ಈ ಊರಿನ ಮನೆ, ಅಂಗಡಿಗೆ ಇಲ್ಲ ಬೀಗ!

By Web DeskFirst Published May 20, 2019, 12:55 PM IST
Highlights

ಮನೆ, ಅಂಗಡಿಗೆ ಕಳ್ಳರು ದರೋಡೆಕೋರರ ಹಾವಳಿಯಿಂದ ತಮ್ಮನ್ನು ಕಾಪಾಡಲು ಗಟ್ಟಿಯಾಗಿ ಬೀಗ ಜಡಿಯುತ್ತಾರೆ. ಆದರೆ ಈ ಊರಲ್ಲಿ ಮಾತ್ರ ಜನರು ಮನೆಗೆ ಬೀಗ ಹಾಕೋದೇ ಇಲ್ಲ ಕಾರಣ ಊರನ್ನು ಕಾಯುವ ಶನಿ ದೇವ. 

ಮಹಾರಾಷ್ಟ್ರದಲ್ಲಿರುವ ಶನಿ ಸಿಂಗ್ನಾಪುರ ಶನಿ ದೇವರಿಗೆ ಮುಡಿಪಾದ ಗ್ರಾಮ. ಈ ಗ್ರಾಮವು ಶನಿ ದೇವನನ್ನು ಪ್ರತಿನಿಧಿಸುವ ಕಪ್ಪು ಶಿಲೆಯ ವಿಶಿಷ್ಟವಾದ ಮೂರ್ತಿಗಾಗಿ ಹೆಸರುವಾಸಿ. ಇದು ದೇಶದಲ್ಲಿಯೇ ಅತ್ಯಂತ  ಪ್ರಸಿದ್ಧವಾದ ಶನಿ ದೇವರ ದೇವಾಲಯ.  ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ನೆವಸಾ ತಾಲ್ಲೂಕಿನಲ್ಲಿರುವ ಈ ಗ್ರಾಮದಲ್ಲಿ ಶ್ರೀ ಶನಿ ದೇವ ನೆಲೆಸಿದ್ದಾನೆ. ಆ ದೇವರು ಇಲ್ಲಿ ಯಾವುದೇ ಕಳ್ಳತನ ನಡೆಯದಂತೆ ಕಾಪಾಡುತ್ತಾನೆ. ಅದಕ್ಕಾಗಿಯೇ ಜನರು ಇಲ್ಲಿ ಮನೆಗೆ ಬೀಗ ಹಾಕುವುದೇ ಇಲ್ಲ. 

ಈ ಊರಿನ ವಿಶೇಷತೆ ಏನು? 

ಇಲ್ಲಿನ ಜನರು ಇಲ್ಲಿ ನಡೆಯುವುದೆಲ್ಲವೂ ದೇವರಿಂದ ಎಂದು ನಂಬಿದ್ದಾರೆ. ಹಾಗಾಗಿ ಇಲ್ಲಿ ಯಾವ ಮನೆಗೂ ಬಿಗ ಹಾಕುವುದಿಲ್ಲ.  ಎಲ್ಲಕ್ಕಿಂತ ಹೆಚ್ಚಾಗಿ ಬ್ಯಾಂಕುಗಳಿಗೂ ಇಲ್ಲಿ ಬೀಗ ಹಾಕದೇ ಇರೋದು ನಿಜಕ್ಕೂ ಆಶ್ಚರ್ಯ. 

ದೃಷ್ಟಿ ದೋಷ ಸಮಸ್ಯೆ ಬಗೆ ಹರಿಸೋ ನೈನಾದೇವಿ

ಆದರಿದು ಸತ್ಯ. ಯಾಕಂದ್ರೆ ಇಲ್ಲಿ ಕಳ್ಳರ ಕಾಟ ಇಲ್ಲ. ಅಂದ್ರೆ ಇಲ್ಲಿ ಕಳ್ಳರೇ ಇಲ್ಲ ಅಂತಲ್ಲ. ಒಂದು ಕಾಲದಲ್ಲಿ ಇದ್ದರು. ಅವರು ಕಳ್ಳತನ ಮಾಡಿದಾಗ, ಈ ದೇವರು ಅವರಿಗೆ ನೀಡೋ ಶಾಪದಿಂದ ಯಾವ ಕಳ್ಳನೂ ಇಲ್ಲಿ ಕಳ್ಳತನ ಮಾಡುವ ಧೈರ್ಯ ತೋರುವುದಿಲ್ಲ. ಹಾಗಾಗಿ ತೆರೆದ ಬಾಗಿಲು ಇಲ್ಲಿ ತೆರೆದೇ ಇರುತ್ತದೆ. ಅಂತಹ ಕಾರಣಿಕ ತಾಣ ಇದು. 

ಶನಿ ದೇವರು ಇಲ್ಲಿ ಬಂದು ನೆಲೆಸಿದ ಕತೆ: 

ಈ ಊರಲ್ಲಿ ಶನಿ ದೇವರ ಪ್ರತಿಷ್ಠಾಪನೆಯ ಕುರಿತು ಒಂದು ಕತೆ ಇದೆ. ಇಲ್ಲಿ ಒಬ್ಬ ಕುರುಬನಿದ್ದ. ಪ್ರತಿದಿನ ಅವನು ತನ್ನ ಕುರಿಗಳನ್ನ ಮೇಯಿಸೋಕೆ ಅಂತ ಬೆಟ್ಟ, ಗುಡ್ಡ ಹಾಗೂ ನದಿ ತೀರಕ್ಕೆ ಅಂತ ಹೋಗುತ್ತಿದ್ದ. 

ಇಲ್ಲಿ ದೇವರಿಗಲ್ಲ ಪೂಜೆ, ಬದಲಿಗೆ ಪ್ರಾಣಿಗಳಿಗೆ!

ಒಂದು  ದಿನ ಆತ ನದಿ ತೀರದಲ್ಲಿ ಇದ್ದಾಗ,  ನದಿ ಮೇಲೆ, ಯಾವುದೋ ಒಂದು ಕಪ್ಪು ಕಲ್ಲು ತೇಲಿ ಬಂತು. ಆಗ ಅವನಿಗೆ ಮತ್ತು ಸ್ನೇಹಿತರಿಗೆ ಕಲ್ಲು ತೇಲುವುದು ನೋಡಿ ಆಶ್ಚರ್ಯವಾಯಿತು.  ತಕ್ಷಣವೇ ಅವರು ಆ ಕಲ್ಲನ್ನ  ಎತ್ತಿಕ್ಕೊಂಡು ಬಂದು ನೋಡಿದರೆ, ಯಾವುದೊ ದೇವರ ಮೂರ್ತಿಯಂತೆ ಕಾಣುತ್ತಿತ್ತು. ಆದ್ರೆ ಯಾವ ದೇವರು, ಏನು ಎಂಬುದು ತಿಳಿದಿರಲಿಲ್ಲ. ಆದ್ರೆ ಇದು ದೇವರೇ ಇರಬೇಕು ಎಂದು ಪೂಜಿಸಲು ಶುರು ಮಾಡಿದರು. ಮಾರನೇ ದಿನ ಆ ಕಲ್ಲಿನಲ್ಲಿ ರಕ್ತ ಬರುತ್ತದೆ. ಜನರಿಗೂ ಈ ಬಗ್ಗೆ ಭಯವಾಗುತ್ತದೆ. ಹೀಗಿರುವಾಗ ಆ ದಿನ ರಾತ್ರಿ ಆ ಕುರುಬನ ಕನಸಿನಲ್ಲಿ ದೇವರು ಬಂದು ನಾನು ಶನಿ ದೇವ, ಈ ಊರಲ್ಲಿ ನೆಲೆಸಲು ಬಂದಿದ್ದೇನೆ. ನಂಗೊಂದು  ದೇವಾಲಯ ನಿರ್ಮಿಸು ಎಂದು ಹೇಳುತ್ತದೆ. ಆದ್ರೆ ಆ ದೇವಾಲಯಕ್ಕೆ ಚಾವಣಿ ಇರಬಾರದು. ತೆರೆದ ಆಕಾಶದಲ್ಲಿ ಇರಬೇಕು ಎಂದೂ ಆದೇಶಿಸುತ್ತದೆ. ಅದರಂತೆ ಆ ಕುರುಬ ಊರಿನ ಜನರೊಂದಿಗೆ ಮಾತಾಡುತ್ತಾನೆ. ದೇವರಿಗೆ  ಚಾವಣಿಯೇ ಇಲ್ಲದ ದೇವಾಲಯ ನಿರ್ಮಿಸುತ್ತಾರೆ.

ಇಂದಿಗೂ ಈ ಊರಿನ ಜನರು ಶನಿದೇವನನ್ನು ಭಕ್ತಿಯಿಂದ ಪೂಜಿಸುತ್ತಾರೆ. ಎಣ್ಣೆ ಅಭಿಷೇಕವೂ ಮಾಡುತ್ತಾರೆ. ದೇವರೂ ಇಲ್ಲಿನ ಜನರನ್ನು ಕಾಪಾಡುತ್ತಾನೆ. ಅದಕ್ಕಾಗಿಯೇ ಈ ಜನರು ಯಾವುದೇ ಭಯವಿಲ್ಲದೆ ಮನೆಗೆ ಬೀಗ  ಹಾಕುವುದೇ ಇಲ್ಲ.

click me!