಾವತಿ ಎನ್ನುವ ಮಹಿಳೆಯೂ ಸಹಾಯ ಮಾಡುತ್ತಿದ್ದಳು. ಇವನ ಬಗ್ಗೆ ತಿಳಿಯತ್ತಲೇ ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಎಲ್ಲಿಯೋ ಕುಳಿತು ವಿಡಿಯೋ ಮಾಡಿದ್ದಾನೆ ಈತ. ಪೊಲೀಸರಿಗೆ ಮಾತ್ರ ಸಿಕ್ತಿಲ್ಲವಂತೆ. ಇಷ್ಟೆಲ್ಲಾ ಕಂಪ್ಲೇಂಟ್ ಆದ್ರೂ ಇನ್ನೂ ಮೆಟ್ರಿಮೋನಿಯಲ್ ಸೈಟ್ನಲ್ಲಿ ಆ್ಯಕ್ಟೀವ್ ಆಗಿದ್ದಾನಂತೆ! ಪೊಲೀಸರು ಹುಡುಕಾಟ ನಡೆಸ್ತಾ ಇದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.