ಧ್ಯಾನದಿಂದ ಆರೋಗ್ಯ, ನೆಮ್ಮದಿ: ಇಂದು ವಿಶ್ವ ಧ್ಯಾನ ದಿನ

By Suvarna NewsFirst Published May 23, 2020, 4:05 PM IST
Highlights

ಧ್ಯಾನಕ್ಕೊಂದು ದಿನ ಇಂದು. ಆದರೆ ಪ್ರತಿದಿನವೂ ಧ್ಯಾನದ ದಿನವಾದರೆ ಅದರಿಂದ ಮನುಷ್ಯನ ಆರೋಗ್ಯಕ್ಕೂ ಮನಶ್ಶಾಂತಿಗೂ ಬಹಳ ಪ್ರಯೋಜನಗಳಾಗುತ್ತವೆ. ಭಾರತದ ದೊಡ್ಡ ದೊಡ್ಡ ಯೋಗಿಗಳು, ಸನ್ಯಾಸಿಗಳು, ಗುರುಗಳು, ಹಿಮಾಲಯದಲ್ಲಿದ್ದ ಗುರೂಜಿಗಳೆಲ್ಲ ಇದನ್ನೇ ಪ್ರತಿಪಾದಿಸಿದ್ದಾರೆ. ಧ್ಯಾನ ಹಾಗೂ ಯೋಗದ ಬಲದಿಂದ ಎಂತೆಂಥದೋ ವಿಚಿತ್ರ ಶಕ್ತಿಗಳನ್ನು ಕೈವಶ ಮಾಡಿಕೊಂಡವರಿದ್ದಾರೆ.

ಇಂದು ವಿಶ್ವ ಧ್ಯಾನ ದಿನವಂತೆ. ಧ್ಯಾನದಿಂದ ಆರೋಗ್ಯ, ಧ್ಯಾನದಿಂದ ನೆಮ್ಮದಿ ಖಚಿತ ಎಂಬುದು ನಮ್ಮ ಹಿರಿಯರು ಕಂಡುಕೊಂಡ ಸತ್ಯ.

ಪ್ರತಿದಿನವೂ ಧ್ಯಾನದ ದಿನವಾದರೆ ಅದರಿಂದ ಮನುಷ್ಯನ ಆರೋಗ್ಯಕ್ಕೂ ಮನಶ್ಶಾಂತಿಗೂ ಬಹಳ ಪ್ರಯೋಜನಗಳಾಗುತ್ತವೆ. ಭಾರತದ ದೊಡ್ಡ ದೊಡ್ಡ ಯೋಗಿಗಳು, ಸನ್ಯಾಸಿಗಳು, ಗುರುಗಳು, ಹಿಮಾಲಯದಲ್ಲಿದ್ದ ಗುರೂಜಿಗಳೆಲ್ಲ ಇದನ್ನೇ ಪ್ರತಿಪಾದಿಸಿದ್ದಾರೆ. ಧ್ಯಾನ ಹಾಗೂ ಯೋಗದ ಬಲದಿಂದ ಎಂತೆಂಥದೋ ವಿಚಿತ್ರ ಶಕ್ತಿಗಳನ್ನು ಕೈವಶ ಮಾಡಿಕೊಂಡವರಿದ್ದಾರೆ.ಸ್ವಾಮಿ ರಾಮ ಅವರು ತಮ್ಮ 'ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ' ಎಂಬ ಪುಸ್ತಕದಲ್ಲಿ ಒಂದು ಘಟನೆಯನ್ನು ಉಲ್ಲೇಖಿಸುತ್ತಾರೆ. ಅವರ ಗುರುಗಳಿಗೆ ಪರಿಚಿತರಾದ ಯೋಗಿಯೊಬ್ಬರು ಇದ್ದಕ್ಕಿದ್ದಂತೆ ಧ್ಯಾನಮಗ್ನರಾದರು. ಎಷ್ಟೋ ಗಂಟೆಗಳ ಕಾಲ ಹಾಗೇ ಇದ್ದರಂತೆ. ನಂತರ ಎಚ್ಚರಕ್ಕೆ ಬಂದರು. ಶಿಷ್ಯರು ಕೇಳಿದಾಗ, ವಾರಣಾಸಿಯಲ್ಲಿದ್ದ ತಮ್ಮ ಭಕ್ತನೊಬ್ಬನನ್ನು ಅಪಾಯದಿಂದ ಪಾರು ಮಾಡಲು ಹೋಗಿದ್ದೆ ಅಂದರಂತೆ. ವಿಚಾರಿಸಿದರೆ ನಿಜವಾಗಿಯೂ ಆತ ಸ್ನಾನಕ್ಕೆ ಇಳಿದವನು ಗಂಗಾನದಿಯಲ್ಲಿ ಮುಳುಗಿ ಹೋಗುವವನಿದ್ದ. ಇನ್ನೇನು‌ ಮುಳುಗಬೇಕು ಅನ್ನುವಷ್ಟರಲ್ಲಿ ಬಲವಾದ ಶಕ್ತಿಯೊಂದು ಆತನನ್ನು ದಂಡೆಗೆ ದೂಡಿ ಹಾಕಿತಂತೆ. ಆ ಕ್ಷಣದಲ್ಲಿ ಗುರು ಗಾಢವಾದ ಧ್ಯಾನನಿರತರಾಗಿದ್ದರು. ಧ್ಯಾನದ ಮಹೋನ್ನತ ಶಕ್ತಿಯನ್ನು ಸಾಧಿಸಿದವರು ಹೀಗೆ ಲೋಕ ಲೋಕಾಂತರವನ್ನು ತಾವಿದ್ದಲ್ಲೇ ಸುತ್ತಬಲ್ಲರು ಎನ್ನಲಾಗುತ್ತದೆ.

ಶ್ರೀ ಶಂಕರಾಚಾರ್ಯರ ಬಗ್ಗೆಯೂ ಒಂದು ಕತೆಯಿದೆ. ಅವರು, ಸಂಸಾರಿಯ ಜೀವನದ ಬಗ್ಗೆ ಅರಿಯುವ ಸಮಸ್ಯೆ ಬಂದಾಗ, ತಮ್ಮ ದೇಹವನ್ನು ನೋಡಿಕೊಳ್ಳಲು ಶಿಷ್ಯರಿಗೆ ಹೇಳಿ, ಆಗ ತಾನೆ ಮೃತಪಟ್ಟಿದ್ದ ರಾಜನ ಶರೀರವನ್ನು ಪರಕಾಯ ಪ್ರವೇಶದ ಮೂಲಕ ಆತ್ಮರೂಪಿಯಾಗಿ ಹೊಕ್ಕರಂತೆ. ಕೆಲವು ದಿನಗಳ ಕಾಲ ಸಂಸಾರಿಯಾಗಿ ಭೋಗ ಅನುಭವಿಸಿ, ನಂತರ ತಮ್ಮ ದೇಹಕ್ಕೆ ಹಿಂದಿರುಗಿದರಂತೆ. ಇದೂ ಯೋಗ- ಧ್ಯಾನದ ಮಹೋನ್ನತ ಸಾಧನೆಯೇ.ನಾವು ಅಲ್ಪ ಮಾನವರು ಎನ್ನುವುದು ನಮ್ಮ ಚಿಂತನೆ. ಆದರೆ ಧ್ಯಾನದ ಮೂಲಕ ನಾವು ಯೋಗದ ಮಹಾ ಎತ್ತರಕ್ಕೆ ಏರಬಹುದು ಅನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಆಧ್ಯಾತ್ಮದ ಅಣಿಮಾದಿ ಅಷ್ಟ ಸಿದ್ಧಿಗಳು ಸಾಧ್ಯವಾಗುವುದು ಆಳ ಧ್ಯಾನದ ಮೂಲಕವೇ. ಯೋಗಿಗಳಿಗೆ ಇದು ಸಾಧ್ಯ.

Fact Check| ಡಾ. ದೇವಿ ಶೆಟ್ಟಿ ನೀಡಿದ 22 ಸಲಹೆಗಳು!

- ನಾವು ಧ್ಯಾನವನ್ನು ವೈಜ್ಞಾನಿಕವಾಗಿ ಮಾಡುವ ಮೂಲಕ ಮನಸ್ಸಿನ ನೆಮ್ಮದಿ ಶಾಂತಿಗಳನ್ನು ಕಂಡುಕೊಳ್ಳಬಹುದು.
- ಧ್ಯಾನದ ಅಭ್ಯಾಸದಿಂದ ಕಚೇರಿ ಕೆಲಸದಲ್ಲಿ ಹೆಚ್ಚಿನ ಏಕಾಗ್ರತೆ ಸಾಧಿಸಬಹುದು. ಕ್ರಿಯಾಶೀಲತೆ ಉತ್ತಮಗೊಳ್ಳುತ್ತದೆ.
- ದೇಹದ ಚುರುಕುತನ ಹೆಚ್ಚುತ್ತದೆ. ಚಟುವಟಿಕೆ ಹೆಚ್ಚುವುದರಿಂದ ದೇಹ ಆರೋಗ್ಯಕರವಾಗಿರುತ್ತದೆ. ಯಾವುದೇ ಕಾಯಿಲೆ ಬಾಧಿಸುವುದಿಲ್ಲ.
- ಒತ್ತಡ ಅಥವಾ ಸ್ಟ್ರೆಸ್ ಇಂದಿನ ಸಾಮಾನ್ಯ ಸಮಸ್ಯೆ. ಒತ್ತಡ ಮಾಡಿಕೊಳ್ಳುವುದು ಮನಸ್ಸು. ಇದು ದೇಹದ ಮೇಲೆ ಹಾನಿ ಮಾಡುತ್ತದೆ. ಧ್ಯಾನದಿಂದ ಒತ್ತಡ ಕಡಿಮೆ ಆಗುತ್ತದೆ.
- ಧ್ಯಾನದಿಂದ ಮನಸ್ಸು ಶಾಂತವಾಗುತ್ತದೆ. ಸಂಬಂಧಗಳ ಉತ್ತಮ, ಪ್ರೀತಿಯುತ ನಿರ್ವಹಣೆ ಸಾಧ್ಯವಾಗುತ್ತದೆ. ಎಲ್ಲರನ್ನೂ ಪ್ರೀತಿಯಿಂದ ನೋಡುವುದು ಸಾಧ್ಯವಾಗುತ್ತದೆ.

ನಮ್ಮ ಹಿತ್ತಲ ಗಿಡದಲ್ಲೇ ಇದೆ ಕೊರೋನಾಗೆ ಮದ್ದು! 

ಧ್ಯಾನ ಮಾಡುವುದು ಹೇಗೆ?
-ಮುಂಜಾನೆ ಅಥವಾ ಸಂಜೆ ಧ್ಯಾನಕ್ಕೆ ಪ್ರಶಸ್ತ
- ಕಚೇರಿ ಅಥವಾ ಮನೆ ಕೆಲಸದ ನಡುವೆ ಐದೋ ಹತ್ತೋ ನಿಮಿಷ ಬಿಡುವು ಸಿಕ್ಕಾಗಲೂ ಮಾಡಬಹುದು.
- ಆರಾಮಾಗಿ ಕುಳಿತುಕೊಂಡು, ಸರಳವಾಗಿ ಉಸಿರಾಡಿ.
-ಉಸಿರಿನ ಮೇಲೆ ಗಮನ ಕೇಂದ್ರೀಕರಿಸಿ.

ಆತ್ಮನಿರ್ಭರತೆ ಸಾಧಿಸೋದು ಹೇಗೆ? 

- ಉಸಿರನ್ನು ಹತ್ತಿಕ್ಕಬೇಡಿ. ಅದರ ಚಲನೆಯನ್ನು ಗಮನಿಸಿ ಅಷ್ಟೇ.
- ದೇಹದಲ್ಲಿ ಆಗುತ್ತಿರುವ ಉಸಿರಾಟದ ಚಲನೆಗಳನ್ನು ಗಮನಿಸಿ. 

ಇದು ಧ್ಯಾನದ ಆರಂಭಿಕ ಹಂತ. ಮುಂದುವರಿದಂತೆ ಇದರ ಜಟಿಲ ಸ್ವರೂಪಗಳು ಸಾಧಕನಿಗೆ ಕರಗತವಾಗುತ್ತ ಹೋಗುತ್ತವೆ. ಆತ ಸಾಮಾನ್ಯರು ಊಹಿಸಲಾಗದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ.

click me!