ರೋಹನ್ ಬೋಪಣ್ಣ ಟೆನಿಸ್ ಸಾಧನೆಗೆ ಕಾರಣವಾಯ್ತು ಅಯ್ಯಂಗಾರ್ ಯೋಗ

By Suvarna NewsFirst Published Jan 29, 2024, 11:22 AM IST
Highlights

ಯೋಗ ನಮ್ಮ ಮಾನಸಿಕ ಹಾಗೂ ದೈಹಿಕ ಎರಡೂ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. ಅನೇಕ ಆಟಗಾರರು, ತಾರೆಯರು ಯೋಗದ ಮಹತ್ವವನ್ನು ಅರಿತಿದ್ದಾರೆ. ಈಗ ರೋಹನ್ ಬೋಪಣ್ಣ ಕೂಡ ತಮ್ಮ ಸಾಧನೆಗೆ ಯೋಗ ಕಾರಣ ಎಂದಿದ್ದಾರೆ. 
 

ಭಾರತೀಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ತಮ್ಮ 43 ನೇ ವಯಸ್ಸಿನಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯನ್ ಓಪನ್ 2024ರಲ್ಲಿ ಪಾಲ್ಗೊಂಡಿದ್ದ ರೋಹನ್ ಬೋಪಣ್ಣ, ವೃತ್ತಿಜೀವನದ 500 ನೇ ಗೆಲುವನ್ನು ದಾಖಲಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ರೋಹನ್ ಬೋಪಣ್ಣ ಭಾರತದ ಅತ್ಯಂತ ಪ್ರತಿಷ್ಠಿತ ಟೆನಿಸ್ ವೃತ್ತಿಪರರಲ್ಲಿ ಒಬ್ಬರು. ಅವರು ಟೆನಿಸ್‌ನಲ್ಲಿ ತುಂಬಾ ಸಕ್ರಿಯ ಆಟಗಾರರಾಗಿದ್ದಾರೆ ಮತ್ತು ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಆಟದ ಶೈಲಿಯನ್ನು ಸಾಕಷ್ಟು ಬದಲಾಯಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ರೋಹನ್ ಬೋಪಣ್ಣ, ತಮ್ಮ ಈ ಗೆಲುವಿಗೆ ಮುಖ್ಯವಾಗಿ ಕಾರಣವಾಗಿದ್ದು ಏನು ಎಂಬುದನ್ನು ಹೇಳಿದ್ದಾರೆ. ಈ ಗೆಲುವಿನ ಹಿಂದೆ ಸಾಕಷ್ಟು ತ್ಯಾಗವಿದೆ. ಸಾಕಷ್ಟು ಜನರ ಬೆಂಬಲವಿದೆ ಎಂದಿದ್ದಾರೆ. ರೋಹಿತ್ ಬೋಪಣ್ಣಗೆ ನೆರವಾಗಿದ್ದು ಏನು ಎಂಬ ವಿವರ ಇಲ್ಲಿದೆ. 

ರೋಹನ್ ಬೋಪಣ್ಣ (Rohan Bopanna), 2019 ರಲ್ಲಿ, ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರು ಆಟದಿಂದ ಹೊರಗಿರಬೇಕಾಯ್ತು. ನೋವು ಕಡಿಮೆ ಮಾಡಿಕೊಳ್ಳಲು ಅವರು ನೋವು (Pain) ನಿವಾರಕಗಳ ಮೊರೆ ಹೋಗಿದ್ದರು. ಆಗಿನ ಹೋರಾಟ ಮತ್ತು ಅವರು ಮತ್ತೆ ಎದ್ದು ನಿಲ್ಲಲು ಕಾರಣವಾಗಿದ್ದು ಅಯ್ಯಂಗಾರ್ (Iyengar) ಯೋಗ ಎಂಬುದನ್ನು ಬೋಪಣ್ಣ ಹೇಳಿದ್ದಾರೆ. ಅವರ ಮೊಣಕಾಲುಗಳಲ್ಲಿ ಸವೆತ ಕಾಣಿಸಿತ್ತು. ಪಿಆರ್ ಪಿ ಮತ್ತು ಹೈಲುರಾನಿಕ್ ಚುಚ್ಚುಮದ್ದಿನ ಪ್ರಯತ್ನಗಳ ಹೊರತಾಗಿಯೂ ಅವರಿಗೆ ಯಾವುದೇ ಪರಿಹಾರ ಕಾಣಿಸಲಿಲ್ಲ. ಇದಾದ ಮುಂದಿನ ವರ್ಷ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಬೋಪಣ್ಣ ಅವರಿಗೆ ಒಂದು ಮಾರ್ಗ ಸಿಕ್ಕಿತು. ಅದೇ ಅಯ್ಯಂಗಾರ್ ಯೋಗ. ಇದು ಅವರ ಸಮಸ್ಯೆಗೆ ಪರಿಹಾರವಾಯ್ತು. ಯೋಗ ದೇಹದ ಜೋಡಣೆಗೆ ಒತ್ತು ನೀಡುತ್ತದೆ ಎಂಬುದನ್ನು ಅವರು ಪತ್ತೆ ಮಾಡಿದ್ರು. ಆ ನಂತ್ರ ಬೋಪಣ್ಣ ಅಯ್ಯಂಗಾರ್ ಯೋಗವನ್ನು ಪ್ರಯತ್ನಿಸಿದರು. ಇದು ಒಂದು ನಿರ್ದಿಷ್ಟ ರೀತಿಯ ಯೋಗ. ಇದು ದೊಡ್ಡ ವ್ಯತ್ಯಾಸವನ್ನು ಮಾಡಿದೆ ಎಂದು ಸಂದರ್ಶನದಲ್ಲಿ ಅವರು ಹೇಳಿದ್ದಾರೆ. 2020 ರಲ್ಲಿ ಸಾಂಕ್ರಾಮಿಕ ಸಮಯದಲ್ಲಿ, ನಾನು ಅಯ್ಯಂಗಾರ್ ಯೋಗವನ್ನು ಮಾಡಲು ಪ್ರಾರಂಭಿಸಿದೆ. ಅದು ನನ್ನ ಆರೋಗ್ಯದ ಮೇಲೆ ಭಾರಿ ಧನಾತ್ಮಕ ಪರಿಣಾಮ ಬೀರಿತು. ನಾನು ವಾರಕ್ಕೆ ನಾಲ್ಕು ಬಾರಿ 90 ನಿಮಿಷಗಳ ಅವಧಿಯನ್ನು ಇದಕ್ಕೆ ಮೀಸಲಿಟ್ಟಿದ್ದೇನೆ ಎಂದು ಬೋಪಣ್ಣ ಹೇಳಿದ್ದಾರೆ. 

ಪಿರಿಯಡ್ಸ್ ಡಿಲೇ ಮಾತ್ರೆ ತಗೋತಿದ್ದರೆ ಆರೋಗ್ಯಕ್ಕೆ ಕುತ್ತು ಬರೋದು ಗ್ಯಾರಂಟಿ!

ಅಯ್ಯಂಗಾರ್ ಯೋಗದ ಅಭ್ಯಾಸ ಅವರ ಕಾಲುಗಳು ಮತ್ತು ದೇಹವನ್ನು ಬಲಪಡಿಸಿದೆ. ಯೋಗ ಮಾನಸಿಕವಾಗಿ ನನ್ನನ್ನು ಸಾಕಷ್ಟು ಬಲಪಡಿಸಿದೆ ಎಂದು ಬೋಪಣ್ಣ ಹೇಳಿದ್ದಾರೆ. ಯೋಗದಿಂದ ಶಾಂತಿಯ ಭಾವ ಹುಟ್ಟಿಕೊಂಡಿದೆ. ಟೆನಿಸ್ ಅಂಕಣದಲ್ಲಿ ಯಾವುದೇ ಭಯದ ಭಾವನೆಯಿಲ್ಲದೆ ಆಡಲು ನನಗೆ ನೆರವಾಗಿದೆ. ಟೆನಿಸ್ ಆಟುವಾಗ ನಾನು ಆಲೋಚನೆ ಮಾಡ್ತಿದ್ದ ರೀತಿಯಿಂದಲೇ ಇದು ಸ್ಪಷ್ಟವಾಗಿದೆ ಎಂದು ಬೋಪಣ್ಣ ಹೇಳಿದ್ದಾರೆ. 

ಅಯ್ಯಂಗಾರ್ ಯೋಗ ಎಂದರೇನು?  : ಬಿಕೆಎಸ್ ಅಯ್ಯಂಗಾರ್  ಸ್ಥಾಪಿಸಿದ ಅಯ್ಯಂಗಾರ್ ಯೋಗವು 2500 ವರ್ಷಗಳ ಹಿಂದೆ ಪತಂಜಲಿ ಋಷಿ ವಿವರಿಸಿದ ಯೋಗದ ಸಾಂಪ್ರದಾಯಿಕ 8 ಅಂಗಗಳಲ್ಲಿ ಬೇರೂರಿದೆ. ಅಯ್ಯಂಗಾರ್, ಯೋಗವನ್ನು ದೈಹಿಕ ವ್ಯಾಯಾಮವನ್ನು ಮೀರಿ ಕಲೆ, ವಿಜ್ಞಾನ ಮತ್ತು ತತ್ವಶಾಸ್ತ್ರ ಎಂದು ನೋಡಿದ್ದರು. ಅಯ್ಯಂಗಾರ್ ಯೋಗವು ಎಲ್ಲಾ ವಯಸ್ಸಿನ ಮತ್ತು ಎಲ್ಲ ದೇಹಕ್ಕೆ  ಸೂಕ್ತವಾಗಿದೆ. ಅಯ್ಯಂಗಾರ್ ಯೋಗವು ನಿಖರತೆ, ಸಮಯ ಮತ್ತು ಅಯ್ಯಂಗಾರ್ ವಿನ್ಯಾಸಗೊಳಿಸಿದ ರಂಗಪರಿಕರಗಳ ಬಳಕೆಯನ್ನು ಕೇಂದ್ರೀಕರಿಸುತ್ತದೆ. ನಿಯಮಿತ ಅಭ್ಯಾಸದ ಮೂಲಕ ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಂಯೋಜಿಸುವಾಗ ಪ್ರತಿ ಆಸನದಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದು ಈ ಯೋಗ ಗುರಿಯಾಗಿದೆ.

ಏಳು ಬಣ್ಣಗಳ ಮಳೆಬಿಲ್ಲು ಚಹಾ; ಒಂದೊಂದು ಪದರಕ್ಕೊಂದು ರುಚಿ, ಸ್ವಾದ!

ಅಯ್ಯಂಗಾರ್ ಯೋಗವು ವಿಶ್ವಾದ್ಯಂತ ಪ್ರಚಲಿತದಲ್ಲಿದೆ. ಪ್ರಮಾಣೀಕೃತ ಅಯ್ಯಂಗಾರ್ ಯೋಗ ಶಿಕ್ಷಕರು (CIYT) ಕಠಿಣ ತರಬೇತಿಯನ್ನು ಪಡೆದು ನಂತ್ರ ತರಬೇತಿ ನೀಡುತ್ತಾರೆ.  ಭೌತಿಕ ದೇಹವನ್ನು ಮೀರಿ ಮನಸ್ಸು, ಶಕ್ತಿ ಮತ್ತು ಚೈತನ್ಯದ ಒಳ ಪದರಗಳಿಗೆ ತಲುಪಲು ಸಹಾಯ ಮಾಡುತ್ತದೆ. 

click me!