ದೇಶದಲ್ಲಿ ಮತ್ತೆ ವಕ್ಕರಿಸಿದ ಮಹಾಮಾರಿ, ಇದು ಕೊರೋನಾ ನಾಲ್ಕನೇ ಅಲೆನಾ?

By Kannadaprabha NewsFirst Published Dec 21, 2023, 8:27 AM IST
Highlights

ಕೊರೋನಾ ಸೋಂಕು ಏರಿಕೆಯಾಗುತ್ತಿದೆ ಎಂಬ ಆತಂಕದ ನಡುವೆಯೇ ದೇಶದಲ್ಲಿ ಬುಧವಾರ ಒಂದೇ ದಿನ 614 ಪ್ರಕರಣಗಳು ಪತ್ತೆಯಾಗಿದ್ದು, ಇದು 7 ತಿಂಗಳಲ್ಲೇ ಗರಿಷ್ಠವಾಗಿದೆ. ಮತ್ತೊಂದೆಡೆ, ಅತಿ ಹೆಚ್ಚು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕೇರಳದ ನಂತರದ ಸ್ಥಾನದಲ್ಲಿ ಕರ್ನಾಟಕ ಇರುವುದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ.

ದೇಶದಲ್ಲಿ ಹೊಸ ಕೋವಿಡ್‌ ಪ್ರಕರಣಗಳು ಏರುಮುಖವಾಗಿರುವ ನಡುವೆಯೇ, ರಾಜ್ಯದಲ್ಲೂ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದ್ದು ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ ಏರಿದೆ. 2041 ಸಕ್ರಿಯ ಪ್ರಕರಣಗಳೊಂದಿಗೆ ನೆರೆಯ ಕೇರಳ ಮೊದಲ ಸ್ಥಾನದಲ್ಲಿದ್ದರೆ, 92 ಪ್ರಕರಣಗಳೊಂದಿಗೆ ಕರ್ನಾಟಕ 2ನೇ ಸ್ಥಾನ ತಲುಪಿರುವುದು ಆತಂಕ ಮೂಡಿಸಿದೆ. ದೇಶದಲ್ಲಿ ನಿತ್ಯ ಸರಾಸರಿ 310 ಪ್ರಕರಣಗಳು ವರದಿಯಾಗುತ್ತಿವೆ. ಪರಿಣಾಮ ಡಿ.6ರಂದು ಕೇವಲ 587 ಇದ್ದ ಸಕ್ರಿಯ ಪ್ರಕರಣ ಡಿ.20ರ ಮಧ್ಯಾಹ್ನ 12 ಗಂಟೆ ವೇಳೆಗೆ 2311ಕ್ಕೆ ತಲುಪಿದೆ. ಅಂದರೆ ಕೇವಲ ಎರಡೇ ವಾರದಲ್ಲಿ ಆರು ಪಟ್ಟು ಹೆಚ್ಚಾಗಿದೆ.

ದಿನೇ ದಿನೇ ಸೋಂಕು ಹೆಚ್ಚಳ:
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಶೇ.1.72 ಪಾಸಿಟಿವಿಟಿ ದರದಂತೆ ಸರಾಸರಿ 17 ಪ್ರಕರಣ ವರದಿಯಾಗುತ್ತಿವೆ. ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಈ ಪೈಕಿ ಡಿ.18 ರಂದು ಒಂದೇ ದಿನ 27 ಪ್ರಕರಣ ವರದಿಯಾಗಿದ್ದರೆ, ಡಿ.19 ರಂದು 44 ಪ್ರಕರಣ ವರದಿಯಾಗಿವೆ. ಡಿ.20 ರಂದು 22 ಪ್ರಕರಣ ವರದಿಯಾಗಿವೆ.

Latest Videos

ಒಂದೇ ದಿನ ಬೆಂಗ್ಳೂರಲ್ಲಿ 19 ಕೊರೋನಾ ಕೇಸ್‌ ಪತ್ತೆ

7 ಮಂದಿ ಐಸಿಯುನಲ್ಲಿ:
ರಾಜ್ಯದಲ್ಲಿನ 92 ಸೋಂಕಿತರಲ್ಲಿ 72 ಮಂದಿ ಹೋಂ ಐಸೊಲೇಷನ್‌ನಲ್ಲೇ ಇದ್ದಾರೆ. ಉಳಿದಂತೆ 20 ಮಂದಿ ಆಸ್ಪತ್ರೆಯಲ್ಲಿದ್ದು ಈ ಪೈಕಿ 7 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ.19ರ ವರದಿ ಪ್ರಕಾರ ಗರಿಷ್ಠ ಕೊರೋನಾ ಪರೀಕ್ಷೆಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 2,394, ಕರ್ನಾಟಕದಲ್ಲಿ 1,112 (ಡಿ.20 ರಂದು 808), ಕೇರಳದಲ್ಲಿ 1,094 ಪರೀಕ್ಷೆ ನಡೆಸಲಾಗಿದೆ.

ವಿಶ್ವದಾದ್ಯಂತ ನಿತ್ಯ 51,214 ಸರಾಸರಿ ವರದಿಯಾಗುತ್ತಿದ್ದು 2.16 ಕೋಟಿ ಸಕ್ರಿಯ ಸೋಂಕಿತರು ವಿಶ್ವದಾದ್ಯಂತ ಇದ್ದಾರೆ. ಈ ಪೈಕಿ ಬ್ರೆಜಿಲ್‌ 11.73 ಲಕ್ಷ, ಅಮೆರಿಕ 9.89 ಲಕ್ಷ, ವಿಯೆಟ್ನಾಂ 9.39 ಲಕ್ಷದಷ್ಟಿದೆ. ವಿಶ್ವದ ಒಟ್ಟಾರೆ ಪ್ರಕರಣಗಳಲ್ಲಿ ಭಾರತದಲ್ಲಿ ಶೇ.0.009 ರಷ್ಟು ಮಾತ್ರ ಇವೆ. ಹೀಗಾಗಿ ಯಾವುದೇ ರೀತಿಯ ಆತಂಕ ಪಡಬೇಕಾಗಿಲ್ಲ. ಆದರೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಬರಿಮಲೆಯಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ: ಸಚಿವ ರಾಜಣ್ಣ

ದೇಶದಲ್ಲಿ ಜೆಎನ್‌.1 ತಳಿಯ 21 ಕೋವಿಡ್‌ ಕೇಸು ದಾಖಲು
ಕೋವಿಡ್‌ ಸೋಂಕಿನ ರೂಪಾಂತರಿಯಾದ ಜೆಎನ್‌.1 ತಳಿಯಿಂದ ದೇಶದಲ್ಲಿ ಕೇರಳದಲ್ಲಿ ಮಾತ್ರವಲ್ಲ, ಈವರೆಗೆ 3 ರಾಜ್ಯಗಳಲ್ಲಿ 21 ಮಂದಿ ಈ ತಳಿಯ ಸೋಂಕಿಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ.ವಿ.ಕೆ.ಪಾಲ್‌, ಈ ತಳಿಯಿಂದ ಈವರೆಗೆ ಗೋವಾದಲ್ಲಿ 19 ಮಂದಿ ಹಾಗೂ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಒಬ್ಬರು ಸೋಂಕಿಗೆ ತುತ್ತಾಗಿದ್ದಾರೆ ಎಂದಿದ್ದಾರೆ. 

ಆದರೆ, ಈ ಸೋಂಕಿನ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ. ಹೊಸ ತಳಿಯ ಕುರಿತಾಗಿ ಭಾರತದ ವೈಜ್ಞಾನಿಕ ಸಮುದಾಯ ವಿಷದವಾಗಿ ಅಧ್ಯಯನ ನಡೆಸುತ್ತಿದೆ. ಅಲ್ಲದೇ ಈ ಸೋಂಕಿಗೆ ತುತ್ತಾದವರಲ್ಲಿ ಶೇ.90ರಷ್ಟು ಜನರು ಮನೆಯಲ್ಲೇ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಇದೇ ವೇಳೆ, ಕಳೆದ 2 ವಾರದಲ್ಲಿ 19 ಕೋವಿಡ್‌ ಸಂಬಂಧಿ ಸಾವುಗಳು ಸಂಭವಿಸಿವೆ. ಆದರೆ ಇವರಲ್ಲಿ ಪೂರ್ವರೋಗಪೀಡಿತರೇ ಹೆಚ್ಚು. ಕೋವಿಡ್‌ ಅವರಿಗೆ ಬಂದಿದ್ದು ಕಾಕತಾಳೀಯ ಎಂದು ಸ್ಪಷ್ಟಪಡಿಸಿದ್ದಾರೆ.

click me!