
ನವದೆಹಲಿ: ದೇಶಾದ್ಯಂತ ಪ್ರತಿವರ್ಷ ಲಕ್ಷಾಂತರ ಜನರನ್ನು ತೀವ್ರವಾಗಿ ಕಾಡುವ ಮತ್ತು ಪ್ರಾಣಹಾನಿ ಉಂಟುಮಾಡುವ ಸೊಳ್ಳೆ ಹೆಮ್ಮಾರಿ ಡೆಂಗ್ಯೂ (Dengue) ಜ್ವರಕ್ಕೆ ಭಾರತದಲ್ಲಿ ಕೊನೆಗೂ ಮೊದಲ ಅಧಿಕೃತ ಲಸಿಕೆ ಲಭ್ಯವಾಗಿದೆ. ಜಪಾನ್ ಮೂಲದ ಪ್ರಖ್ಯಾತ ‘ಟಕೆಡಾ ಬಯೋಫಾರ್ಮಾಸ್ಯುಟಿಕಲ್ಸ್’ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಕ್ಯೂಡೆಂಗಾ’ (Qdenga) ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (DCGI) ಅಧಿಕೃತ ಅನುಮೋದನೆ ನೀಡಿದೆ. ಈ ಮೂಲಕ ದೇಶದ ಸಾರ್ವಜನಿಕ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಭಾರತ ಸರ್ಕಾರ ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ.
‘ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗ ನಿಯಮಗಳು-2019’ರ ಅಡಿಯಲ್ಲಿ ಈ ಲಸಿಕೆಯನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅನುಮತಿ ನೀಡಲಾಗಿದೆ.
ಈ ಕ್ಯೂಡೆಂಗಾ ಲಸಿಕೆಯ ಅತ್ಯಂತ ದೊಡ್ಡ ವಿಶೇಷತೆಯೆಂದರೆ, ಇದನ್ನು ಪಡೆಯುವ ಮುನ್ನ ಯಾವುದೇ ಪೂರ್ವಭಾವಿ ರಕ್ತ ಪರೀಕ್ಷೆ ಅಥವಾ ಟೆಸ್ಟ್ ಡೋಸ್ ನೀಡುವ ಅಗತ್ಯವಿರುವುದಿಲ್ಲ. ವ್ಯಕ್ತಿಗೆ ಈ ಹಿಂದೆ ಡೆಂಗ್ಯೂ ಜ್ವರ ಬಂದಿತ್ತೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳದೆಯೂ ಈ ಲಸಿಕೆಯನ್ನು ನೇರವಾಗಿ ನೀಡಬಹುದು. ಈ ಸರಳ ನಿಯಮದಿಂದಾಗಿ ಡೆಂಗ್ಯೂ ಸೋಂಕು ಪೀಡಿತ (Endemic) ಮತ್ತು ಸೋಂಕುರಹಿತ (Non-Endemic) ಎರಡೂ ವಲಯಗಳ ಸಮುದಾಯಗಳಲ್ಲಿ ವ್ಯಾಪಕವಾಗಿ ಲಸಿಕೆ ವಿತರಿಸಲು ಆರೋಗ್ಯ ಇಲಾಖೆಗೆ ಸುಲಭವಾಗಲಿದೆ.
ಡೆಂಗ್ಯೂ ರೋಗವನ್ನು ಹರಡುವ ವೈರಸ್ನ ಒಟ್ಟು ನಾಲ್ಕೂ ತಳಿಗಳ (DEN-1, DEN-2, DEN-3, DEN-4) ವಿರುದ್ಧ ಈ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ. ಸಂಶೋಧನೆಗಳ ಪ್ರಕಾರ, ಈ 2 ಡೋಸ್ ಲಸಿಕೆಯನ್ನು ಪೂರ್ಣಗೊಳಿಸುವುದರಿಂದ ಡೆಂಗ್ಯೂ ರೋಗವನ್ನು ಶೇಕಡಾ 84.1 ರಷ್ಟು ನಿಯಂತ್ರಿಸಬಹುದಾಗಿದೆ. ಅಲ್ಲದೆ, ಸೋಂಕಿತರು ತೀವ್ರ ನಿಗಾ ಘಟಕ ಅಥವಾ ಆಸ್ಪತ್ರೆಗೆ ದಾಖಲಾಗುವುದನ್ನು ಇದು ಸಂಪೂರ್ಣವಾಗಿ ತಪ್ಪಿಸುತ್ತದೆ ಎಂದು 7 ವರ್ಷಗಳ ದೀರ್ಘಾವಧಿಯ ವೈದ್ಯಕೀಯ ದತ್ತಾಂಶಗಳು ದೃಢಪಡಿಸಿವೆ.
ಜಾಗತಿಕ ಮಟ್ಟದ ಹಾಗೂ ಭಾರತದ ಕ್ಲಿನಿಕಲ್ ಪರೀಕ್ಷೆಗಳ ಅತ್ಯುತ್ತಮ ಫಲಿತಾಂಶಗಳ ಆಧಾರದ ಮೇಲೆ ಡಿಸಿಜಿಐ ಈ ಅನುಮೋದನೆ ನೀಡಿದೆ. ಒಟ್ಟು 1, 2 ಮತ್ತು 3ನೇ ಹಂತದ 19 ಕ್ಲಿನಿಕಲ್ ಪ್ರಯೋಗಗಳಲ್ಲಿ 28,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಭಾರತದಲ್ಲೇ ಪ್ರತ್ಯೇಕವಾಗಿ ನಡೆಸಲಾದ ‘ಡೆನ್-302’ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ನ ಯಶಸ್ಸನ್ನು ಇಲ್ಲಿ ಪರಿಗಣಿಸಲಾಗಿದೆ.
"ಕ್ಯೂಡೆಂಗಾ ಲಸಿಕೆಯು ಡೆಂಗ್ಯೂ ಸೋಂಕು ಹಾಗೂ ಅದರ ನಾಲ್ಕೂ ರೂಪಾಂತರಿ ವೈರಸ್ಗಳಿಂದ ಜನರಿಗೆ ಗರಿಷ್ಠ ರಕ್ಷಣೆ ನೀಡುತ್ತದೆ. ಈಗಾಗಲೇ ವಿಶ್ವದ 43 ದೇಶಗಳಲ್ಲಿ ಈ ಲಸಿಕೆಗೆ ಮಾನ್ಯತೆ ದೊರೆತಿದ್ದು, ಜಾಗತಿಕವಾಗಿ 3.2 ಕೋಟಿಗೂ ಹೆಚ್ಚು ಡೋಸ್ಗಳನ್ನು ಜನರಿಗೆ ನೀಡಲಾಗಿದೆ. ಈಗ ಭಾರತದಲ್ಲೂ ಇದರ ಬಳಕೆಗೆ ಹಸಿರು ನಿಶಾನೆ ಸಿಕ್ಕಿರುವುದು ಹೆಮ್ಮೆಯ ವಿಚಾರ," ಎಂದು ಟಕೆಡಾ ಸಂಸ್ಥೆಯ ಮಾರುಕಟ್ಟೆ ಮುಖ್ಯಸ್ಥ ಮಹೇಂದರ್ ನಾಯಕ್ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ಲೆಕ್ಕಾಚಾರದ ಪ್ರಕಾರ, ಪ್ರಸ್ತುತ ಜಗತ್ತಿನ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ ಭಾರತದ ಪಾಲು ಮೂರನೇ ಒಂದರಷ್ಟಿದೆ (1/3rd). ಭಾರತದಲ್ಲಿ ಅಧಿಕೃತ ದಾಖಲೆಗಳ ಪ್ರಕಾರ ಪ್ರತಿ ವರ್ಷ ಸರಾಸರಿ 150 ರಿಂದ 300 ಜನರು ಡೆಂಗ್ಯೂನಿಂದ ಸಾವನ್ನಪ್ಪುತ್ತಿದ್ದಾರೆ. ಆದರೆ ಅನಧಿಕೃತವಾಗಿ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಡೆಂಗ್ಯೂ ಭಾರಿ ರಣಕೇಕೆ ಹಾಕುತ್ತದೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಗೆ ಬಂದಿರುವ ಈ ಹೊಸ ಲಸಿಕೆಯು ಸಾರ್ವಜನಿಕರ ಜೀವ ಉಳಿಸುವಲ್ಲಿ ಮತ್ತು ದೇಶವನ್ನು ಡೆಂಗ್ಯೂ ಮುಕ್ತವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ವೈದ್ಯಕೀಯ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.