
ನಟರಾದವರು ತಮ್ಮ ಪಾತ್ರದ ಒಳಗೆ ಪರಕಾಯ ಪ್ರವೇಶ ಮಾಡಿ, ಆ ಕ್ಯಾರೆಕ್ಟರ್ಗೆ ನ್ಯಾಯ ಒದಗಿಸುವುದೂ ಅಲ್ಲದೇ, ಅದು ಜನಮಾನಸದಲ್ಲಿ ಉಳಿಯುವಂತೆ ಮಾಡಲು ಹಲವರು ರೀತಿಯಲ್ಲಿ ಶ್ರಮ ವಹಿಸುತ್ತಾರೆ. ಹೀಗೆ ಶ್ರಮ ವಹಿಸಿದ ತಾರೆಯರು ಎಂದಿಗೂ ಜನರ ಮನಸ್ಸಿನಲ್ಲಿ ನೆನಪಿನಲ್ಲಿ ಉಳಿಯುತ್ತಾರೆ. ಸಿನಿಮಾಗಳಲ್ಲಿ ದೇವರ ಪಾತ್ರ, ರಾಜಕಾರಣಿಗಳ ಪಾತ್ರ, ಖಳನಾಯಕರ ಪಾತ್ರ... ಹೀಗೆ ವಿಭಿನ್ನ ಪಾತ್ರಗಳನ್ನು ಮಾಡುವಾಗ ನಟರು ಅದೆಷ್ಟೋ ಬಾರಿ ಎಷ್ಟೋ ದಿನಗಳವರೆಗೆ ಹಗಲೂ ರಾತ್ರಿ ಪಾತ್ರದ ಪರಿಚಯವನ್ನು ಮಾಡಿಕೊಳ್ಳಲು ಕಳೆದಿರುವುದು ಇದೆ. ಇದೇ ಕಾರಣಕ್ಕೆ ಡಾ.ರಾಜ್ಕುಮಾರ್ ಅವರ ಪ್ರತಿಯೊಂದು ಪಾತ್ರವೂ ಇಂದಿಗೂ ಹಚ್ಚ ಹಸಿರಾಗಿಯೇ ಉಳಿದಿದೆ. ಪಾತ್ರಗಳಲ್ಲಿ ಅವರು ತೋರುವ ಡೆಡಿಕೇಷನ್ನಿಂದಾಗಿಯೇ ಅವರು ವಿಭಿನ್ನ ನಟ ಎನ್ನಿಸಿಕೊಂಡವರು.
ಇದು ಸಿನಿಮಾ ಮಾತಾದರೆ, ಸೀರಿಯಲ್ಗಳಲ್ಲಿಯೂ ಇಂದು ಹಲವು ನಟರು ತಮ್ಮ ಪಾತ್ರದ ಬಗ್ಗೆ ತುಂಬಾ ಸೀರಿಯಸ್ ಆಗಿ ಅಧ್ಯಯನ ಮಾಡುವುದು ಇದೆ. ಅದನ್ನೇ ಈಗ ಹೇಳಿದ್ದಾರೆ ಕರ್ಣ ಸೀರಿಯಲ್ನಲ್ಲಿ ಕರ್ಣ ಪಾತ್ರಧಾರಿಯಾಗಿರುವ ಕಿರಣ್ ರಾಜ್. ಈ ಸೀರಿಯಲ್ನಲ್ಲಿ ಕಿರಣ್ ಅವರದ್ದು ಡಾಕ್ಟರ್ ರೋಲ್. ಅಗತ್ಯಕ್ಕಿಂತ ಸ್ವಲ್ಪ ಹೆಚ್ಚಿಗೆ ಒಳ್ಳೆಯತನವನ್ನು ತೋರಿರುವುದರಿಂದ ಈಗಲೇ ವೀಕ್ಷಕರಿಗೆ ಈ ಪಾತ್ರದ ಮೇಲೆ ಯಾಕೋ ಸ್ವಲ್ಪ ಅಸಮಾಧಾನ ಇರುವುದು ಕಮೆಂಟ್ಗಳಿಂದಲೇ ತಿಳಿದುಬರುತ್ತಿದೆ. ಆದರೆ ನಿರ್ದೇಶಕರು ಹೇಳಿದಂತೆ ಮಾಡುವುದು ನಟರ ಕರ್ತವ್ಯವೂ ಆಗಿರುವ ಕಾರಣ, ಕರ್ಣನಾಗಿ ಕಿರಣ್ ಅವರು ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.
ಇದೀಗ ವೈದ್ಯನ ಪಾತ್ರ ಮಾಡಲು ತಾವು ಹೇಗೆಲ್ಲಾ ಪ್ರಿಪೇರ್ ಆಗಿದ್ದು ಎನ್ನುವ ಬಗ್ಗೆ ಕಿರಣ್ ರಾಜ್ ಮಾಧ್ಯಮವೊಂದರಲ್ಲಿ ಮಾತನಾಡಿದ್ದಾರೆ. 'ಆಸ್ಪತ್ರೆಗಳಿಗೆ ಭೇಟಿ ಕೊಟ್ಟು, ಹಲವು ವೈದ್ಯರ ಜೊತೆ ಮಾತನಾಡಿದ್ದೇನೆ. ಡಾಕ್ಟರ್ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಸ್ಟಡಿಮಾಡಿದ್ದೇನೆ. ಮಾತ್ರವಲ್ಲದೇ ಪ್ರಸವದ ಸಮಯದಲ್ಲಿ ಏನಾಗುತ್ತದೆ, ಮಹಿಳೆಯರ ಮನಸ್ಥಿತಿ ಹೇಗೆ ಇರುತ್ತದೆ, ಕರ್ನಾಟಕದಲ್ಲಿ ಗರ್ಭಿಣಿಯರ ಸಾವು ಯಾಕೆ ಆಗ್ತಿದೆ, ಇದನ್ನು ತಡೆಯಲು ಏನು ಮಾಡಬಹುದು, ಹೆರಿಗೆ ಸಮಯದಲ್ಲಿ ರಕ್ತದ ಕೊರತೆ ಏಕೆ ಕಾಡುತ್ತಿದೆ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವ ಕೊರತೆ ಇವೆ ಇವೆಲ್ಲವುಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ' ಎಂದಿದ್ದಾರೆ ಕಿರಣ್ ರಾಜ್.
ಇನ್ನು ನಟನ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರದಲ್ಲಿಯೂ ನಟಿಸಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ಕೆಲ ಧಾರಾವಾಹಿ ಮತ್ತು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ನಟನಾ ಜೀವನ ಹಿಂದಿ ಸೀರಿಯಲ್ನಿಂದ ಆರಂಭವಾಗಿದ್ದು, ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಕನ್ನಡಕ್ಕೆ ಬಂದರು. ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದರು. ಕಲರ್ಸ್ ಕನ್ನಡದ ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್ಬಾಸ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದರು. ಅಸತೋಮ ಸದ್ಗಮಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು, ಬಳಿಕ ಮಾರ್ಚ್ 22, ಜೀವ್ನಾನೇ ನಾಟ್ಕ ಸ್ವಾಮಿ, ಬಹುದ್ದೂರ್ ಗಂಡು, ಬಡ್ಡೀಸ್, ಒನ್ ವೇ, ರಾನಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗುವಿನಲ್ಲಿ ನುವ್ವೇ ನಾ ಪ್ರಾಣಂ, ವಿಕ್ರಮ್ ಗೌಡ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.