
ಆರ್.ಕೇಶವಮೂರ್ತಿ
ಹಾಸ್ಯ ಚಿತ್ರಗಳಿಗೆ ತೀರಾ ಲಾಜಿಕ್ ಬೇಕಿರಲ್ಲ ಎನ್ನುವ ನಂಬಿಕೆ ಹಲವು ಚಿತ್ರಗಳದ್ದು. ಅದೇ ನಂಬಿಕೆಯಲ್ಲಿ ಬಂದಿರುವ ಸಿನಿಮಾ ‘ಓಲ್ಡ್ಮಾಂಕ್’. ಹೀಗಾಗಿ ಈ ಚಿತ್ರ ನೋಡುವಾಗ ಲಾಜಿಕ್ ಹುಡುಕದೆ ಹೋದರೆ ಮನರಂಜನೆ ಕೊಡುತ್ತದೆ. ನಗುವಿಗೆ ಕೊರತೆ ಮಾಡಿಲ್ಲ ಎಂಬುದು ಶ್ರೀನಿ ನಿರ್ದೇಶನ ಮತ್ತು ನಟನೆಯ ಹೆಚ್ಚುಗಾರಿಕೆ.
ದೇವಲೋಕದಲ್ಲಿ ಶಾಪಕ್ಕೆ ಗುರಿಯಾಗುವ ನಾರದ, ಭೂಲೋಕದಲ್ಲಿ ಹುಟ್ಟುವುದು. ಪ್ರೀತಿಸಿ ಮದುವೆಯಾದ ಮೇಲೆ ತನ್ನ ಶಾಪ ವಿಮೋಚನೆ ಆಗಲಿದೆ. ಆದರೆ, ಪ್ರೀತಿಗೆ ಮನೆಯಲ್ಲೇ ವಿರೋಧ ಇದೆ. ಲವ್ ಮ್ಯಾರೇಜ್ ಅನ್ನು ಸುತಾರಾಂ ಒಪ್ಪದ ಮನೆಯಲ್ಲಿ ಹುಟ್ಟುವ ನಾರದ, ಪ್ರೀತಿಸಲು ಏನೆಲ್ಲ ಡ್ರಾಮಾ ಮಾಡುತ್ತಾನೆ ಎಂಬುದು ಚಿತ್ರದ ಕತೆ. ಇದರ ನಡುವೆ ವಯಸ್ಸಾದವರ ಪ್ರೇಮ ಕತೆಗಳು, ಹಳೆಯ ಜೋಡಿಗಳು, ರಾಜಕೀಯ, ನೀನಾ-ನಾನಾ ಎನ್ನುವ ಬೆಟ್ಟಿಂಗ್, ನಾಯಕಿಯ ಪ್ರೀತಿ... ಇತ್ಯಾದಿ ತಿರುವುಗಳು ಬಂದು ಹೋಗುತ್ತವೆ.
ತಾರಾಗಣ: ಶ್ರೀನಿ, ಅದಿತಿ ಪ್ರಭುದೇವ, ಎಸ್ ನಾರಾಯಣ್, ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್, ಸುಜಯ್ ಶಾಸ್ತ್ರಿ
ನಿರ್ದೇಶನ: ಶ್ರೀನಿ
ರೇಟಿಂಗ್: ****
ಇಲ್ಲಿ ನಾಯಕನ ಅಪ್ಪ ಯಾಕೆ ಲವ್ ಮ್ಯಾರೇಜ್ ಗೆ ವಿರೋಧಿ ಹಾಗೂ ದೇವಲೋಕದಲ್ಲಿ ನಾರದನಿಗೆ ಪ್ರಾಪ್ತಿಯಾಗಿರುವ ಶಾಪ ಏನು ಎಂಬುದೇ ಕತೆಯ ಸಣ್ಣ ತಂತಿಗಳು. ಈ ತಂತಿಯ ಮೇಲೆಯೇ ಇಡೀ ಸಿನಿಮಾ ಮುಗಿದು ಹೋಗುತ್ತದೆ. ಚಿತ್ರದ ನಾಯಕ ಲವ್ ಮ್ಯಾರೇಜ್ ಗೆಲ್ಲುತ್ತದಾ, ನಾಯಕನ ತಂದೆಯ ಹಠ ಗೆಲ್ಲುತ್ತದೆಯೇ ಎಂಬುದನ್ನು ನೀವು ತೆರೆ ಮೇಲೆ ನೋಡಬೇಕು.
ಇದರ ನಡುವೆ ಗಿಚ್ಚಿ ಗಿಲಿಗಿಲಿ ಹಾಡು ಮತ್ತು ಈ ಹಾಡಿನಲ್ಲಿ ಅದಿತಿ ಪ್ರಭುದೇವ ತುಂಬಾ ಮುದ್ದಾಗಿ ಕಾಣುತ್ತಾರೆ. ಸುಜಯ್ ಶಾಸ್ತ್ರಿ, ಎಸ್ ನಾರಾಯಣ್, ಪಿ ಡಿ ಸತೀಶ್, ಶ್ರೀನಿ, ಅದಿತಿ ಪ್ರಭುದೇವ ಹೀಗೆ ಎಲ್ಲರ ಪಾತ್ರಗಳು ಕತೆಗೆ ಪೂರಕವಾಗಿವೆ. ಪಾತ್ರಧಾರಿಗಳ ಅದ್ಭುತ ನಟನೆ, ಅದ್ದೂರಿ ಮೇಕಿಂಗ್ ಇತ್ಯಾದಿಗಳನ್ನು ನಿರೀಕ್ಷೆ ಮಾಡಬೇಡಿ. ಒಂದಿಷ್ಟು ಲವಲವಿಕೆಯ ಸಂಭಾಷಣೆಗಳು, ಸುಜಯ್ ಶಾಸ್ತ್ರಿ ಹಾಗೂ ಎಸ್ ನಾರಾಯಣ್ ಅವರ ಕಾಮಿಡಿ ಪ್ರೇಕ್ಷಕರನ್ನು ರಂಜಿಸುತ್ತದೆ.
ಆದರೆ, ಚಿತ್ರದಲ್ಲಿ ಬರುವ ಪಾಲಿಟಿಕ್ಸ್ ಎಪಿಸೋಡ್, ವಿಲನ್ ರಾಜಕಾರಣಿ ಅಗತ್ಯವಿಲ್ಲ ಅನಿಸುತ್ತದೆ. ಇದೇ ಕಾರಣಕ್ಕೆ ಚಿತ್ರಕಥೆ ಮೂಗುದಾರ ಇಲ್ಲದ ಕರುವಿನ ರೀತಿ ಆಗಾಗ ಎಲ್ಲೆಲ್ಲಿಗೋ ಹೋಗಿ ಮತ್ತೆ ಅಲ್ಲಿಗೆ ಬರುತ್ತದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.