Organic Food: ಸಾವಯವ ಆಹಾರ ಖರೀದಿಸೋ ಮುನ್ನ ಈ ಎಚ್ಚರ!

By Suvarna NewsFirst Published Dec 26, 2022, 5:18 PM IST
Highlights

ಸಾವಯವ ಆಹಾರ ವಸ್ತುಗಳನ್ನು ಸೇವಿಸುವುದು ಇತ್ತೀಚಿನ ಟ್ರೆಂಡ್. ಅವು ಆರೋಗ್ಯಕ್ಕೆ ಉತ್ತಮ ಎನ್ನುವುದೇನೋ ನಿಜ. ಆದರೆ, ಸೂಪರ್ ಮಾರುಕಟ್ಟೆಗಳಲ್ಲಿ ದೊರೆಯುವ ಸಾವಯವ ಹಣ್ಣು, ತರಕಾರಿಗಳಿಂದ ಆರೋಗ್ಯಕ್ಕೆ ಲಾಭವಾಗುವುದು ಕಡಿಮೆ. ಬಾಡಿದ, ಸರಿಯಾಗಿ ಶೇಖರಣೆ ಮಾಡಿಡದ ಸಾವಯವ ಹಣ್ಣು ಮತ್ತು ತರಕಾರಿಗಳು ಪೌಷ್ಟಿಕಾಂಶ ಕಳೆದುಕೊಳ್ಳುವುದು ಸಾಮಾನ್ಯ.  
 

ಆರ್ಗ್ಯಾನಿಕ್ ಶಬ್ದ ಇಂದು ಎಲ್ಲರ ಗಮನ ಸೆಳೆಯುತ್ತಿದೆ. ಆರ್ಗ್ಯಾನಿಕ್ ಆಹಾರ ವಸ್ತುಗಳನ್ನು ಖರೀದಿ ಮಾಡುವ ಅಭ್ಯಾಸ ಸಾಕಷ್ಟು ಜನರಲ್ಲಿ ಮೂಡಿದೆ. ಆರ್ಗ್ಯಾನಿಕ್ ಎನ್ನುವ ಹೆಸರು ಕೇಳಿದರೆ ಸಾಕು, ಹಿಂದೆ ಮುಂದೆ ನೋಡದೆಯೂ ಖರೀದಿ ಮಾಡುವವರಿದ್ದಾರೆ. ರಾಸಾಯನಿಕ ಮುಕ್ತವಾಗಿದೆ ಎಂದು ನಾವು ಭಾವಿಸುವ ಸಾವಯವ ಆಹಾರ ವಸ್ತುಗಳಿಗೆ ಅಂಗಡಿಗಳು, ಸೂಪರ್ ಮಾರ್ಕೆಟ್ ಎಲ್ಲೇ ಆದರೂ ಈಗ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಸಾವಯವ ವಿಭಾಗದಿಂದ ಯಾವುದೇ ವಸ್ತು ಖರೀದಿಸಿದರೂ ಅದು ಸುರಕ್ಷಿತವಾಗಿದೆ, ಆರೋಗ್ಯಕ್ಕೆ ಹಿತಕಾರಿ ಎಂದು ಸಾಮಾನ್ಯವಾಗಿ ಎಲ್ಲರೂ ಭಾವಿಸುತ್ತೇವೆ. ತೋಟದಿಂದ ಬಂದ ತರಕಾರಿ, ಹಣ್ಣುಗಳು ಶುದ್ಧವಾಗಿರುತ್ತವೆ, ಸ್ವಚ್ಛವಾಗಿರುತ್ತವೆ ಹಾಗೂ ಯಾವುದೇ ರೀತಿಯ ಕ್ರಿಮಿನಾಶಕಗಳನ್ನು ಹೊಂದಿಲ್ಲದೆ ಅತ್ಯಂತ ಸುರಕ್ಷಿತವಾಗಿರುತ್ತವೆ ಎನ್ನುವುದು ಸಾಮಾನ್ಯ ಅನಿಸಿಕೆ. ಆದರೆ, ಎಷ್ಟೋ ಬಾರಿ ಪರಿಸ್ಥಿತಿ ಹೀಗಿರುವುದಿಲ್ಲ. ಅವು ಕೆಮಿಕಲ್ ಫ್ರೀ ಆಗಿದ್ದರೂ ಅವುಗಳಲ್ಲೂ ಮಣ್ಣಿನಲ್ಲಿರುವ ಕೆಲವು ಸೂಕ್ಷ್ಮಾಣುಜೀವಿಗಳು ಇರಬಹುದು, ಅವೂ ಸಹ ನಮಗೆ ಹಾನಿಯುಂಟು ಮಾಡಬಹುದು. ಹೀಗಾಗಿ, ಮಾರುಕಟ್ಟೆಯಿಂದ ಸಾವಯವ ಆಹಾರವಸ್ತು ಖರೀದಿ ಮಾಡುವ ಮುನ್ನ ತುಸು ಎಚ್ಚರಿಕೆ ವಹಿಸುವುದು ಉತ್ತಮ.

ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿರುವ ಡಾ.ಪಳನಿಯಪ್ಪನ್ ಮಣಿಕ್ಕಮ್ ಎನ್ನುವ ಗ್ಯಾಸ್ಟ್ರೊಎಂಟರಾಲಜಿ ತಜ್ಞರೊಬ್ಬರು ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಮಾಹಿತಿ (Information) ಹಂಚಿಕೊಂಡಿದ್ದಾರೆ. ಅವು ನಿಜಕ್ಕೂ ಸಾವಯವ (Organic) ಗ್ರಾಹಕರ ಕಣ್ಣು ತೆರೆಸುವಂಥವು. ಎನ್ವಿರಾನ್ ಮೆಂಟಲ್ ವರ್ಕಿಂಗ್ ಗ್ರೂಪ್ (ಇಡಬ್ಲ್ಯೂಜಿ) ವರದಿಯನ್ನು ಅವರು ಉಲ್ಲೇಖಿಸಿದ್ದಾರೆ. ಇದರ ಪ್ರಕಾರ, ಸೂಪರ್ ಮಾರುಕಟ್ಟೆಗಳಲ್ಲಿ (Super Market) ದೊರೆಯುವ ಸಾವಯವ ಆಹಾರ ವಸ್ತುಗಳಲ್ಲಿ ಶೇ.70ರಷ್ಟು ಆಹಾರಗಳಲ್ಲಿ ಒಂದಲ್ಲ ಒಂದು ರೀತಿಯ ಕ್ರಿಮಿನಾಶಕಗಳು (Pesticides) ಇರುತ್ತವೆ. ಬೆಳೆಯಲು ಅವುಗಳನ್ನು ಬಳಕೆ ಮಾಡಿರುತ್ತಾರೆ ಎಂದಲ್ಲ. ಸಾಗಣೆಯ ಮಾರ್ಗದಲ್ಲಿ ಅಥವಾ ಸೂಪರ್ ಮಾರುಕಟ್ಟೆಗಳ ವ್ಯವಸ್ಥೆಯಲ್ಲಿ ಇವು ಸೇರಿಕೊಂಡಿರಲು ಸಾಧ್ಯ. ಅದರಲ್ಲೂ ಸ್ಟ್ರಾಬೆರಿ (Strawberry) ಹಾಗೂ ಹಸಿರು ಸೊಪ್ಪುಗಳಲ್ಲಿ (Green Leaf) ಈ ಸಮಸ್ಯೆ ಹೆಚ್ಚು. 

ಯಾವ ರೀತಿಯ ಸ್ಯಾನಿಟರಿ ಪ್ಯಾಡ್‌ ಒಳ್ಳೇದು ನೋಡಿ

ಬಾಡಿಹೋದ ತರಕಾರಿ (Vegetables) ಬೇಡ
ಸೂಪರ್ ಮಾರುಕಟ್ಟೆಗಳಲ್ಲಿ ದೊರೆಯುವ ಸಾವಯವ ಆಹಾರ ವಸ್ತುಗಳಲ್ಲಿ ತರಕಾರಿ ಮತ್ತು ಹಣ್ಣುಗಳ (Fruits) ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಇವು ಬಾಡಿ ಹೋಗಿರುವ ಸಾಧ್ಯತೆ ಅಧಿಕ. ಬಾಡಿ ಹೋದ ಆಹಾರ ವಸ್ತುಗಳಲ್ಲಿ ಹಲವು ಪೌಷ್ಟಿಕಾಂಶ (Nutrients) ನಾಶವಾಗಿರುತ್ತದೆ. ಅವು ರಾಸಾಯನಿಕಮುಕ್ತ (Chemical Free) ಎನ್ನುವುದೊಂದು ಬಿಟ್ಟರೆ ಹೆಚ್ಚಿನ ಪೌಷ್ಟಿಕ ಅಂಶದ ಲಾಭ ದೊರೆಯುವುದಿಲ್ಲ. ಇದಕ್ಕೆ ಪರಿಹಾರವೆಂದರೆ, ಸಮೀಪದಲ್ಲಿರುವ ರೈತರ ಹೊಲಗಳಿಗೆ (Farm) ಹೋಗಿ ಖರೀದಿ (Buy) ಮಾಡುವುದು. ಇತ್ತೀಚೆಗೆ ಬೆಂಗಳೂರಿನಂತಹ ನಗರಗಳಲ್ಲಿ ಈ ರೀತಿಯ ಹವ್ಯಾಸ ಹೆಚ್ಚುತ್ತಿರುವುದನ್ನು ಕಾಣಬಹುದು. ರೈತರ ಹೊಲಗಳಿಗೆ ನೇರವಾಗಿ ಭೇಟಿ ನೀಡಿ, ಅಲ್ಲಿಯೇ ವಾರಕ್ಕಾಗುವಷ್ಟು ಹಣ್ಣು, ತರಕಾರಿಗಳನ್ನು ಕೊಳ್ಳುವವರೂ ಇದ್ದಾರೆ. ಇದು ಅತ್ಯುತ್ತಮ ಮಾರ್ಗ. ಆಗ ತರಕಾರಿಗಳು ಫ್ರೆಶ್ ಆಗಿಯೂ ಇರುತ್ತವೆ, ಪೌಷ್ಟಿಕಾಂಶ ನಾಶವಾಗುವ ಭಯವೂ ಇರುವುದಿಲ್ಲ. 

ಸಾವಯವ ತರಕಾರಿ ಸೇವಿಸಿ ಅಂತಾರಲ್ಲ, ಆರೋಗ್ಯಕ್ಕೆ ಯಾಕೆ ಒಳ್ಳೇದು ಗೊತ್ತಿದ್ಯಾ ?

ಸ್ಥಳೀಯ ಬೆಳೆ (Local Products) ಕೊಂಡುಕೊಳ್ಳಿ
ಸಾವಯವ ಸ್ಟೋರ್ ಗಳಲ್ಲಿ ದೊರೆಯುವ ಹಣ್ಣು, ತರಕಾರಿಗಳಲ್ಲಿ ಪೌಷ್ಟಿಕಾಂಶ ಕಡಿಮೆ ಇರುವುದು ಸಹಜ. ಏಕೆಂದರೆ, 24 ಗಂಟೆಗಳ ಬಳಿಕ (After 24 Hours) ಹಣ್ಣು ಮತ್ತು ತರಕಾರಿಗಳಲ್ಲಿ ಪೌಷ್ಟಿಕಾಂಶ ಕುಂದಲು ಆರಂಭವಾಗುತ್ತದೆ. ಹೀಗಾಗಿ, ಸಮೀಪದ ತೋಟ, ಹೊಲಗಳಿಂದ ಸಾವಯವ ಪದಾರ್ಥ ಕೊಂಡುಕೊಳ್ಳುವುದು ಉತ್ತಮ. ಹಲವಾರು ತಜ್ಞರ ಪ್ರಕಾರ, ದೂರದ ಪ್ರದೇಶಗಳಿಂದ ಬರುವಂತಹ ಹಣ್ಣು, ತರಕಾರಿಗಳು ಮಾರ್ಗ ಮಧ್ಯವೇ ಪೌಷ್ಟಿಕಾಂಶರಹಿತವಾಗಿ ರೂಪುಗೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ, ಸ್ಥಳೀಯವಾಗಿ ಬೆಳೆಯುವ, ದೊರೆಯುವ ಹಾಗೂ ಆಯಾ ಋತುಮಾನಕ್ಕೆ (Seasonal) ಲಭ್ಯವಾಗುವ ಹಣ್ಣು, ತರಕಾರಿಗಳ ಸೇವನೆ ಮಾಡುವುದೇ ಬೆಸ್ಟ್. 

click me!