ಸೋಷಿಯಲ್ ಮೀಡಿಯಾ ಬಳಕೆದಾರರನ್ನು ಕಾಡ್ತಿದೆಯಾ ಡಿಪ್ರೆಶನ್ ಸಮಸ್ಯೆ ?

By Suvarna NewsFirst Published Oct 11, 2022, 10:20 AM IST
Highlights

ಮನುಷ್ಯನ ಆರೋಗ್ಯದ ವಿಚಾರಕ್ಕೆ ಬಂದಾಗ ದೈಹಿಕ ಆರೋಗ್ಯದಷ್ಟೇ, ಮಾನಸಿಕ ಆರೋಗ್ಯವೂ ತುಂಬಾ ಮುಖ್ಯ. ಆದರೆ ಇತ್ತೀಚಿಗೆ ಕೆಲ ವರ್ಷಗಳಿಂದ ಸೋಷಿಯಲ್ ಮೀಡಿಯಾಗಳ ಬಳಕೆಯಿಂದ ಮಾನಸಿಕ ಆರೋಗ್ಯ ಮರೀಚಿಕೆಯಾಗಿಬಿಟ್ಟಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್‌ ಜೋಹರ್‌ ನೆಮ್ಮದಿ ಹಾಳಾಗ್ತಿದೆ ಎಂಬ ಕಾರಣ ಹೇಳಿ ಟ್ವಿಟರ್‌ಗೆ ಗುಡ್‌ ಬೈ ಹೇಳಿದ್ದಾರೆ. ಇವಲ್ಲದೆ ಖ್ಯಾತ ಸೆಲಬ್ರಿಟಿಗಳು ಮಾನಸಿಕ ಆರೋಗ್ಯದ ಬಗ್ಗೆ ಏನ್ ಹೇಳಿದ್ದಾರೆ ತಿಳಿಯೋಣ.

ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಎಂಬುದಾಗಿ ವಿಶ್ವದ ಎಲ್ಲೆಡೆಗಳಲ್ಲಿ ಆಚರಿಸಲಾಗುತ್ತದೆ. ಮಾನಸಿಕ ಆರೋಗ್ಯ ಒಬ್ಬ ವ್ಯಕ್ತಿಯ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಹೀಗಾಗಿಯೇ ಮಾನಸಿಕ ಆರೋಗ್ಯದ ಅಗತ್ಯತೆ, ಮಾನಸಿಕ ಆರೋಗ್ಯವನ್ನು ಪಡೆದುಕೊಳ್ಳಲು ಏನು ಮಾಡ್ಬೇಕು ಎಂಬುದರ ಬಗ್ಗೆ ಚರ್ಚೆಗಳು ಹೆಚ್ಚುತ್ತಿವೆ. ಮಾನಸಿಕ ಆರೋಗ್ಯದ ವಿಷಯಕ್ಕೆ ಬಂದಾಗ ತಕ್ಷಣಕ್ಕೆ ನೆನಪಾಗೋದು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುವ ವಿಚಾರಗಳು. ಅದರಲ್ಲಿ ಸೋಷಿಯಲ್ ಮೀಡಿಯಾಗಳು ಪ್ರಮುಖ ಸ್ಥಾನದಲ್ಲಿವೆ. 

ಟ್ವಿಟರ್‌ಗೆ ಗುಡ್ ಬೈ ಹೇಳಿದ ಕರಣ್ ಜೋಹರ್‌
ಇತ್ತೀಚಿನ ವರ್ಷಗಳಲ್ಲಿ ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಂ, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಗಣನೀಯವಾಗಿ ಹೆಚ್ಚಿದೆ. ಸೋಷಿಯಲ್ ಮೀಡಿಯಾದಲ್ಲಿ ಅಪರಿಚಿತ ಭೇಟಿ, ಹೈ ಕ್ಲಾಸ್ ಲೈಫ್‌ಸ್ಟೈಲ್‌ನ್ನು ತೋರಿಸುವ ವೀಡಿಯೋಗಳು ಜನರಲ್ಲಿ ತಮ್ಮ ಜೀವನಶೈಲಿಗೆ ಕಂಪೇರ್ ಮಾಡಿಕೊಳ್ಳುತ್ತಾ ಖಿನ್ನತೆಗೆ ಕಾರಣವಾಗ್ತಿದೆ. ಸಾಮಾಜಿಕ ಜಾಲ ತಾಣಗಳ ಬಳಕೆಯ ನಂತರ ಅಪರಿಚಿತರು ಮಾಡುವ ಕಾಮೆಂಟ್‌ಗಳ ಬಗ್ಗೆಯೂ ಜನ ತಲೆಕೆಡಿಸಿಕೊಂಡು ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿಯೇ ಸೋಷಿಯಲ್ ಮೀಡಿಯಾಗಳಿಂದ ನೆಮ್ಮದಿ ಹಾಳಾಗ್ತಿದೆ ಅನ್ನೋದು ಹೆಚ್ಚು ಪ್ರಚಲಿತದಲ್ಲಿದೆ. ಈ ಮಧ್ಯೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್‌ ಜೋಹರ್‌, ಇದೇ ಕಾರಣಕ್ಕೆ ಟ್ವಿಟರ್‌ಗೆ ಗುಡ್ ಬೈ ಹೇಳಿದ್ದಾರೆ. 

Latest Videos

World Mental Health Day: ಆತಂಕವೇ ಬೇರೆ, ಒತ್ತಡವೇ ಬೇರೆ, ನಿಭಾಯಿಸೋದು ಹೇಗೆ?

ಸಕಾರಾತ್ಮಕ ಚಿಂತನೆಗಳಿಗೆ ಹೆಚ್ಚು ಸಮಯವನ್ನು ಮೀಸಲು ಇಡಲು ನಿರ್ಧಾರ
ಕರಣ್‌ ಜೋಹರ್‌ ಸಿನಿಮಾ ಸೇರಿ ಹಲವು ವಿಚಾರಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಒಮ್ಮೊಮ್ಮೆ ಏನೂ ಮಾಡದಿದ್ದರೂ, ಕೆಲವು ವಿವಾದಗಳಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿರುತ್ತದೆ. ಟ್ವಿಟರ್‌ನಲ್ಲಿ ಆಗಾಗ ಅವರ ಹೆಸರು ಟ್ರೆಂಡಿಂಗ್‌ನಲ್ಲಿರುತ್ತವೆ. ಆದರೆ, ಸದ್ಯ ಕರಣ್ ಜೋಹರ್ ಇದೆಲ್ಲದರಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಟ್ವಿಟರ್‌ಗೆ ಗುಡ್‌ ಬೈ ಹೇಳಿದ್ದಾರೆ. ಕರಣ್ ಜೋಹರ್ ಟ್ವಿಟರ್‌ಗೆ ಗುಡ್‌ಬೈ ಹೇಳುವುದಕ್ಕೂ ಮೊದಲು, ಕೊನೆಯ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು ತಮ್ಮ ಪ್ರೀತಿಪಾತ್ರರಿಗೆ ವಿದಾಯ ಹೇಳಿದ್ದಾರೆ. 'ಸಕಾರಾತ್ಮಕ ಚಿಂತನೆಗಳಿಗೆ ಹೆಚ್ಚು ಸಮಯವನ್ನು ಮೀಸಲು ಇಡಬೇಕೆಂದು ನಿರ್ಧರಿಸಿದ್ದೇನೆ. ಹೀಗಾಗಿ ಈ ಮೂಲಕ ಟ್ವಿಟರ್‌ಗೆ ಗುಡ್‌ಬೈ ಹೇಳುತ್ತಿದ್ದೇನೆ' ಎಂದು ಕೊನೆಯದಾಗಿ ಟ್ವೀಟ್ ಮಾಡಿದ್ದಾರೆ. ಮತ್ತಷ್ಟು ಪಾಸಿಟಿವ್‌ ಎನರ್ಜಿ ಪಡೆಯುವುದರ ಸಲುವಾಗಿ, ನಾನು ಟ್ವಿಟರ್‌ ತ್ಯಜಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ಇದು ನನ್ನ ಮೊದಲ ಹೆಜ್ಜೆ. ಗುಡ್‌ ಬೈ ಟ್ವಿಟರ್‌!" ಎಂದು ಹೇಳಿ ಟ್ವಿಟರ್‌ನಿಂದ ಹಿಂದೆ ಸರಿದಿದ್ದಾರೆ.

ಕರಣ್‌ ಹೀಗೆ ಟ್ವಿಟರ್‌ ತ್ಯಜಿಸುತ್ತಿದ್ದಂತೆ, ನೆಟ್ಟಿಗರು ಗೊಂದಲಕ್ಕೀಡಾಗಿದ್ದಾರೆ. ಸದ್ಯಕ್ಕೆ ಯಾವುದೇ ಕಾಂಟ್ರವರ್ಸಿ ಆಗಿಲ್ಲ. ಆದರೂ, ಕರಣ್‌ ಟ್ವಿಟರ್‌ನಿಂದ ಹಿಂದೆ ಸರಿದಿದ್ದೇಕೆ? ಎಂದು ಕಮೆಂಟ್‌ ಮಾಡುತ್ತಿದ್ದಾರೆ.ಕೆಲವೊಬ್ಬರು 'ಇಡೀ ಭಾರತದಲ್ಲಿ ಶಾಂತಿ ಮತ್ತು ಸಂತೋಷ ಬೇಕಿದ್ದರೆ, ಇಂಟರ್‌ನೆಟ್‌ನಿಂದ ಕಾಫಿ ವಿತ್ ಕರಣ್‌ ಅನ್ನೋ ಕಸವನ್ನೂ ತೆಗೆದುಹಾಕಿ" ಎಂದಿದ್ದಾರೆ. ಮತ್ತೊಬ್ಬರು 'ಈ ಖಾತೆಯನ್ನು ಕ್ಲೋಸ್‌ ಮಾಡಿ, ಯಾರಿಗೂ ಗೊತ್ತಾಗದ ಅಜ್ಞಾತ ಖಾತೆಯನ್ನು ಬಳಸುತ್ತಾರೆ' ಎಂದು ಬರೆದಿದ್ದಾರೆ. 

World Mental Health Day: ಮಾನಸಿಕ ಚಿಕಿತ್ಸೆ ಪಡೆಯಲು ಹಿಂಜರಿಕೆ ಏಕೆ..?

ಬ್ರಹ್ಮಾಸ್ತ್ರ ಚಿತ್ರದ ಕಲೆಕ್ಷನ್ ಬಗ್ಗೆ ನೆಗೆಟಿವಿಟಿ 
ಕರಣ್​ ಜೋಹರ್​ ನಿರ್ಮಾಣ ಮಾಡಿದ 'ಬ್ರಹ್ಮಾಸ್ತ್ರ' ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಉತ್ತಮ ಆದಾಯ ಗಳಿಸಿದೆ. ಕೆಲವರು ಈ ಚಿತ್ರದ ಬಾಕ್ಸ್​ ಆಫೀಸ್​ ಅಸಲೀಯತ್ತನ್ನು ಪ್ರಶ್ನೆ ಮಾಡಿದ್ದರು. ಇದರಿಂದ ಒಂದು ಬಗೆಯ ನೆಗೆಟಿವಿಟಿ ಹಬ್ಬಿದೆ. ಅದು ಕರಣ್​ ಜೋಹರ್​ ಅವರಿಗೆ ಹೆಚ್ಚು ಬೇಸರ ಉಂಟು ಮಾಡಿದಂತಿದೆ. 'ನಾವು ವಿಮರ್ಶೆಯನ್ನು ಸ್ವೀಕರಿಸಲು ರೆಡಿ ಇದ್ದೇನೆ. ಆದರೆ ನೆಗೆಟಿವಿಟಿ ಸ್ವೀಕರಿಸುವುದು ಕಷ್ಟ' ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಅದರ ಬೆನ್ನಲೇ ಅವರು ಟ್ವಿಟರ್​ನಿಂದ ಹೊರನಡೆದಿರುವುದು ಕುತೂಹಲಕ್ಕೆ ಕಾರಣ ಆಗಿದೆ. ಟ್ವಿಟರ್‌ ತ್ಯಜಿಸಿರುವ ಕರಣ್, ಇನ್‌ಸ್ಟಾಗ್ರಾಂನಲ್ಲಿ ಇನ್ನೂ ಸಕ್ರಿಯರಿದ್ದಾರೆ. ಇನ್‌ಸ್ಟಾಗ್ರಾಂನಲ್ಲೇ ತಮ್ಮ ಸಿನಿಮಾ ಮತ್ತು ಇತರ ವಿಚಾರಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

'ಖಿನ್ನತೆ'ಯಂತಹ ಅಮೇರಿಕನ್ ಪದ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ 
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಈ ಹಿಂದೆ ಮಾನಸಿಕ ಒತ್ತಡ, ಖಿನ್ನತೆಯ ಕುರಿತಾಗಿ ಮಾತನಾಡಿದ್ದರು. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕಪಿಲ್ ದೇವ್ ಅವರು ಒತ್ತಡ’ ಮತ್ತು ‘ಖಿನ್ನತೆ’ ‘ಅಮೆರಿಕನ್ ಪದಗಳು’ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ ಕಪಿಲ್ ದೇವ್, ಐಪಿಎಲ್‌ನಲ್ಲಿ ಆಡಲು ಆಟಗಾರರ ಮೇಲೆ ಸಾಕಷ್ಟು ಒತ್ತಡವಿದೆ ಎಂದು ನಾನು ಟಿವಿಯಲ್ಲಿ ಸಾಕಷ್ಟು ಬಾರಿ ಕೇಳುತ್ತೇನೆ. ಆಟಗಾರನಿಗೆ ಉತ್ಸಾಹವಿದ್ದರೆ ಒತ್ತಡ ಇರುವುದಿಲ್ಲ. ಖಿನ್ನತೆಯಂತಹ ಈ ಅಮೇರಿಕನ್ ಪದಗಳನ್ನು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.ನಾವು ಆಟವನ್ನು ಆನಂದಿಸುವ ಕಾರಣ ನಾವು ಆಡುತ್ತೇವೆ ಮತ್ತು ಆಟವನ್ನು ಆನಂದಿಸುವಾಗ ಯಾವುದೇ ಒತ್ತಡ ಇರಬಾರದು ಎಂದಿದ್ದಾರೆ. ಮಾನಸಿಕವಾಗಿ ನೆಮ್ಮದಿಯಾಗಿರಲು ನೆಗೆಟಿವ್ ಯೋಚನೆಗಳನ್ನು ಪಾಸಿಟಿವ್‌ಗೆ ಬದಲಾಯಿಸಿ ಎಂದು ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್ ಹೇಳಿದ್ದಾರೆ. 

click me!