ಆತ್ಮನಿರ್ಭರತೆ ಸಾಧಿಸೋದು ಹೇಗೆ? ಆತ್ಮನಿರ್ಭರತೆಯತ್ತ ಕರೆದೊಯ್ಯುವ ಸೂತ್ರಗಳು!

By Kannadaprabha NewsFirst Published May 19, 2020, 9:08 AM IST
Highlights

‘ಅಮ್ಮಾ, ಇವತ್ಯಾವ ಆಟ ಆಡೂದು?’ ಬೆಳ್ಳಂಬೆಳಗ್ಗೆ ಹಾಸಿಗೆಯಿಂದ ಏಳುತ್ತಲೇ ಕಣ್ಣುಜ್ಜಿಕೊಂಡು ಬಂದ ಮಗುವಿಗೆ ತನ್ನ ದೈನಂದಿನ ಕೆಲಸದ ತರಾತುರಿಯಲ್ಲಿರುವ ಅಮ್ಮ ಏನು ಹೇಳಿಯಾಳು.. ‘ನೀನೀಗ ಬ್ರೆಶ್‌ ಮಾಡಿ ಬಾ, ನಿಂಗೊಂದು ಕತೆ ಹೇಳ್ತೀನಿ. ಆಮೇಲೆ ಆಟ’

ಅಮ್ಮನಿಂದ ಕತೆಯ ಆಶ್ವಾಸನೆ ಸಿಕ್ಕಿದ್ದೇ ಮಗು ಹಲ್ಲುಜ್ಜಲು ಓಡಿತು.

‘ಒಂದೂರಲ್ಲಿ ಒಂದು ಜಾಣ ಹಕ್ಕಿ ಇತ್ತು. ಒಮ್ಮೆ ಅದು ಒಬ್ಬ ಬೇಟೆಗಾರನ ಕಣ್ಣಿಗೆ ಬಿತ್ತು. ಆತ ಆದಕ್ಕೆ ಗುರಿಯಿಟ್ಟ. ಹಕ್ಕಿ ತಪ್ಪಿಸಿಕೊಂಡು ಹೋಯ್ತು. ಅವನ ಯಾವ ಗುರಿಯೂ ಹಕ್ಕಿಯನ್ನು ಉರುಳಿಸಲಾಗಲಿಲ್ಲ. ಮೂರ್ಖ ಬೇಟೆಗಾರನಿಗೆ ಒಂದು ಐಡಿಯಾ ಬಂತು. ಮರ ಇದ್ದರೆ ತಾನೇ ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಹಕ್ಕಿ ತಪ್ಪಿಸಿಕೊಳ್ಳೋದು,

ಮರವನ್ನೇ ಕಡಿದುಬಿಡೋಣ ಅಂದುಕೊಂಡ. ಮರುದಿನ ಬೆಳಗ್ಗೆಯೇ ಆತ ಮರ ಉರುಳಿಸಲು ಹತ್ಯಾರ ತೆಗೆದುಕೊಂಡು ಹೊರಟ. ಆಗ ಆ ಹಕ್ಕಿಗೆ ಮನುಷ್ಯನ ಯೋಚನೆ ಗೊತ್ತಾಯ್ತು. ಅದು ಮನುಷ್ಯನ ಭಾಷೆಯಲ್ಲೇ ಮಾತಾಡಿ, ಅಲ್ಲೋ ಮಾರಾಯ, ಈ ಮರ ಇಲ್ಲದಿದ್ದರೆ ನಾನಿಲ್ಲ ಅಂದುಕೊಂಡಿದ್ದೀಯಲ್ಲಾ, ನಿನ್ನ ಮೂರ್ಖತನಕ್ಕೆ ಏನು ಹೇಳಲಿ. ನಾನು ನಂಬಿರೋದು ಮರವನ್ನಲ್ಲ, ನನ್ನ ರೆಕ್ಕೆಗಳನ್ನು’ ಅಂತ ಅಂದು ಹಾರಿ ಹೋಯ್ತು.

ಕೊರೋನಾ ವಾರಿಯರ್ಸ್ ಜೊತೆ ಭಾರತದ 10 ವರ್ಷದ ಬಾಲಕಿಗೆ ಟ್ರಂಪ್ ಸನ್ಮಾನ!

ಚಿಕ್ಕ ಕತೆಯನ್ನು ಅಮ್ಮ ಮುಗಿಸಿದಳು. ಮಗು ಮಿಕಿ ಮಿಕಿ ಅಮ್ಮನ ಮುಖವನ್ನೇ ನೋಡಿತು. ಪುಟಾಣಿಗೆ ಅವಳ ತಟ್ಟೆತುಂಬ ತಿಂಡಿ ತಂದಿಟ್ಟು ಅಮ್ಮ ಹೇಳಿದಳು, ‘ಪಾಪೂ ಹಕ್ಕಿ ಥರ ನೀನಾಗಬೇಕು, ನಿನ್ನಲ್ಲಿ ನಿನಗೆ ನಂಬಿಕೆ ಇರಬೇಕು. ನಿನ್ನಷ್ಟಕ್ಕೇ ನೀನು ಆಟ ಆಡಬೇಕು, ನಿನ್ನ ಊಟ ನೀನೇ ಮಾಡಲು ಕಲೀಬೇಕು, ಚೂರು ದೊಡ್ಡವಳಾದ್ಮೇಲೆ ನಿನಗೆ ನಿನ್ನ ಊಟ ತಯಾರಿಸೋದನ್ನೂ ಹೇಳಿ ಕೊಡ್ತೇನೆ, ಆಮೇಲೆ ನಿನ್ನ ಊಟ ಸಂಪಾದಿಸೋದನ್ನೂ..’

ಆತ್ಮ ನಿರ್ಭರ ಅನ್ನೋದು ಈ ಅಮ್ಮನ ಮಾತಿನಷ್ಟೇ ಸರಳ, ಅಷ್ಟೇ ಸಂಕೀರ್ಣ.

ಚಾಣಾಕ್ಯನೆಂಬ ಸ್ವತಂತ್ರ

ನಾವೀಗ ಚಾಣಾಕ್ಯನನ್ನು ನೆನೆಸಿಕೊಳ್ಳಬೇಕು. ಆತ ಸ್ವಾಭಿಮಾನ ಮತ್ತು ಸ್ವತಂತ್ರತೆಯ ಸಂಕೇತ. ಈತನ ‘ಅರ್ಥಶಾಸ್ತ್ರ’ ಕೃತಿ ಸಾರ್ವಕಾಲಿಕ. ನಿರ್ಗತಿಕನಂತಿದ್ದ ಚಂದ್ರಗುಪ್ತನ ಮೂಲಕ ಮೌರ್ಯ ಸಾಮ್ರಾಜ್ಯ ಕಟ್ಟಿಬೆಳೆಸಿದವ ಚಾಣಾಕ್ಯ. ಮನಸ್ಸು ಮಾಡಿದರೆ ಈತನೇ ಅಧಿಕಾರ ಸೂತ್ರ ಹಿಡಿದು ಸಂಪತ್ತನ್ನು ಅನುಭವಿಸಬಹುದಿತ್ತು. ಆದರೆ ತಾನೆಲ್ಲೂ ಅಧಿಕಾರಕ್ಕೆ, ಅಂತಸ್ತಿಗೆ ಆಸೆ ಪಡಲಿಲ್ಲ. ಚಂದ್ರಗುಪ್ತನಿಗೂ, ಅವನ ಮಗ ಬಿಂದೂಸಾರನಿಗೂ ಮಂತ್ರಿಯಾಗಿದ್ದ. ಯಾವಾಗ ಬಿಂದೂಸಾರ ಚಾಣಾಕ್ಯನನ್ನು ಅವಮಾನಿಸಿದನೋ ಆಗ ರಾಜ್ಯಬಿಟ್ಟು ಕಾಡಿಗೆ ಹೋಗಿ ಅಲ್ಲಿ ಸರಳವಾಗಿ ಬದುಕುತ್ತಿದ್ದ. ಅವನಿಗೆ ರಾಜ್ಯಬೇಡ, ಅಧಿಕಾರವೂ ಬೇಡ. ಎಂದೋ ಮಾಡಿದ್ದ ಪ್ರತಿಜ್ಞೆ ಈಡೇರಿತ್ತು. ಈಗ ಆತ ಸಂಪೂರ್ಣ ಸ್ವತಂತ್ರ. ಮುಂದೆ ಸುಬುದ್ಧಿ ಎಂಬ ವಂಚಕ ಈತನನ್ನು ಕೊಲೆ ಮಾಡಿದ. ಮನಸ್ಸು ಮಾಡಿದ್ದರೆ ಚಾಣಾಕ್ಷ ಇದರಿಂದಲೂ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಆತ ಆ ಹೊತ್ತಿಗೆ ಆತ ಆತ್ಮಜ್ಞಾನಿಯೂ ಆಗಿದ್ದ, ಬಟ್ಟೆಯಂಥಾ ದೇಹ ಎಂದೋ ಒಂದು ದಿನ ಕಳಚಿಕೊಳ್ಳಲೇ ಬೇಕು, ಆತ್ಮವನ್ನು ಯಾರಿಂದಲೂ ಕೊಲ್ಲಲಾಗದು ಎಂಬ ಸತ್ಯವನ್ನು ಅಕ್ಷರಶಃ ಕಂಡುಕೊಂಡಿದ್ದ.

ಕರ್ನಾಟಕದಲ್ಲಿ ಯಾಕೆ ಚುನಾವಣೆಗೆ ನಿಲ್ತಿಲ್ಲ ಅಣ್ಣಾಮಲೈ?

ಆತ್ಮ ನಿರ್ಭರತೆ ಅನ್ನೋದು ಬೇಡೋದು ಇಂಥಾ ಸ್ವಾತಂತ್ರ್ಯ ಮತ್ತು ಸ್ವಾಭಿಮಾನವನ್ನು.

*

ಆತ್ಮನಿರ್ಭರತೆಯತ್ತ ಕರೆದೊಯ್ಯುವ ಸೂತ್ರಗಳು

ಜ್ಞಾನ

ಸಮಯವೀಗ ಸಾಕಷ್ಟಿದೆ. ನೀವು ಜ್ಞಾನವಂತರಾದಷ್ಟೂನಿಮ್ಮ ಸ್ವತಂತ್ರ್ಯ ಬದುಕಿಗೆ ಆತಂಕ ಕಡಿಮೆ. ಯಾವುದೇ ವಿಷಯದಲ್ಲಿ ಹೆಚ್ಚೆಚ್ಚು ಜ್ಞಾನವಂತರಾಗಲು, ಪಾರಮ್ಯ ಸಾಧಿಸಲು ಪ್ರಯತ್ನಿಸಿ. ಕೆಲಸ ಹೋದರೂ ನೀವು ಸ್ವತಂತ್ರವಾಗಿ ಏನಾದರೂ ಮಾಡಿ ಬದುಕಬಲ್ಲಿರಿ.

ಸತ್ಯ

ಸಮಯ ತುಂಬ ದುರ್ಭರವಾಗಿದೆ. ಈ ಟೈಮ್‌ನಲ್ಲಿ ಸತ್ಯಕ್ಕೆ ಬೆಲೆಯಿಲ್ಲ ಅಂತನಿಸಬಹುದು. ಆದರೆ ಸುಳ್ಳು ನಿಮ್ಮನ್ನು ಮೇಲೇಳಲು ಬಿಡಲ್ಲ. ಮಾಡೋ ಕೆಲಸ, ಆಡೋ ನುಡಿ, ಬದುಕುವ ಕ್ರಮ ಎಲ್ಲವೂ ಸತ್ಯಕ್ಕೆ ಹತ್ತಿರವಾಗಿರಲಿ.

ಸ್ವಾವಲಂಬನೆ

ನೀವು ಆತ್ಮವಂಚನೆ ಮಾಡದೇ ಬದುಕಬೇಕು ಅಂದರೆ ಸ್ವಾವಲಂಬನೆ ಅತ್ಯಗತ್ಯ. ಸತ್ಯ, ಜ್ಞಾನ ಜೊತೆಗಿದ್ದರೆ ಸ್ವಾವಲಂಬನೆ ಕಷ್ಟವಲ್ಲ. ಸ್ವಾವಲಂಬಿ ಬದುಕು ಸ್ವಾಭಿಮಾನದಿಂದ ಬದುಕೋದನ್ನೂ ಕಲಿಸಿಕೊಡುತ್ತದೆ.

click me!